ನೀರಿನಂಥ ಸಾರು, ಗಲೀಜು: ಹಾಸ್ಟೆಲ್ ಹುಡುಗರದ್ದು ಹಲವಾರು ಸಮಸ್ಯೆ
ಬಳ್ಳಾರಿ, ಜನವರಿ 18: ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬಳ್ಳಾರಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ವಿವಿಧ ಸರ್ಕಾರಿ ಕಛೇರಿಗಳಿಗೆ ಅವರು ದಿಢೀರ್ ಭೇಟಿ ನೀಡುತ್ತಿದ್ದು, ಅಧಿಕಾರಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಿಲ್ಲಾ ಆಸ್ಪತ್ರೆ, ಮಹಾನಗರ ಪಾಲಿಕೆ ಕಛೇರಿಗಳಿಗೆ ಅವರು ಭೇಟಿ ಕೊಟ್ಟು ಅಧಿಕಾರಿಗಳ ಕಾರ್ಯ ವೈಖರಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಶನಿವಾರ ಮುಂಜಾನೆ ಬಳ್ಳಾರಿ ನಗರದ ಮಯೂರ ಹೋಟೆಲ್ ಹಿಂಭಾಗದ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಹಾಸ್ಟೆಲ್ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಂದ ವ್ಯವಸ್ಥೆಗಳ ಕುರಿತು ಮಾಹಿತಿಯನ್ನು ಪಡೆದರು.

ನೀರಿನಂಥ ಸಾರು, ಗಲೀಜು: ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳು ನಮಗೆ ಮಲಗಲು ಬೆಡ್ ವ್ಯವಸ್ಥೆ ಇಲ್ಲ. ಸ್ನಾನಕ್ಕೆ ಬಿಸಿ ನೀರು ಇಲ್ಲ, ಸಾರು ನೀರಿನಂತಿರುತ್ತದೆ, ವೇಳಾಪಟ್ಟಿಯಂತೆ ಅಡುಗೆ ಮಾಡುವುದಿಲ್ಲ ಎಂದು ಅವ್ಯವಸ್ಥೆಗಳನ್ನು ಹೇಳಿದರು.
ರಾತ್ರಿಯಾದರೆ ಹಾಸ್ಟೆಲ್ಗೆ ಅನಧೀಕೃತ ವ್ಯಕ್ತಿಗಳು ಬರುತ್ತಾರೆ, ಗಲಾಟೆ ಮಾಡುತ್ತಾರೆ. ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ವಾರ್ಡನ್ ವಿದ್ಯಾರ್ಥಿ ನಿಲಯಕ್ಕೆ ವಾರದಲ್ಲಿ ಒಮ್ಮೆ ಬರುತ್ತಾರೆ. ಬಟ್ಟೆ ತೊಳೆಯುವ ಸ್ಥಳದಲ್ಲಿ ಗಲೀಜು ತುಂಬಿರುತ್ತದೆ. ಹಲವು ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆಗಳನ್ನು ತಿಳಿಸಿದರು.
ಹಾಸ್ಟೆಲ್ ಕೋಣೆ, ಆಹಾರ ದಾಸ್ತಾನು ಗಮನಿಸಿ ಅಸಮಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ರಾಜ್ಯ ಸರ್ಕಾರವು ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಮಕ್ಕಳಿಗೆ ಊಟ, ವಸತಿ, ರಕ್ಷಣೆ ಸೇರಿದಂತೆ ಮೂಲಭೂತ ಸೌಕರ್ಯಗಳು ಒದಗಿಸಲು ಏನು ಸಮಸ್ಯೆಯಾಗುತ್ತಿದೆ? ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಅವ್ಯವಸ್ಥೆ ನೋಡಿ ವಸತಿ ನಿಲಯದ ನಿಲಯಪಾಲಕರ ಅಮಾನತು ಮಾಡಲು ಸೂಚನೆ ನೀಡಿದರು.
ವಿದ್ಯಾರ್ಥಿಗಳ ಜೊತೆ ಸಂವಾದ: ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಅಡುಗೆ ಕೋಣೆ, ಆಹಾರ ದಾಸ್ತಾನು ಕೋಣೆ, ವಿದ್ಯಾರ್ಥಿಗಳ ವಸತಿ ಗೃಹ ಪರಿಶೀಲಿಸಿದರು. ಅಧಿಕಾರಿಗಳು, ವಾರ್ಡನ್, ಅಡುಗೆದಾರರು ಮತ್ತು ವಿದ್ಯಾರ್ಥಿಗಳಿಂದ ಮಾಹಿತಿಗಳನ್ನು ಪಡೆದರು.
ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಮರ್ಪಕ ವ್ಯವಸ್ಥೆ ಮಾಡಬೇಕು. ಕಾಲಕಾಲಕ್ಕೆ ವಸತಿ ನಿಲಯಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ನ್ಯಾಯಮೂರ್ತಿ ಬಿ. ವೀರಪ್ಪ ಸೂಚನೆ ಕೊಟ್ಟರು.
ಸರ್ಕಾರಿ ಮೆಟ್ರಿಕ್ಪೂರ್ವ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆ ಸಂವಾದ ನಡೆಸಿದರು. ಗುಣಮಟ್ಟದ ಹಾಲು ವಿತರಣೆ ಮಾಡುತ್ತಾರೆಯೇ?, ಊಟ ಚೆನ್ನಾಗಿರುತ್ತದೆಯೇ?, ಸ್ನಾನ ಹಾಗೂ ಶೌಚಾಲಯದ ಕೊಠಡಿಗಳು ಸ್ವಚ್ಛವಾಗಿವೆಯೇ?, ಬಿಸಿ ನೀರು ಬರುತ್ತಿದೆಯೇ?, ರಾತ್ರಿ ವೇಳೆ ಸೊಳ್ಳೆ ಕಾಟವಿದೆಯೇ? ಎಂದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಹಾಸ್ಟೆಲ್ನಲ್ಲಿ ದೇಶದ ಗಣ್ಯ ವ್ಯಕ್ತಿಗಳ ಚಿತ್ರಗಳನ್ನು ವೀಕ್ಷಣೆ ಮಾಡಿದರು. ಕೈಗಳಿದ ಬಿಡಿಸಿದ ಚಿತ್ರಗಳನ್ನು ವಿರೂಪಗೊಳಿಸುವಂತಿಲ್ಲ. ಅದು ನಾವು ಅವರಿಗೆ ಅವಮಾನ ಎಂದು ನಿಲಯದ ಪಾಲಕರಿಗೆ ತಿಳಿಸಿದರು.












Click it and Unblock the Notifications