ಬಳ್ಳಾರಿ ವಿಭಾಗಕ್ಕೆ 'ಶಕ್ತಿ' ತುಂಬಿದ ಸರ್ಕಾರದ ಮಹತ್ವದ ಯೋಜನೆ
ಬಳ್ಳಾರಿ, ಡಿಸೆಂಬರ್ 31: ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದು 'ಶಕ್ತಿ'. ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಸಂಚಾರ ನಡೆಸುವ ಯೋಜನೆ ಬಗ್ಗೆ ಹಲವಾರು ಟೀಕೆಗಳಿವೆ. ಆದರೆ ಈ ಯೋಜನೆ ಜನರಿಗೆ ಸಹಕಾರಿಯಾಗಿದೆ. 'ಶಕ್ತಿ' ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಬರುವ ಆದಾಯ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ಸಾರಿಗೆ ವ್ಯವಸ್ಥೆಯನ್ನು ಬಳಕೆ ಮಾಡುವ ಜನರ ಸಂಖ್ಯೆ ಸಹ ಹೆಚ್ಚುತ್ತಿದೆ.
'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ಸರ್ಕಾರಿ ಬಸ್ಗಳ ಬಳಕೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಹೊಸ ಮಾರ್ಗದಲ್ಲಿ ಬಸ್ ಸೇವೆಗೆ ಒತ್ತಡವೂ ಹೆಚ್ಚುತ್ತಿದೆ. ಇದನ್ನು ಪರಿಹಾರ ಮಾಡಲು ಬಳ್ಳಾರಿ ವಿಭಾಗವು ಬಸ್ ಮತ್ತು ಬಸ್ಗಳ ಟ್ರಿಪ್ ಸಂಖ್ಯೆಯನ್ನೂ ಹೆಚ್ಚಿಸಿದೆ, ಹೆಚ್ಚಳ ಮಾಡುತ್ತಿದೆ.

2023ರ ಜೂನ್ 11ರಂದು 'ಶಕ್ತಿ' ಯೋಜನೆ ಆರಂಭವಾಯಿತು. ಯೋಜನೆ ಆರಂಭಕ್ಕೂ ಮೊದಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದಲ್ಲಿದ್ದ ಬಸ್ಗಳ ಸಂಖ್ಯೆ ಈಗ ಹೆಚ್ಚಾಗಿದೆ. ತಾಲೂಕುಗಳಲ್ಲಿ ಸಹ ಹೆಚ್ಚಿನ ಪ್ರಯಾಣಿಕರು ಸರ್ಕಾರಿ ಬಸ್ ಬಳಕೆ ಮಾಡುತ್ತಿದ್ದಾರೆ.
'ಶಕ್ತಿ' ಯೋಜನೆ ಜಾರಿಗೆ ಬಂದ ಒಂದೇ ವರ್ಷದಲ್ಲಿ ಬಸ್ಗಳ ಸಂಖ್ಯೆ ಏರಿಕೆಯಾಗಿವೆ. ಮಹಿಳೆಯರು ಮತ್ತು ಸಾರ್ವಜನಿಕರ ಪ್ರಯಾಣ ದಟ್ಟಣೆ ಕಡಿಮೆಗೊಳಿಸಲು ಬಳ್ಳಾರಿ ವಿಭಾಗ ಬಸ್ಗಳ ಸರತಿ ಸೇವೆಗಳನ್ನೂ ಹೆಚ್ಚಿಸಿದೆ. ಜನರು ತಮ್ಮ ಹಳ್ಳಿಗಳಿಗೆ ಬಸ್ ಬೇಕು ಎಂದು ಬೇಡಿಕೆ ಸಲ್ಲಿಸುತ್ತಿದ್ದು, ಹೊಸ ಮಾರ್ಗದಲ್ಲಿ ಬಸ್ ಸೇವೆಗಳನ್ನು ಆರಂಭಿಸಲಾಗುತ್ತಿದೆ.
ಆದಾಯದ ಅಂಕಿ ಅಂಶ: 'ಶಕ್ತಿ' ಯೋಜನೆ ಆರಂಭವಾದ ಬಳಿಕ 2024ರ ನವೆಂಬರ್ ತನಕ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದಲ್ಲಿ ಒಟ್ಟು 3,73,58,517 ಮಹಿಳೆಯರು ಸಂಚಾರವನ್ನು ನಡೆಸಿದ್ದಾರೆ. ಇದರಲ್ಲಿ ವಯಸ್ಕರು 3,58,89,773 ಆಗಿದ್ದರೆ, ಮಕ್ಕಳ ಸಂಖ್ಯೆ 14,68,744. ಇದರಿಂದ ಬಳ್ಳಾರಿ ವಿಭಾಗಕ್ಕೆ ಇಲ್ಲಿಯವರೆಗೆ ಒಟ್ಟು 1,35,10,15,030 ರೂ. ಆದಾಯ ಬಂದಿದೆ.
ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಬಸ್ ಬಳಕೆಯ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಳ್ಳಾರಿ ವಿಭಾಗವು ಬಸ್ಗಳನ್ನು ನಿಯೋಜನೆ ಮಾಡುತ್ತಿದೆ. ಹೆಚ್ಚುವರಿ ಟ್ರಿಪ್ಗಳನ್ನು ಓಡಿಸಲಾಗುತ್ತಿದೆ.
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳುವ ಬೆಳಗಿನ ಸಮಯದಲ್ಲಿ ಗ್ರಾಮೀಣ ಸಾರಿಗೆ ವ್ಯವಸ್ಥೆ ಮೇಲೆ ಒತ್ತಡ ಉಂಟಾಗುತ್ತಿದೆ. ಆದ್ದರಿಂದ ಇದನ್ನು ತಗ್ಗಿಸಲು ದೂರದ ಜಿಲ್ಲೆಗಳಿಂದ ಬಳ್ಳಾರಿಗೆ ಬೆಳಗ್ಗೆ ಬರುವ ಬಸ್ಗಳಿಗೆ ಒಂದು ಸರತಿ 'ಸ್ಕೂಲ್ ರೌಂಡ್' ಹೋಗಿ ಬರಲು ಸೂಚಿಸಲಾಗಿದೆ.
ಅಗತ್ಯವಿರುವ ಕಡೆ ಸಮೀಕ್ಷೆ ಮಾಡಿ ಬಸ್ಗಳ ವ್ಯವಸ್ಥೆ ನೀಡಲು ಪ್ರಯತ್ನಿಸಲಾಗುತ್ತಿದೆ. ಶಾಲಾ- ಕಾಲೇಜು ಮಕ್ಕಳಿಗಾಗಿ ಸಾರಿಗೆ ಸೇವೆಯನ್ನೂ ಹೆಚ್ಚಿಸಲಾಗಿದೆ. ಕೆಕೆಆರ್ಡಿಬಿ ಮತ್ತು ಡಿಎಂಎಫ್ ಅಡಿಯಲ್ಲಿ ಮತ್ತಷ್ಟು ಬಸ್ಗಳು ಬಂದಿವೆ. ಕೆಕೆಆರ್ಟಿಸಿ ಬಳ್ಳಾರಿ ವಿಭಾಗವು ಅಗತ್ಯ ಇರುವ ಕಡೆ ಸರ್ವೆ ಮಾಡಿ ಹೊಸ ಬಸ್ ಸೇವೆಯನ್ನು ಆರಂಭಿಸಲಿದೆ.
ರಾಜ್ಯ ಸರ್ಕಾರ ಬಡ ವರ್ಗದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಲು ಹಲವು ಯೋಜನೆ ಜಾರಿಗೊಳಿಸಿದೆ. ಅದರಲ್ಲಿ 'ಶಕ್ತಿ' ಯೋಜನೆಯೂ ಒಂದು. ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಮೂಲಕ ಈ ಯೋಜನೆ ದುಡಿಯುವ ಮಹಿಳೆಯರಿಗೆ ಇನ್ನಷ್ಟು ಶಕ್ತಿಯನ್ನು ತುಂಬುತ್ತಿದೆ.
ಗ್ರಾಮೀಣ ಭಾಗದ ಮಹಿಳೆಯರು ಕುಟುಂಬದ ಪೋಷಣೆಗಾಗಿ ಸಣ್ಣ ವ್ಯಾಪಾರ, ವಹಿವಾಟುಗಳಿಗೆ ನಗರಕ್ಕೆ ಬರುವಾಗ ಅವರ ಪ್ರಯಾಣದ ಖರ್ಚು ಆದಾಯದ ಅರ್ಧದಷ್ಟಾಗುತ್ತದೆ. ತಮ್ಮ ವ್ಯಾಪಾರ ವಹಿವಾಟು ನಡೆಸಲು ಅದರ ಭಾರವನ್ನು ಹೊರೆಯಾಗದಂತೆ ನಿರ್ವಹಿಸಲು ಈ ಯೋಜನೆಯು ಸಹಕಾರಿಯಾಗಿದೆ.
'ಶಕ್ತಿ' ಯೋಜನೆ ಜಾರಿಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಬಹುತೇಕ ದೇವಾಲಯಗಳ ಆದಾಯವೂ ದುಪ್ಪಟ್ಟಾಗಿದೆ. ಪ್ರಯಾಣಿಕರು ಸಹ 'ಶಕ್ತಿ' ಯೋಜನೆಯನ್ನು ಶ್ಲಾಘಿಸಿದ್ದಾರೆ.












Click it and Unblock the Notifications