ಬಳ್ಳಾರಿಗೆ ಎಂಟ್ರಿ ಕೊಡಲು ಸಜ್ಜಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ
ಬಳ್ಳಾರಿ, ಆಗಸ್ಟ್ 19: ಬಳ್ಳಾರಿಗೆ ಭೇಟಿ ನೀಡಲು ಅವಕಾಶ ಕೊಡಬೇಕು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಸಿಬಿಐ ಆಕ್ಷೇಪದ ನಡುವೆ ಗಾಲಿ ರೆಡ್ಡಿ ಬಳ್ಳಾರಿಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿಗೆ ಷರತ್ತುಬದ್ಧ ಅನುಮತಿಯನ್ನು ಸುಪ್ರೀಂಕೋರ್ಟ್ ನೀಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ರೆಡ್ಡಿಗೆ ಜಾಮೀನು ನೀಡುವಾಗ ಬಳ್ಳಾರಿ, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಿಗೆ ಭೇಟಿ ನೀಡಬಾರದು ಎಂದು ಸುಪ್ರೀಂಕೋರ್ಟ್ ಷರತ್ತು ವಿಧಿಸಲಾಗಿದೆ. ಹೀಗಾಗಿ, ಕೋರ್ಟ್ ಅನುಮತಿ ಇಲ್ಲದೆ ಬಳ್ಳಾರಿ ಭೇಟಿ ಸಾಧ್ಯವಿಲ್ಲ. ಸದ್ಯ ಗಾಲಿ ರೆಡ್ಡಿಗೆ 8 ವಾರಗಳ ಕಾಲ ಅನುಮತಿ ಸಿಕ್ಕಿದೆ.
ಬಳ್ಳಾರಿಗೆ ಭೇಟಿ ನೀಡಿದ ಪ್ರತಿಸಲವೂ ಎಸ್ಪಿಗೆ ಮಾಹಿತಿ ನೀಡಬೇಕು, ಜಾಮೀನಿನ ಷರತ್ತಿಗೆ ಬದ್ಧರಾಗಿರಬೇಕು ಎಂದು ಕೋರ್ಟ್ ಸೂಚಿಸಿದೆ. ಜೊತೆಗೆ ಬಳ್ಳಾರಿಗೆ ತೆರಳಿದಾಗ ಕಡಪ, ಅನಂತಪುರ ಜಿಲ್ಲಾ ಎಸ್ಪಿಗಳಿಗೂ ಮಾಹಿತಿ ನೀಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
"ಪ್ರಕರಣದ ವಾಸ್ತವಾಂಶ ಮತ್ತು ಪರಿಸ್ಥಿತಿಯನ್ನು ಪರಿಗಣಿಸಿ, ಇನ್ನೂ ವಿಚಾರಣೆ ಆರಂಭವಾಗದಿರುವುದರಿಂದ ಮತ್ತು ಅರ್ಜಿದಾರರು ಬಳ್ಳಾರಿಗೆ ಭೇಟಿ ನೀಡಿದಾಗಲೂ ಜಾಮೀನು ಷರತ್ತುಗಳನ್ನು ಉಲ್ಲಂಘಿಸದಿರುವುದರಿಂದ ಮೇಲಿನ ಮೂರು ಜಿಲ್ಲೆಗಳಿಗೆ ಭೇಟಿ ನೀಡಬಾರದು ಎಂದು ವಿಧಿಸಲಾಗಿರುವ ಜಾಮೀನು ಆದೇಶದಲ್ಲಿ ಪರಿಷ್ಕರಣೆ ಮಾಡಲಾಗುವುದು" ಎಂದು ನ್ಯಾಯಮೂರ್ತಿಗಳಾದ ವಿನೀತ್ ಶರಣ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಸಿಬಿಐ ಪರ ಮಾಧವಿ ದಿವಾನ್ ವಾದ ಮಂಡನೆ
''ಈ ಹಿಂದೆ ತನಿಖಾಧಿಕಾರಿಗಳ ವಾಹನ ಸುಡಲಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಳ್ಳಾರಿಯಲ್ಲಿ 47 ಸಾಕ್ಷ್ಯಗಳಿವೆ. ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಿದರೆ ಏನು ಬೇಕಾದರೂ ಆಗಬಹುದು, ಜನಾರ್ದನ ರೆಡ್ಡಿಯಿಂದ ಅಪಾಯವಿದೆ ಎಂದು ಸಾಕ್ಷಿಗಳ ಪೈಕಿ ಒಬ್ಬರು ಪತ್ರ ಬರೆದಿದ್ದಾರೆ, ಹೀಗಾಗಿ ಗಾಲಿ ರೆಡ್ಡಿಗೆ ಬಳ್ಳಾರಿ ಭಾಗಕ್ಕೆ ಭೇಟಿ ನೀಡಲು ಅನುಮತಿ ನೀಡಬಾರದು, " ಎಂದು ಸಿಬಿಐ ಪರ ಅಡಿಷನಲ್ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ವಾದ ಮಂಡಿಸಿದರು.

ರೆಡ್ಡಿ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡನೆ
ಜನಾರ್ದನ ರೆಡ್ಡಿ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡನೆ ಮಾಡಿ, ಸಿಬಿಐ ವಾದದಲ್ಲಿ ಸತ್ಯಾಂಶವಿಲ್ಲ. ನಾವು ಐದು ವರ್ಷದಿಂದ ಯಾವುದೇ ಅರ್ಜಿ ಸಲ್ಲಿಸಿಲ್ಲ. ಸಾಕ್ಷ್ಯನಾಶಕ್ಕೆ ಪ್ರಯತ್ನ ಸಹ ನಡೆದಿಲ್ಲ, ಈ ಹಿಂದೆ ಕೋರ್ಟ್ ನೀಡಿರುವ ಷರತ್ತುಗಳಿಗೆ ಬದ್ಧವಾಗಿ ನನ್ನ ಕಕ್ಷಿದಾರರು ನಡೆದುಕೊಂಡಿದ್ದಾರೆ. ಈಗಲೂ ಕೂಡಾ ಷರತ್ತುಗಳನ್ನು ಪಾಲಿಸಿ, ಭೇಟಿ ನೀಡಲಿದ್ದಾರೆ'' ಎಂದರು.
ಈ ಹಿಂದೆ ಗಾಲಿ ರೆಡ್ಡಿಗೆ ಎರಡು ದಿನಗಳ ಮಟ್ಟಿಗೆ ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡಲಾಗಿತ್ತು. ಆಪ್ತ ಗೆಳೆಯ ಬಿ. ಶ್ರೀರಾಮುಲು ತಾಯಿ ಹೊನ್ನೂರಮ್ಮ ಅವರ ಪುಣ್ಯತಿಥಿಯ ಕಾರ್ಯದಲ್ಲಿ ಜನಾರ್ದನ ರೆಡ್ಡಿ ಪಾಲ್ಗೊಂಡಿದ್ದರು. 2020ರಲ್ಲಿ ಎರಡು ದಿನಗಳ ಕಾಲ ಬಳ್ಳಾರಿಯ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಮಿಕ್ಕಂತೆ ಕಳೆದ ಹಲವು ಚುನಾವಣೆ ಸಂದರ್ಭದಲ್ಲೂ ಬಳ್ಳಾರಿ ಆಸು ಪಾಸಿನಲ್ಲೇ ಗಾಲಿ ರೆಡ್ಡಿ ಇದ್ದರೂ ಕೋರ್ಟ್ ಆದೇಶ ಉಲ್ಲಂಘಿಸಿರಲಿಲ್ಲ.

ಅಕ್ರಮ ಗಣಿಗಾರಿಕೆಯ ಹಲವು ಪ್ರಕರಣಗಳಲ್ಲಿ ನಂಬರ್ ಒನ್ ಆರೋಪಿ
ಅಕ್ರಮ ಗಣಿಗಾರಿಕೆಯ ಹಲವು ಪ್ರಕರಣಗಳಲ್ಲಿ ನಂಬರ್ ಒನ್ ಆರೋಪಿಯಾಗಿರುವ ಗಾಲಿ ಜನಾರ್ದನ ರೆಡ್ಡಿ ಅವರು ಮೂರೂವರೆ ವರ್ಷ ಸೆರೆವಾಸ ಅನುಭವಿಸಿದ್ದರು. 2015ರಲ್ಲಿ ಸುಪ್ರೀಂಕೋರ್ಟ್ನಿಂದ ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆ ಹೊಂದಿದ್ದರು. ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಗೆ ಅವರು ಭೇಟಿ ನೀಡುವಂತಿಲ್ಲ ಮತ್ತು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಎಂ ನಾಸಿಕ್ ಸಾಬ್ ಎಂಬುವವರಿಗೆ ಸೇರಿದ್ದ ಇಂಡಿಯನ್ ಮೈನಿಂಗ್ ಕಂಪನಿಯ ಹೆಸರಿನಲ್ಲಿ ನಡೆಸಿದ ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ, ಮೆಹಫೂಜ್ ಅಲಿ ಖಾನ್ ಹಾಗೂ ಶ್ರೀನಿವಾಸ್ ರೆಡ್ಡಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಈ ಪ್ರಕರಣವೂ ಇನ್ನೂ ಇತ್ಯರ್ಥವಾಗಿಲ್ಲ.

2023ರ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸ್ಪರ್ಧೆ?
ಈ ನಡುವೆ 2023ರ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸ್ಪರ್ಧಿಸಲಿದ್ದಾರೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದಿಂದ ಜನಾರ್ದನ ರೆಡ್ಡಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಜನಾರ್ದನ ರೆಡ್ಡಿ ಆಪ್ತ ಸ್ನೇಹಿತ ಬಿ. ಶ್ರೀರಾಮುಲು ಅವರು ಬಳ್ಳಾರಿ ಬಿಟ್ಟು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಇದೇ ಮಾದರಿಯಲ್ಲಿ ಜನಾರ್ದನ ರೆಡ್ಡಿ ಕೋಟೆ ನಾಡಿಗೆ ಪ್ರವೇಶ ಮಾಡಬಹುದು ಎಂಬ ಸುದ್ದಿಗಳು ಹಬ್ಬಿವೆ.












Click it and Unblock the Notifications