ಹಂಪಿ ಪ್ರವಾಸಿಗರಲ್ಲಿ ಭಯ ಮೂಡಿಸಿದ 2 ಚಿರತೆ
ಬಳ್ಳಾರಿ, ಫೆಬ್ರವರಿ 16: ಹೊಸಪೇಟೆ ತಾಲ್ಲೂಕಿನ ಪ್ರವಾಸ ಪ್ರಸಿದ್ಧ ಕ್ಷೇತ್ರ ಹಂಪಿಯಲ್ಲಿ ಇದ್ದಕ್ಕಿದ್ದಂತೆ ಎರಡು ಚಿರತೆಗಳು ಕಾಣಿಸಿಕೊಂಡಿದ್ದು ಪ್ರವಾಸಿಗರು ಮತ್ತು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಹಂಪಿ ದೇವಾಲಯದ ಸಮೀಪವಿರುವ ಬಂಡೆ ಮಧ್ಯದಲ್ಲಿ ಗುರುವಾರ ಎರಡು ಚಿರತೆಗಳು ಪ್ರತ್ಯಕ್ಷವಾಗಿ ಪ್ರವಾಸಿಗರ ಭೀತಿಗೆ ಕಾರಣವಾಗಿದೆ. ಕಲ್ಲಿನ ಹಿಂದೆ ಹೋಗುತ್ತಾ ಆಗಾಗ ಮುಖವನ್ನು ಈಚೆ ಹಾಕಿ ದರ್ಶನವನ್ನು ನೀಡುತ್ತಾ ನೆರೆದಿದ್ದ ಜನರಿಗೆ ಕುತೂಹಲ- ಆತಂಕ ಮೂಡಿಸಿದೆ.[ಮೈಸೂರು ನಗರಕ್ಕೆ ಲಗ್ಗೆಯಿಟ್ಟ ಚಿರತೆ, ದಂಗಾದ ಜನತೆ]
ಪ್ರವಾಸಿ ತಾಣದ ಸಮೀಪ ಚಿರತೆ ಬಂದಿರುವುದರಿಂದ ಕೆಲ ಪ್ರವಾಸಿಗರೂ ಹಂಪಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯನ್ನು ಹಿಡಿಯಲು ಮುಂದಾಗಿದ್ದಾರೆ.
ಇದೇ ಸ್ಥಳದಲ್ಲಿ ಹಿಂದಿನ ವಾರ ಒಂದು ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು. ಪ್ರಸ್ತುತ ಮತ್ತೆರಡು ಚಿರತೆಗಳು ಇಲ್ಲಿ ಕಾಣಿಸಿಕೊಂಡಿರುವುದು ಜನರಲ್ಲಿ ಭಯವನ್ನುಂಟು ಮಾಡಿದೆ.