Vims Hospital Ballari : ವಿದ್ಯುತ್ ವ್ಯತ್ಯಯ, ಆಕ್ಸಿಜನ್ ಕೊರತೆಯುಂಟಾಗಿ ಇಬ್ಬರ ಸಾವು; ವಿಮ್ಸ್ ನಿರ್ದೇಶಕ ಹೇಳಿದ್ದೇನು?
ಬಳ್ಳಾರಿ, ಸೆಪ್ಟೆಂಬರ್ 14 : ವಿಜಯಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತೆಯಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಜನರೇಟರ್ ಕೆಲಸ ಮಾಡದೇ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯಾಗಿ ಇಬ್ಬರು ಒಳರೋಗಿಗಳು ಮೃತರಾಗಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.
ಮೃತರನ್ನು ಮೌಲಾ ಹುಸೇನ್ ಮತ್ತು ಚಿಟ್ಟೆಮ್ಮ ಎಂದು ಗುರುತಿಸಲಾಗಿದೆ. ಮೌಲಾ ಅವರಿಗೆ ಮೂತ್ರಪಿಂಡ ಸೇರಿದಂತೆ ಗಂಭೀರ ಸಮಸ್ಯೆಗಳಿದ್ದವು. ಚಿಟ್ಟೆಮ್ಮ ಅವರಿಗೆ ಹಾವು ಕಡಿದಿತ್ತು. ಈ ಇಬ್ಬರು ರೋಗಿಗಳು ಆಕ್ಸಿಜನ್ ಕೊರತೆಯುಂಟಾಗಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವಿಡಿಯೋ ಮಾಡಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಇದೊಂದು ಅತಿ ದೊಡ್ಡ ದುರಂತ ಎಂದೇ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿತ್ತು. ಎಕ್ಸ್ಪ್ರೆ ಸ್ಲೈನ್ ಸೌಲಭ್ಯ ಇದ್ದಾಗಲೂ ಕೂಡ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ ಆಗಿದ್ದು ಹೇಗೆ? ಸದರಿ ಘಟನೆಯು ಮಂಗಳವಾರ ನಡೆದಿದ್ದು, ಎರಡು- ಮೂರು ತಾಸುಗಳ ಕಾಲ ಕರೆಂಟ್ ಕಟ್ ಎಂದು ಆರೋಪಿಸಲಾಗಿತ್ತು.

ಬುಧವಾರ ಬೆಳಿಗ್ಗೆ 8.20ರಿಂದ 10 ಗಂಟೆವರೆಗೆ ಕರೆಂಟ್ ಹೋಗಿತ್ತು. ಇದಕ್ಕೆ ಪರ್ಯಾಯವಾಗಿ ಜನರೇಟರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಜನರೇಟರ್ ಕೆಲಸ ಮಾಡದೇ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ ಎನ್ನಲಾಗಿತ್ತು.
ನಿರ್ದೇಶಕ ಹೇಳಿದ್ದೇನು?
ಈ ದಿನ ವಿಮ್ಸ್ ಆಸ್ಪತ್ರೆಯಲ್ಲಿ ಆಗಿರುವ ಸಾವುಗಳು ವಿವಿಧ ತೀವ್ರತರದ ಆರೋಗ್ಯ ಸಮಸ್ಯೆ ಗಳಿಂದ ಸಂಭವಿಸಿವೆ. ಒಬ್ಬ ರೋಗಿಯು ವಿಷಪೂರಿತ ಹಾವಿನ ಕಡಿತದಿಂದ ದೇಹದಲ್ಲಿ ಆಂತರಿಕ ರಕ್ತಸ್ರಾವವಾಗಿ ಸಾವಿಗೀಡಾಗಿದ್ದರೆ, ಇನ್ನೊಬ್ಬ ಮೃತರು ಬಹು ಅಂಗಾಗ ವೈಫಲ್ಯದಿಂದ ನಮ್ಮ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ, ಕೊನೆಗೆ ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿರುತ್ತಾರೆ. ಹಾಗೆಯೇ ಮತ್ತೊಬ್ಬ ರೋಗಿಯು ಹಲವಾರು ದಿನಗಳಿಂದ ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದು ಕೊನೆಗೆ ಬಹು ಅಂಗಾಗಳ ಸೋಂಕಿನಿಂದ ಸಹಜ ಸಾವನ್ನಪ್ಪಿದ್ದಾರೆ.
ವಿಮ್ಸ್ ಆಸ್ಪತ್ರೆಯು ಉನ್ನತ ಚಿಕಿತ್ಸಾ ಕೇಂದ್ರವಾಗಿದ್ದು ಎಲ್ಲಾ ಕೇಂದ್ರಗಳಲ್ಲಿ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಕೊನೆಗೆ ಪರಿಸ್ಥಿತಿ ಉಲ್ಬಣಗೊಂಡ ನಂತರ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುವುದರಿಂದ ಸಾವುಗಳುಂಟಾಗುವ ಸಂಭವನೀಯತೆ ಹೆಚ್ಚಾಗುತ್ತಿದೆ.
ಬುಧವಾರ ಬೆಳಗ್ಗೆ ರೋಗಿಗಳ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದ ಸಮಯದಲ್ಲಿ ವಿದ್ಯುತ್ ಸಂಪರ್ಕ ಕೈಕೊಟ್ಟಿರುವುದು ಕಾಕತಾಳೀಯವಾಗಿದೆ. ವಿಮ್ಸ್ ಆಸ್ಪತ್ರೆ ಯಾವಾಗಲೂ ರೋಗಿಗಳ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತದೆ ಎಂದು ಈ ಮೂಲಕ ಸಾರ್ವಜನಿಕರಿಗೆ ಹಾಗೂ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡುತ್ತೇನೆ ಎಂದು ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ ಹೇಳಿಕೆ ನೀಡಿದ್ದಾರೆ.












Click it and Unblock the Notifications