Tungabhadra Dam: ಗೇಟ್ ಅಳವಡಿಕೆ ಯಶಸ್ವಿ, 30 ಟಿಎಂಸಿಗೂ ಹೆಚ್ಚು ನೀರು ಉಳಿತಾಯ
ಬಳ್ಳಾರಿ, ಆಗಸ್ಟ್ 18: ಮುನಿರಾಬಾದ್ನಲ್ಲಿರುವ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ಗೇಟ್ಗೆ ಎಲ್ಲಾ 5 ಎಲಿಮೆಂಟ್ಗಳನ್ನು ಅಳವಡಿಕೆ ಮಾಡುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಒಂದು ವಾರದಿಂದ ರೈತರಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ. ಸದ್ಯ ಡ್ಯಾಂನ ಎಲ್ಲಾ ಗೇಟ್ಗಳನ್ನು ಬಂದ್ ಮಾಡಲಾಗಿದೆ. ಹೊರಹರಿವು 60 ಕ್ಯುಸೆಕ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಕಾರ್ಯಾಚರಣೆ ನಡೆಸಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಶನಿವಾರ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ಗೇಟ್ಗೆ ಎಲ್ಲಾ 5 ಎಲಿಮೆಂಟ್ಗಳನ್ನು ಅಳವಡಿಕೆ ಮಾಡುವ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಗೇಟ್ ಮೂಲಕ ನೀರಿನ ಹೊರ ಹರಿವು ಬಂದ್ ಆಗಿದೆ. 4 ಅಡಿ ಎತ್ತರದ 5 ಎಲಿಮೆಂಟ್ಗಳನ್ನು ಕೂರಿಸಿ, ಗೇಟ್ ಮೂಲಕ ಹೊರಹೋಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, 'ತುಂಗಭದ್ರಾ ಜಲಾಶಯದಲ್ಲಿ ಮುರಿದಿದ್ದ ಗೇಟ್ ನಂಬರ್ 19ಕ್ಕೆ ಬದಲಿಯಾಗಿ 5 ತಡೆ ಗೇಟುಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿದ್ದು, ಈ ಸವಾಲಿನ ಕಾರ್ಯಕ್ಕೆ ಸ್ಥಳದಲ್ಲೇ ಮೊಕ್ಕಾಂಹೂಡಿ ಸೂಕ್ತ ಮಾರ್ಗದರ್ಶನ ನೀಡಿದ ಡ್ಯಾಂ ಗೇಟ್ ನಿರ್ಮಾಣ ಹಾಗೂ ಸುರಕ್ಷತೆ ತಜ್ಞ ನಿವೃತ್ತ ಇಂಜಿನಿಯರ್ ಕನ್ನಯ್ಯ ನಾಯ್ಡು ಅವರಿಗೆ ಹಾಗೂ ಈ ಕಾರ್ಯದಲ್ಲಿ ಅವಿರತ ಶ್ರಮಿಸಿದ ಎಲ್ಲಾ ಇಂಜಿನಿಯರ್ಗಳಿಗೆ, ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ, ಕಾರ್ಮಿಕರಿಗೆ ನಾಡಿನ ರೈತರ ಪರವಾಗಿ ಮತ್ತು ವೈಯಕ್ತಿಕವಾಗಿ ಧನ್ಯವಾದಗಳು' ಎಂದು ಹೇಳಿದ್ದಾರೆ.
'ಭಾರೀ ಪ್ರಮಾಣದ ನೀರಿನ ಹೊರಹರಿವಿದ್ದರೂ ಗೇಟ್ ಅಳವಡಿಕೆಯಂತಹ ಕಷ್ಟಸಾಧ್ಯವಾದ ಕಾರ್ಯವನ್ನು ಸಾಧ್ಯವಾಗಿಸಿ, ನಾಡಿನ ರೈತರನ್ನು ಆತಂಕದಿಂದ ಮುಕ್ತಗೊಳಿಸಿದ್ದೇವೆ. ತುಂಗಭದ್ರಾ ಜಲಾಶಯದ ನೀರನ್ನು ಆಧರಿಸಿ ಎರಡು ಬೆಳೆ ಬೆಳೆಯುವ ರೈತರು ಇನ್ನು ನಿಶ್ಚಿಂತರಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ನಾಡಿನ ಅನ್ನದಾತರು ಬಹುದೊಡ್ಡ ಸಂಕಷ್ಟದಿಂದ ಪಾರಾದದ್ದು ನನಗೆ ಖುಷಿ ನೀಡಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
4 ಅಡಿ ಎತ್ತರದ 5 ತಡೆ ಗೇಟ್ಗಳನ್ನು ಕೂರಿಸುವ ಕಾರ್ಯಾಚರಣೆ ಮೂಲಕ ಸುಮಾರು 30 ಟಿಎಂಸಿ ಅಡಿ ನೀರನ್ನು ಉಳಿಸಲಾಗಿದೆ. ಸದ್ಯ ಜಲಾಶಯಕ್ಕೆ ಒಳಹರಿವು 44,989 ಕ್ಯುಸೆಕ್ ಆಗಿದ್ದು, 60 ಕ್ಯುಸೆಕ್ ನೀರು ನದಿಗೆ ಹರಿದು ಹೋಗುತ್ತಿದೆ. 105.79 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 71.14 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಜುಲೈ ಅಂತ್ಯದಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾಗಿತ್ತು. ಆದರೆ 19ನೇ ಗೇಟ್ ಚೈನ್ ಲಿಂಕ್ ತುಂಡಾದ ಕಾರಣ ಒಂದು ವಾರದಿಂದ ನದಿಗೆ ನೀರು ಹರಿದು ಹೋಗಿದೆ.
ವಿಜಯನಗರ ಜಿಲ್ಲಾಡಳಿತ ಸಂತಸ: ಎಲ್ಲಾ 5 ಎಲಿಮೆಂಟ್ಗಳನ್ನು ಅಳವಡಿಕೆ ಮಾಡುವ ಕಾರ್ಯಾಚರಣೆ ಯಶಸ್ವಿಯಾದ ಕುರಿತು ವಿಜಯನಗರ ಜಿಲ್ಲಾಡಳಿತ ಸಂತಸ ವ್ಯಕ್ತಪಡಿಸಿದೆ. ತುಂಗಭದ್ರಾ ಡ್ಯಾಮ್ನ 19ನೇ ಗೇಟ್ ನಲ್ಲಿ ಅಂತಿಮವಾಗಿ ಸ್ಟಾಪ್ ಲಾಗ್ ಗೇಟ್ ಅನ್ನು ಕೂರಿಸಲಾಗಿದೆ. ಈ ಕೆಲಸವನ್ನು ಕನ್ನಯ್ಯ ನಾಯ್ಡು ನಿವೃತ್ತ ಅಧಿಕಾರಿಗಳು ತುಂಗಭದ್ರಾ ಸ್ಟೀಲ್ ಪ್ಲಾಂಟ್ಸ್ ಹೊಸಪೇಟೆ ಇವರ ನಿರ್ದೇಶನದಲ್ಲಿ ಜೆಎಸ್ಡಬ್ಲ್ಯೂ ಮತ್ತು ನಾರಾಯಣ ಇಂಜಿನಿಯರಿಂಗ್ ವರ್ಕ್ಸ್ ಮತ್ತು ಹಿಂದುಸ್ತಾನ್ ಇಂಜಿನಿಯರಿಂಗ್ ವರ್ಕ್ಸ್ ಇವರ ಸಹಯೋಗದೊಂದಿಗೆ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಳಿಸಲಾಗಿರುತ್ತದೆ. 30 ಟಿಎಂಸಿಗೂ ಹೆಚ್ಚು ನೀರು ಉಳಿತಾಯವಾಗಿರುತ್ತದೆ. ಎಲ್ಲರಿಗೂ ಜಿಲ್ಲಾಡಳಿತ ಆಭಾರಿಯಾಗಿರುತ್ತದೆ.
ಈ ಕಾರ್ಯದಲ್ಲಿ ಕಾರ್ಮಿಕರು ಕಳೆದ ಒಂದು ವಾರದಿಂದ ರಾತ್ರಿ ಹಗಲು ಶ್ರಮಿಸಿರುತ್ತಾರೆ. ಇವರಿಗೆ ನಮ್ಮ ನಿಮ್ಮೆಲ್ಲರ ಗೌರವಪೂರ್ವಕ ಅಭಿನಂದನೆಗಳು ಇವರೆಲ್ಲರೂ ನಮ್ಮ ಜಿಲ್ಲೆಯವರೇ ಎಂಬುದು ನಮಗೆ ಹೆಮ್ಮೆ ಎಂದು ಹೇಳಿದೆ. ಕಾರ್ಯಾಚರಣೆಯಲ್ಲಿ ಕಾರ್ಮಿಕರಾದ ಆನಂದರಾಜ್, ಜೋಕಾಬ್, ಜಿ. ಎಸ್. ಪ್ರಸಾದ, ನಟರಾಜ, ಪಾಲಾನಿಸ್ವಾಮಿ, ಲಕ್ಷ್ಮನ ರಾವ್, ಸಯದ್ ಫಕೃಧ್ದೀನ್, ದೇವರಾಜ, ಲೋಗ, ಮಾಬು, ಮಸ್ತಾನ್, ಶ್ರೀನಿವಾಸ, ಮೌಲಾ, ಹಮೀದ್, ರಾಜೇಶ್, ಚಂದ್ರು, ದುರ್ಗೇಶ್ ಹಾಗೂ ಕ್ರೇನ್ ಆಪರೇಟರ್ಗಳಾದ ಫಾರ್ಮನ್, ವಿಶ್ವ, ಗಂಗಾ ಮತ್ತು ಶ್ರೀನಾಥ್ ಇವರ ಜೊತೆ ನೀರಾವರಿ ಇಲಾಖೆಯ ಎಲ್ಲಾ ಹಿರಿಯ, ಕಿರಿಯ ಅಧಿಕಾರಿಗಳು ಟಿಬಿ ಡ್ಯಾಮ್ನ ಎಲ್ಲ ಸಿಬ್ಬಂದಿಗಳನ್ನು ಜಿಲ್ಲಾಡಳಿತ ಗೌರವ ಪೂರ್ವಕವಾಗಿ ಅಭಿನಂದಿಸುತ್ತದೆ ಎಂದು ತಿಳಿಸಿದೆ.












Click it and Unblock the Notifications