ಸಿರುಗುಪ್ಪ ಮಹಾಂಕಾಳಿಯ ಶೌಚಾಲಯ ನಿರ್ಮಾಣ ಹೋರಾಟದ ಸಾಹಸ ಗಾಥೆ
ಬಳ್ಳಾರಿ, ಫೆಬ್ರವರಿ 26: 'ಸ್ವಚ್ಛಭಾರತ' ಅಭಿಯಾನ ದೇಶದಲ್ಲಿ ಅನೇಕ ಕಡೆ ಹೋರಾಟದ ಕಿಡಿಯನ್ನು ಹಚ್ಚಿದೆ. ಕೆಲ ವಿದ್ಯಾರ್ಥಿನಿಯರು, ಗೃಹಿಣಿಯರು ಅನ್ನ- ನೀರು ಬಿಟ್ಟು, ಮಾಧ್ಯಮಗಳ ಗಮನ ಸೆಳೆದು, ಹೋರಾಟ ನಡೆಸಿ ಶೌಚಾಲಯ ನಿರ್ಮಾಣದ ಬೇಡಿಕೆ ಈಡೇರಿಕೊಂಡ ನಿದರ್ಶನಗಳು ನಾಡಿನಾದ್ಯಂತ ಇವೆ.
ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ 7ನೇ ತರಗತಿಯ ತಾಳೂರು ಗ್ರಾಮದ ಸರಕಾರಿ ಶಾಲೆಯ ದಲಿತ ವಿದ್ಯಾರ್ಥಿನಿಯದು ಮತ್ತೊಂದು ಉದಾಹರಣೆ. ಮಹಾಂಕಾಳಿ ಆ ವಿದ್ಯಾರ್ಥಿನಿ ಹೆಸರು. ಆಕೆಯ ಶಾಲೆಯಲ್ಲಿ ನಡೆದ 'ಸ್ವಚ್ಛ ಭಾರತ' ಕಾರ್ಯಕ್ರಮದಲ್ಲಿ ಶೌಚಾಲಯ ನಿರ್ಮಾಣದ ಅನಿವಾರ್ಯ ಮತ್ತು ಅಗತ್ಯ, ಅದರ ಬಳಕೆಯ ಅನುಕೂಲಗಳ ತಿಳಿಸಲಾಗಿತ್ತು.
ಆ ಜಾಗೃತಿ ಶಿಬಿರದಿಂದ ಪ್ರೇರಣೆ ಪಡೆದು, ಹೋರಾಟದ ಕಿಡಿಯನ್ನು ಹೊತ್ತಿಸಿಕೊಂಡ ಆಕೆ, ಶೌಚಾಲಯದ ನಿರ್ಮಾನಕ್ಕೆ ಪಟ್ಟು ಹಿಡಿದಳು. ಅನ್ನ, ನೀರು ಬಿಟ್ಟು ಮನೆಯಲ್ಲಿ ಅನೇಕರ ಮನ ಪರಿವರ್ತಿಸಿದಳು. ಗ್ರಾಮದ ಅನೇಕರ ಗಮನ ಸೆಳೆದು ಶೌಚಾಲಯ ಕಟ್ಟಿಸಿಕೊಳ್ಳುವ ಮೂಲಕ ಹಿಡಿದ ಪಟ್ಟು ಸಾಧಿಸಿದ್ದಾಳೆ.

ಮಹಾಂಕಾಳಿಯು ಕುಟುಂಬದವರು ಹಾಗೂ ಗ್ರಾಮ ಪಂಚಾಯಿತಿಯ ಮನವೊಲಿಸಿದ್ದಾಳೆ. ತನ್ನ ಪುಟ್ಟ ಗುಡಿಸಲು ಬಳಿ ಶೌಚಾಲಯ ನಿರ್ಮಾಣಕ್ಕೆ ಮುಂದಾದಾಗ ತಾನೇ ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ಖುದ್ದು ತೊಡಗಿಸಿಕೊಂಡಿದ್ದಾಳೆ.
ಹರಿಜನ ಮಲ್ಲೇಶ್ ಅವರ ಮಗಳು ಮಹಾಂಕಾಳಿ ಅನ್ನ - ನೀರು ಬಿಟ್ಟು ಶೌಚಾಲಯ ನಿರ್ಮಾಣಕ್ಕೆ ಹೋರಾಟ ನಡೆಸಿದ್ದು ಗೊತ್ತಾಯಿತು. ಆ ಕೂಡಲೇ ನಾವು ಸ್ಥಳಕ್ಕೆ ಭೇಟಿ ನೀಡಿ, ಸರಕಾರಿ ಅನುದಾನ ನೀಡಿ, ಶೌಚಾಲಯ ಕಟ್ಟಿಸಿಕೊಳ್ಳಲು ನೆರವಾದೆವು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಅಧ್ಯಕ್ಷ ರಾಜಗೋಪಾಲ ರೆಡ್ಡಿ ಮತ್ತು ಸದಸ್ಯರು.

ಮಹಿಳೆಯರು ಬಯಲು ಬಹಿರ್ದೆಸೆಯಿಂದ ಪದ್ಧತಿಯನ್ನು ಸ್ವಯಂ ಕೈಬಿಡಬೇಕು. ಸರಕಾರ ನೀಡುವ ಅನುದಾನ ಪಡೆದು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಪ್ರತಿಯೊಬ್ಬ ಮಹಿಳೆ, ಬಾಲಕಿ, ಮತ್ತು ನಾಗರೀಕರು ಬಯಲು ಶೌಚಾಲಯ ಬಿಟ್ಟು, ಮರ್ಯಾದೆಯಿಂದ ಬದುಕುವುದನ್ನು ಕಲಿಯಬೇಕು ಎನ್ನುತ್ತಾಳೆ ವಿದ್ಯಾರ್ಥಿನಿ ಮಹಾಂಕಾಳಿ.
ನನ್ನ ಮಗಳ ಧೈರ್ಯವನ್ನು ಮೆಚ್ಚುವಂಥದ್ದು. ನಮ್ಮ ಮನೆಯ ಮಗಳು ಯಾವುದೇ ಆತಂಕ, ಅಂಜಿಕೆ ಇಲ್ಲದೇ ಅನ್ನ - ನೀರು ಬಿಟ್ಟು ಉಪವಾಸ ಕೂತಾಗ ನಾನೂ ಬೇಸರಗೊಂಡಿದ್ದೆ. ಶೌಚಾಲಯ ನಿರ್ಮಾಣ ಆದಾಗ, ಶಹಬ್ಬಾಶ್ ಎಂದೆ ಎನ್ನುತ್ತಾರೆ ಬಾಲಕಿಯ ತಂದೆ ಎಚ್. ಮಲ್ಲೇಶ್.












Click it and Unblock the Notifications