"ಅಭಿವೃದ್ಧಿಗಾಗಿ ಜಿಲ್ಲೆಗಳ ವಿಭಜನೆ ಎಂದರೆ ಅದು ವಂಚನೆ''
ಬಳ್ಳಾರಿ, ನ. 20: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೈಯೊಳಗಿನ ಅಧಿಕಾರ ಹಾಗೂ ಸಂಪನ್ಮೂಲಗಳ ವಿಕೇಂದ್ರೀಕರಣವಾಗಿ ಸ್ಥಳೀಯ ಸಂಸ್ಥೆಗಳು ಬಲಗೊಳ್ಳದೇ ಅಭಿವೃದ್ಧಿಯೆಂಬುದು ಮರೀಚಿಕೆಯಾಗಿದೆ. ರಾಜ್ಯ ಹಾಗೂ ಜಿಲ್ಲೆಗಳ ವಿಭಜಿಸುವ ಮೂಲಕ ಅಭಿವೃದ್ಧಿ ಸಾಧ್ಯವೆಂದು ಹೇಳುವುದು ಒಂದು ದೊಡ್ಡ ಮೋಸವಾಗಿದೆ. ಇಂತಹ ನಡೆಯು ಜನತೆಗೆ ಮತ್ತಷ್ಟು ಹೊರೆಯಾಗ ಬಲ್ಲುದೇ ಹೊರತು, ಜನತೆಗೆ ಪೂರಕವಾಗದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ದ ರಾಜ್ಯ ಘಟಕ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆಯನ್ನು ಖಂಡಿಸಿದೆ.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯ ರಚನೆಯ ಕುರಿತ ಪ್ರಸ್ತಾವನೆ ಹಿನ್ನೆಲೆಯಲ್ಲಿ ಸಿಪಿಐಎಂ ಪ್ರತಿಕ್ರಿಯೆ ನೀಡಿ, ಇಂತಹ ವಿಭಜನೆಯು, ಕೇವಲ ಭೂಮಾಲಕ- ಬಂಡವಾಳದಾರರಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಲೂ ಮತ್ತು ಹೊಸ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರಾಗಲೂ ಮತ್ತು ಹೆಚ್ಚಿನ ಅಧಿಕಾರಿಗಳ ಹೊರೆಯನ್ನು ರಾಜ್ಯ ಬಜೆಟ್ ಮೇಲೆ ಹೇರಲು ಮಾತ್ರವೇ ನೆರವಾಗುತ್ತದೆ ಎಂದಿದೆ.
ಬದಲಿಗೆ, ಜನತೆಗೆ ಅಂತಹ ಪ್ರಯೋಜನವೇನು ಕಾಣದಾಗಿದೆ ಮತ್ರು ಜನತೆ ಹೆಚ್ಚುವರಿ ತೆರಿಗೆಯ ಹೊರೆಯನ್ನು ಹೊರ ಬೇಕಾಗುತ್ತದೆ ಎಂದು ಕಾರ್ಯದರ್ಶಿ ಯು. ಬಸವರಾಜ ಹೇಳಿದ್ದಾರೆ.

ಜಿಲ್ಲೆಗಳ ಹಾಗೂ ಜನತೆಯ ನಿಜವಾದ ಅಭಿವೃದ್ಧಿಯ ಖಾಳಜಿ ಇದ್ದಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಬಳಿ ಕೇಂದ್ರೀಕರಿಸಲ್ಪಟ್ಟಿರುವ ಅಧಿಕಾರಗಳ ಮತ್ತು ಸಂಪನ್ಮೂಲಗಳನ್ನು ಸ್ಥಳೀಯ ಸಂಸ್ಥೆಗಳಾದ ಗ್ರಾಮ/ ಪಟ್ಟಣ ಪಂಚಾಯತ್ ಹಾಗೂ ಪುರಸಭೆ/ ನಗರಸಭೆಯಂತಹ ಸ್ಥಳೀಯ ಸಂಸ್ಥೆಗಳಿಗೆ ವಿಕೇಂದ್ರೀಕರಿಸಲಿ ಎಂದು ಸಿಪಿಐಎಂ ಒತ್ತಾಯಿಸುತ್ತದೆ.
ಈಗ ಈ ಸ್ಥಳೀಯ ಸಂಸ್ಥೆಗಳು ತಮ್ಮಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರಿಗೆ ಮಾಸಿಕ ವೇತನ ನೀಡಲಾಗದಷ್ಟು ದುರ್ಬಲವಾಗಿವೆ. ಇದಕ್ಕೂ ರಾಜ್ಯ ಹಾಗೂ ಕೇಂದ್ರ ಸರಕಾರದ ಕಡೆ ನೋಡ ಬೇಕಾಗಿದೆ. ಮನೆನಿವೇಶನ ಹಂಚಿಕೆಯಂತಹ ಫಲಾನುಭವಿಗಳ ಆಯ್ಕೆಯ ವಿಷಯವೂ ಶಾಸಕರ ಬಳಿಯಲ್ಲಿ ಉಳಿದಿದೆ.
ಪರಿಸ್ಥಿತಿ ಹೀಗಿರುವಾಗ, ರಾಜ್ಯ ಹಾಗೂ ಜಿಲ್ಲೆಗಳ ವಿಭಜನೆಯು ಆಡಳಿತ ಮತ್ತು ಅಭಿವೃದ್ಧಿಯನ್ನು ಜನರ ಬಳಿ ತರಬಲ್ಲದೆಂಬುದು ವಂಚನೆಯಾಗುತ್ತದೆ.
ಬಿಜೆಪಿಯೊಳಗೆ ಭುಗಿಲೆದ್ದಿರುವ ಅಸಮಾಧಾನವನ್ನು ಶಮನ ಮಾಡುವ ಮತ್ತು ಅಧಿಕಾರ ಉಳಿಸಿಕೊಳ್ಳುವ ಮತ್ತು ಹಂಚಿಕೊಳ್ಳುವ ಕುತಂತ್ರವೇ ಹೊರತು, ಇದು ಬೇರೇನೂ ಅಲ್ಲವೆಂದು ಸಿಪಿಐಎಂ ಕಟುವಾಗಿ ಟೀಕಿಸಿದೆ.












Click it and Unblock the Notifications