ಹುಬ್ಬಳ್ಳಿ ವಲಯದಿಂದ ಮೊದಲ ಡೆಮು ರೈಲು; ಯಾವ ಮಾರ್ಗ?
ವಿಜಯನಗರ, ಅಕ್ಟೋಬರ್ 30; ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಡೆಮು ರೈಲು ಕೋಚ್ಗಳನ್ನು ಕೇಳಿ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ವಿಜಯನಗರ ಅಥವ ಬಳ್ಳಾರಿಯಿಂದ ಈ ರೈಲುಗಳನ್ನು ಓಡಿಸಲು ತೀರ್ಮಾನಿಸಲಾಗಿದೆ.
ಹೊಸಪೇಟೆ-ಹರಿಹರ ಅಥವ ಹುಬ್ಬಳ್ಳಿ-ಬಳ್ಳಾರಿ ನಡುವೆ ಡೆಮು ರೈಲುಗಳನ್ನು ಓಡಿಸಲು ಚಿಂತನೆ ನಡೆಸಲಾಗಿದೆ. ಎರಡರಲ್ಲಿ ಯಾವ ಮಾರ್ಗದಲ್ಲಿ ಹೆಚ್ಚು ಅನುಕೂಲವಾಗಲಿದೆ? ಎಂದು ತೀರ್ಮಾನಿಸಿ ರೈಲು ಓಡಿಸಲಾಗುತ್ತದೆ.
ಹುಬ್ಬಳ್ಳಿ ವಿಭಾಗ ಇದೇ ಮೊದಲ ಬಾರಿಗೆ ಡೆಮು ರೈಲಿಗಾಗಿ ಬೇಡಿಕೆ ಇಟ್ಟಿದೆ. ದಿನಕ್ಕೆ ಎರಡು ಬಾರಿ ಹೊಸಪೇಟೆ-ಹರಿಹರ ನಡುವೆ ಹಗಲು ಹೊತ್ತಿನಲ್ಲಿ ರೈಲು ಸಂಚಾರ ನಡೆಸಲು ಚಿಂತಿಸಲಾಗಿದೆ. ಮಾರ್ಗ ಅಂತಿಮವಾದರೆ ವಿಭಾಗದಿಂದ ಸಂಚಾರ ನಡೆಸುವ ಮೊದಲ ಡೆಮು ರೈಲು ಇದಾಗಲಿದೆ.

ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಈ ಕುರಿತು ಮಾತನಾಡಿದ್ದು, "ಈ ಭಾಗದಲ್ಲಿ ಡೆಮು ರೈಲು ಸಂಚಾರ ನಡೆಸಲಿದೆ. ಆ ನಿಟ್ಟಿನಲ್ಲಿ ಸಕಲ ಪ್ರಯತ್ನಗಳು ನಡೆಯಲಿವೆ. ಈ ಕುರಿತು ರೈಲ್ವೆ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುತ್ತದೆ" ಎಂದು ಹೇಳಿದ್ದಾರೆ.
ಅಧ್ಯಯನ; ಹೊಸಪೇಟೆ-ಹರಿಹರ ಅಥವ ಹುಬ್ಬಳ್ಳಿ-ಬಳ್ಳಾರಿ ಈ ಎರಡು ಮಾರ್ಗದಲ್ಲಿ ಅಧ್ಯಯನ ನಡೆಸಲಾಗುತ್ತದೆ. ಯಾವ ಮಾರ್ಗ ಉತ್ತಮ ಎಂದು ವರದಿ ಬರುತ್ತದೆಯೋ, ಅದೇ ಮಾರ್ಗದಲ್ಲಿ ಮೊದಲ ಡೆಮು ರೈಲು ಓಡಿಸಲು ಹುಬ್ಬಳ್ಳಿ ವಿಭಾಗ ಚಿಂತನೆ ನಡೆಸಿದೆ.
ಡೆಮು ರೈಲು ಸಂಚಾರ ಆರಂಭವಾದರೆ ಪ್ರತಿದಿನ ಕಚೇರಿ ಕೆಲಸಗಳಿಗೆ ಸಂಚಾರ ನಡೆಸುವ ಹರಪನಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಭಾಗದ ಜನರಿಗೆ ಅನುಕೂಲವಾಗಲಿದೆ. ಜಿಲ್ಲಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ದಿನನಿತ್ಯದ ಸಂಚಾರಕ್ಕೆ ಸಹಾಯಕವಾಗಲಿದೆ.
ನೈಋತ್ಯ ರೈಲ್ವೆ ವಿಭಾಗದ ಬೆಂಗಳೂರು ವಿಭಾಗದಲ್ಲಿ ಮಾತ್ರ ಸದ್ಯ ಡೆಮು ರೈಲು ಸಂಚಾರ ನಡೆಸುತ್ತಿದೆ. ರೈಲ್ವೆ ಇಲಾಖೆ ಒಪ್ಪಿಗೆ ನೀಡಿದರೆ ಹುಬ್ಬಳ್ಳಿ ವಲಯದಲ್ಲಿಯೂ ಡೆಮು ರೈಲು ಓಡಲಿದೆ. ಮೈಸೂರು ವಿಭಾಗದಲ್ಲಿಯೂ ಸದ್ಯ ಯಾವುದೇ ರೈಲು ಓಡುತ್ತಿಲ್ಲ.
ಡೆಮು ರೈಲಿನ ವಿಶೇಷತೆ; ಡೆಮು ರೈಲು ಸಾಮಾನ್ಯ ರೈಲಿಗಿಂತ ಹೆಚ್ಚು ಭಿನ್ನವಾಗಿದೆ. ಸಾಮಾನ್ಯ ರೈಲು ಬೋಗಿಯಲ್ಲಿ 76 ಸೀಟುಗಳಿದ್ದರೆ, ಡೆಮು ರೈಲು 108 ಸೀಟುಗಳನ್ನು ಹೊಂದಿದೆ. ಈ ರೈಲು ಎರಡು ತುದಿಯಿಂದಲೂ ಸಂಚಾರ ನಡೆಸುತ್ತದೆ.
ಸಾಮಾನ್ಯ ರೈಲಿನಂತೆ ನಿಲ್ದಾಣ ತಲುಪದ ಬಳಿಕ ಇಂಜಿನ್ ಬದಲಿಸುವ ಅವಶ್ಯಕತೆ ಇಲ್ಲ. ಇದರಿಂದಾಗಿ ಸಮಯವು ಉಳಿಯವಾಗಲಿದೆ, ಜನರು ರೈಲಿಗಾಗಿ ಹೆಚ್ಚು ಹೊತ್ತು ಕಾಯುವ ಅಗತ್ಯವಿಲ್ಲವಾಗಿದೆ. ಚಿಕ್ಕ ನಗರಗಳ ನಡುವೆ ಸಂಚಾರ ನಡೆಸಲು ಡೆಮು ರೈಲು ಬಹಳ ಸಹಾಯಕವಾಗಿದೆ.
ಡೆಮು ರೈಲು ಸಂಚಾರ ರದ್ದು; ನೈಋತ್ಯ ರೈಲ್ವೆ ಬೆಂಗಳೂರು ನಗರದಿಂದ ಸಂಚಾರ ನಡೆಸುತ್ತಿದ್ದ ಡೆಮು ರೈಲುಗಳನ್ನು ಸ್ಥಗಿತಗೊಳಿಸಿದೆ. ಯಶವಂತಪುರದಿಂದ ಸಂಚಾರ ನಡೆಸುವ ಯಶವನಂತಪುರ-ಹಾಸನ ಡೆಮು ರೈಲು 27/10/2021ರಿಂದ ಮತ್ತು ಹಾಸನದಿಂದ ಚಲಿಸುವ ಹಾಸನ-ಯಶವಂತಪುರ ಡೆಮು ರೈಲು ಸೇವೆಯನ್ನು 27/10/2021ರಿಂದ ಸ್ಥಗಿತಗೊಂಡಿದೆ.
ಬೆಂಗಳೂರಿನ ಯಶವಂತಪುರ-ತುಮಕೂರು ನಡುವಿನ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆ ಬಾಕಿ ಇದೆ. ಪರಿಶೀಲನೆ ಪೂರ್ಣಗೊಂಡ ಬಳಿಕ ಯಶವಂತಪುರ ಮತ್ತು ತುಮಕೂರು ನಡುವೆ ಮೆಮು ರೈಲು ಓಡಿಸಲು ಸಹ ರೈಲ್ವೆ ಇಲಾಖೆ ತೀರ್ಮಾನಿಸಿದೆ.
ರೈಲು ಸಂಚಾರ ವಿಸ್ತರಣೆ; ಕೆಲವು ದಿನಗಳ ಹಿಂದೆ ಕೆಎಸ್ಆರ್ ಬೆಂಗಳೂರು-ಹೊಸಪೇಟೆ-ಕೆಎಸ್ಆರ್ ಬೆಂಗಳೂರು ರೈಲು ಮತ್ತು ಹೊಸಪೇಟೆ-ಹರಿಹರ-ಹೊಸಪೇಟೆ ಪ್ರಯಾಣಿಕರ ವಿಶೇಷ ರೈಲನ್ನು ರದ್ದುಗೊಳಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿತ್ತು. ಆದರೆ ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ರೈಲುಗಳ ಸಂಚಾರವನ್ನು ಮುಂದುವರೆಸಲು ನೈಋತ್ಯ ರೈಲ್ವೆ ಅಧಿಕಾರಿಗಳು ಆದೇಶ ನೀಡಿದ್ದರು.
ಸೆಪ್ಟೆಂಬರ್ 15ರಿಂದ ಈ ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರವನ್ನು ರದ್ದುಗೊಳಿಸಿ ಮಾರ್ಗದಲ್ಲಿ ಕೇವಲ ಗೂಡ್ಸ್ ರೈಲು ಸಂಚಾರ ನಡೆಸಲು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಪ್ರಯಾಣಿಕರು ಹೋರಾಟದ ಎಚ್ಚರಿಕೆ ನೀಡಿದ ಬಳಿಕ ಆಕ್ರೋಶಕ್ಕೆ ಮಣಿದು ರೈಲು ಸಂಚಾರ ಮುಂದುವರೆಸಲು ಒಪ್ಪಿಗೆ ನೀಡಲಾಗಿತ್ತು.












Click it and Unblock the Notifications