ಹಂಪಿಯಲ್ಲಿ ಕಳ್ಳತನದ ಸಂಚು, ಇಬ್ಬರ ಬಂಧನ
ಬಳ್ಳಾರಿ, ಅ. 20 : ಹಂಪಿಯ ಪ್ರಸಿದ್ಧ ವಿರೂಪಾಕ್ಷ ದೇವಾಲಯದಲ್ಲಿ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಒಂಭತ್ತು ಮಂದಿಯ ತಂಡದಲ್ಲಿ ಉಳಿದವರು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಭಾನುವಾರ ಹಂಪಿಯಲ್ಲಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದಾಗ ಕಳ್ಳತನದ ಸಂಚು ಬಯಲಾಗಿದೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದರೂ 9 ಮಂದಿಯ ಗುಂಪಿನ ಎಲ್ಲಾ ಸದಸ್ಯರು ಪರಾರಿಯಾಗಿದ್ದಾರೆ. [ಹಂಪಿ ಉತ್ಸವ : ವಿಜಯನಗರ ವೈಭವ ಪ್ರದರ್ಶನ]
ಬಂಧಿತರನ್ನು ರಾಮಣ್ಣ ಮತ್ತು ನಾಗಿರೆಡ್ಡಿ ಎಂದು ಗುರುತಿಸಲಾಗಿದ್ದು, ಇಬ್ಬರು ಆಂಧ್ರಪ್ರದೇಶ ಮೂಲದವರೆಂದು ಪೊಲೀಸರು ತಿಳಿಸಿದ್ದಾರೆ. ಇವರು ಹಿಂದೆ ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಂಪಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವವರಿಗೆ ಹುಡುಕಾಟ ಆರಂಭವಾಗಿದೆ.
ಜನವರಿ 9ರಿಂದ ಹಂಪಿ ಉತ್ಸವ : ಜನವರಿ 9ರಿಂದ 11ರವರೆಗೆ 2015ನೇ ಸಾಲಿನ ಹಂಪಿ ಉತ್ಸವವನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಹೇಳಿದ್ದಾರೆ.
ಮೂರು ದಿನಗಳ ಉತ್ಸವದಲ್ಲಿ ಸ್ಥಳೀಯ ಕಲಾವಿದರು, ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರ ನೇತೃತ್ವದಲ್ಲಿ ಸಭೆ ನಡೆಸಿ ಉತ್ಸವದ ಕಾರ್ಯಕ್ರಮಗಳ ಕುರಿತು ಅಂತಿಮ ಪಟ್ಟಿ ತಯಾರಿಸಲಾಗುತ್ತದೆ ಎಂದು ಸಚಿವ ಪರಮೇಶ್ವರ್ ನಾಯಕ್ ತಿಳಿಸಿದರು.