ಪ್ರಭಾವಿ ನಾಯಕರ ಮಗನ ಕಾರು ಅಪಘಾತ; ಬಳ್ಳಾರಿಯಲ್ಲಿ ಇಬ್ಬರ ಸಾವು
ಬಳ್ಳಾರಿ, ಫೆಬ್ರವರಿ 12: ಪ್ರಭಾವಿ ನಾಯಕರೊಬ್ಬರಿಗೆ ಸೇರಿದ ಕಾರು ಅಪಘಾತವಾಗಿ ಸ್ಥಳದಲ್ಲಿ ಪಾದಚಾರಿ ಸೇರಿದಂತೆ ಇಬ್ಬರು ಸಾವಿಗೀಡಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮರ್ಸಿಡಿಸ್ ಬೆಂಜ್ ಕಾರ್ ಇದ್ದಾಗಿದ್ದು, ಈಗಿನ ಸರ್ಕಾರದ ಪ್ರಭಾವಿ ನಾಯಕರ ಪುತ್ರ ಈ ಕಾರನ್ನು ಚಲಾಯಿಸುತ್ತಿದ್ದ ಎನ್ನಲಾಗಿದೆ. ಹಂಪಿ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮೋಜು ಮಸ್ತಿ ಮಾಡಿಕೊಂಡು ಸೋಮವಾರ ಐದು ಜನರಿದ್ದ ಬೆಂಜ್ ಕಾರು ಹೊಸಪೇಟೆಯ ಹೊರವಲಯದಲ್ಲಿರುವ ಮರಿಯಮ್ಮನ ಹಳ್ಳಿ ಮಾರ್ಗವಾಗಿ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಆದರೆ ಅದೇ ಮಾರ್ಗದಲ್ಲಿ ತನ್ನ ಬೈಕ್ ಪಂಚರ್ ಆದ ಕಾರಣ ಪಕ್ಕದ ಹೋಟೆಲ್ ಒಂದರಲ್ಲಿ ಟೀ ಕುಡಿಯುತ್ತ ನಿಂತಿದ್ದ ಮರಿಯಮ್ಮನ ಹಳ್ಳಿಯ ರವಿ ನಾಯಕ್ (21) ಎಂಬ ಯುವಕನ ಮೇಲೆ ಕಾರ್ ಹರಿದು 200 ಮೀಟರ್ ಗಳಷ್ಟು ದೂರ ಯುವಕನನ್ನು ಕಾರು ತಳ್ಳಿಕೊಂಡು ಹೋಗಿ ರಸ್ತೆ ಪಕ್ಕದಲ್ಲಿ ಪಲ್ಟಿ ಆಗಿದೆ. ಹೀಗಾಗಿ ರವಿ ನಾಯಕ್ ಕಾರ್ ಕೆಳಗೆ ಸಿಲುಕಿ ಸಾವಿಗೀಡಾಗಿದ್ದಾನೆ.

ಕಾರ್ ಚಾಲನೆ ಮಾಡುತಿದ್ದ ಸಚಿನ್ ಎಂಬ ಯುವಕ ಸಹ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ. ಬಳಿಕ ಕಾರ್ ನಲ್ಲಿ ಇದ್ದ ಕೆಲವರು ಬೇರೊಂದು ಕಾರ್ ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಪ್ರಭಾವಿ ನಾಯಕನ ಪುತ್ರ ಸಹ ಕಾರ್ ನಲ್ಲಿ ಇದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ್ದು ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications