ಶೆಣೈ ಆರೋಪದಲ್ಲಿ ಹುರುಳಿಲ್ಲ, ತನಿಖೆಗೆ ಸಿದ್ಧ : ಬಳ್ಳಾರಿ ಎಸ್ಪಿ
ಬಳ್ಳಾರಿ, ಜೂನ್ 22: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ ಪಿಯಾಗಿದ್ದ ಅನುಪಮಾ ಶೆಣೈ ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದನ್ನು ಓದಿರಬಹುದು. ಈ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಬಳ್ಳಾರಿ ಎಸ್ ಪಿ ಆರ್ ಚೇತನ್ ಅವರು, ಶೆಣೈ ಅವರ ಆರೋಪದಲ್ಲಿ ಹುರುಳಿಲ್ಲ, ಯಾವುದೇ ತನಿಗೆ ಸಿದ್ಧ' ಎಂದಿದ್ದಾರೆ.
ಅನುಪಮಾ ಶೆಣೈ ಅವರ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಇಲಾಖೆ ನಿಯಮದ ಪ್ರಕಾರ ನಡೆದುಕೊಂಡಿದ್ದೇನೆ. ಯಾವುದೇ ಪಕ್ಷಪಾತ ಮಾಡಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವುದು ತಿಳಿದು ಬಂದಿದೆ. ಈ ಕುರಿತಂತೆ ಯಾವುದೇ ರೀತಿಯ ತನಿಖೆಗೂ ಸಿದ್ಧ ಎಂದು ಎಸ್ಪಿ ಆರ್ ಚೇತನ್ ಪ್ರತಿಕ್ರಿಯಿಸಿದರು.[ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ ಅನುಪಮಾ ಶೆಣೈ]
ಶೆಣೈ ಅವರ ಪತ್ರದಲ್ಲಿ ಹೇಳಿರುವಂತೆ ರಜೆ ನೀಡುವಲ್ಲಿ ಯಾವುದೇ ತಾರತಮ್ಯ ಎಸಗಿಲ್ಲ. ಮೆಡಿಕಲ್ ಲೀವ್ ಪಡೆಯಲು ಬಯಸಿದ್ದರು. ಈ ಬಗ್ಗೆ ಪರಿಶೀಲನೆಗೆ ಬೋರ್ಡ್ ಗೆ ಕಳಿಸಲಾಯಿತು. ಒಂದು ವೇಳೆ ಅವರು ಕ್ಯಾಶುವಲ್ ಲೀವ್ ಹಾಕಿದ್ದರೆ ತಕ್ಷಣವೇ ಅಪ್ರೂವ್ ಆಗುತ್ತಿತ್ತು. ಇನ್ನು ಚುನಾವಣೆ ಡ್ಯೂಟಿಗೆ ನಿಯುಕ್ತಿ ಮಾಡಿದ್ದು ಅಲ್ಲಿಂದ ರಜೆ ಮೇಲೆ ಕಳಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಏಕೆ ಎಂದು ತಿಳಿದಿಲ್ಲ.

ಅವರು ಯಾವ ಯಾವ ಕೇಸು ಎಂದು ನಮೂದಿಸಿದ್ದಾರೆ ನಾನು ಉತ್ತರಿಸಬಹುದು. ಮಹಿಳಾ ಆಯೋಗದಿಂದ ತನಿಖೆ ನಡೆದರೆ ಸ್ವಾಗತಿಸುತ್ತೇನೆ.ಲಿಕ್ಕರ್ ಮಾಫಿಯಾ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಕೇಸ್ ಮುಚ್ಚಿ ಹಾಕಿಲ್ಲ ಎಂದರು. [ರಾಜೀನಾಮೆ ನೀಡಿದ್ದೇಕೆ? ಅನುಪಮಾ ಶೆಣೈ ಪತ್ರದಿಂದ ಬಹಿರಂಗ]
ರಾಜೀನಾಮೆ ಪತ್ರದ ಬಗ್ಗೆ ಗೊಂದಲವಿಲ್ಲ. ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿಲ್ಲ. ನಮಗೆ ಸಿಕ್ಕಿದ್ದು ಒಂದೇ ಒಂದು ರಾಜೀನಾಮೆ ಪತ್ರ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಹಿಳಾ ಆಯೋಗಕ್ಕೆ ಅನುಪಮಾ ಶೆಣೈ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಆಯೋಗದ ಮುಖ್ಯಸ್ಥೆ ಮಂಜುಳಾ ಮಾನಸ ಅವರು ಸೂಚಿಸಿದ್ದಾರೆ. ಒಟ್ಟು ಏಳು ಪುಟದ ದೂರಿನ ಪತ್ರ ಈಗ ಆಯೋಗದ ಮುಂದಿದೆ.












Click it and Unblock the Notifications