ಮುಲಾಲಿ ಕೈಯ್ಯಲ್ಲಿ ಮತ್ತೋರ್ವ ರಾಜಕಾರಣಿಯ ಸಿಡಿ: ಅಪರಿಚಿತರಿಂದ ಬೆದರಿಕೆ
ಬಳ್ಳಾರಿ, ಮೇ. 06 : ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ. ಮೇಟಿ ಸಿಡಿ ಸುದ್ದಿ ಜನರಿಂದ ಮರೆ ಆಗುವ ಮುನ್ನವೇ ಮತ್ತೋರ್ವ ರಾಜಕಾರಣಿಯ ಸಿಡಿ ಆರ್ ಟಿಐ ಕಾರ್ಯಕರ್ತ, ಅಣ್ಣಾ ಫೌಂಡೇಶನ್ ನ ಸಂಚಾಲಕ ರಾಜಶೇಖರ ಮುಲಾಲಿ ಅವರ ಮನೆ ಸೇರಿದೆ.
ಇಂದಿಲ್ಲ ನಾಳೆ, ಅದು ಮಾಧ್ಯಮಗಳಲ್ಲಿ ಫ್ಲಾಶ್ ನ್ಯೂಸ್, ಬ್ರೇಕಿಂಗ್ ನ್ಯೂಸ್ ಆಗುವ ಸಾಧ್ಯತೆಗಳಿವೆ. ಇದನ್ನು ತಿಳಿದವರು ಮುಲಾಲಿಗೆ ಲಿಖಿತ ರೂಪದಲ್ಲಿ ಪತ್ರ ಬರೆದು ಜೀವ ಬೆದರಿಕೆ ಇರುವುದಾಗಿ ತಿಳಿಸಿದ್ದಾರೆ
ಇದನ್ನು ಅರಿತ ಮುಲಾಲಿ ಅವರು, ಕುಟುಂಬದ ಸದಸ್ಯರ ಮೇಲೆ ಒಡ್ಡಿರುವ ಬೆದರಿಕೆ, ಯಾವುದೇ ಕ್ಷಣದಲ್ಲಾದರೂ ನಡೆಯಬಹುದಾದ ದಾಳಿಯ ಕುರಿತು ಸೂಕ್ತ ಭದ್ರತೆ ಒದಗಿಸಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ರಾಜಶೇಖರ ಮುಲಾಲಿ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನನಲ್ಲಿ ವಿವರ ಹೀಗಿದೆ...ಗುರುವಾರ ಅನಾಮಧೇಯ ಕೈ ಬರಹದ ಪತ್ರದ ಜೊತೆ ಓರ್ವ ರಾಜಕಾರಣಿಯ ಅನೈತಿಕ ಸಂಬಂಧದ ಸಿಡಿ ಪ್ಯಾಕೆಟ್ ಅನ್ನು ಅಪರಿಚಿತರು ನಮ್ಮ ಮನೆಯ ಕಾಂಪೌಂಡಿನೊಳಗೆ ಎಸೆದಿದ್ದಾರೆ.
ಅದರಲ್ಲಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಜೀವಬೆದರಿಕೆ ಹಾಕಿರುವ ಕೈಬರಹದ ಪತ್ರವನ್ನು ಇರಿಸಲಾಗಿದೆ.
ನಿವೃತ್ತ ಸೈನಿಕರ ತಂಡದ ಜೊತೆಯಲ್ಲಿ ಮೇ 03 ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ನಮ್ಮ ಮನೆಯಲ್ಲಿ ಪ್ರಸ್ತುತ ವಿಧಾನಸಭಾ ಚುನಾವಣೆಯ ವಿಷಯದ ಕುರಿತು ಔಪಚಾರಿಕವಾಗಿ ಚರ್ಚೆ ಮಾಡುತ್ತಿದ್ದಾಗ ಏಕಾಏಕಿ ಓರ್ವ ಅಪರಿಚಿತ ಬೈಕ್ ನಲ್ಲಿ ಏಕಾಏಕಿ ನಮ್ಮ ಮನೆಗೆ ಬಂದು, ಪ್ಯಾಕ್ ಮಾಡಿದ ಕವರ್ ಅನ್ನು ಮನೆಯ ಗೇಟ್ ಮುಂದೆ ಬಿಸಾಕಿ ಭಯ, ಆತಂಕದಿಂದ ಪರಾರಿಯಾದ ಎಂದು ತಿಳಿಸಿದ್ದಾರೆ.
ಹಾಗೆಯೇ ಏನಾದರೂ ಈ ಪತ್ರವನ್ನು ಪೊಲೀಸರಿಗೆ ಕೊಟ್ಟರೆ ಕೆಲವೇ ದಿನಗಳಲ್ಲಿ ನಿನ್ನನ್ನು ಮುಗಿಸುತ್ತೇವೆ. ಇದರ ಮೇಲೆ ನಿನ್ನ ಇಷ್ಟ ಎಂದು ಬರೆದಿದ್ದರು.
ನನಗೆ ಮತ್ತು ಕುಟುಂಬದ ಸದಸ್ಯರಿಗೆ ಸೂಕ್ತ ಭದ್ರತೆ ತುರ್ತಾಗಿ ನೀಡುವ ಮೂಲಕ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೋರಾಟ ನಡೆಸುವ ನನ್ನಂಥವರ ಬದುಕಿಗೆ ಭದ್ರತೆ ನೀಡಬೇಕು ಎಂದು ಪೊಲೀಸರಿಗೆ ಮುಲಾಲಿ ವಿನಂತಿ ಮಾಡಿಕೊಂಡಿದ್ದಾರೆ.












Click it and Unblock the Notifications