ಭೀಕರ ರಸ್ತೆ ಅಪಘಾತ; ನೀರಾವರಿ ಆಯೋಗದ ನಿರ್ದೇಶಕರು ಸಾವು
ವಿಜಯನಗರ, ಏಪ್ರಿಲ್ 01; ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಈ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಗಾಯಗೊಂಡ 8 ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುರುವಾರ ಹೊಸಪೇಟೆ ತಾಲೂಕಿನ ಮರಿಯಮ್ಮಹಳ್ಳಿ ಹೋಬಳಿಯ ಹಾರುವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇನ್ನೋವಾ ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ತಿಪಟೂರಿನಿಂದ ಕುಷ್ಠಗಿಗೆ ಹೋಗುತ್ತಿದ್ದ ಮತ್ತು ಬಾಗಲಕೋಟೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿವೆ.
ಟೈರ್ ಸ್ಫೋಟಗೊಂಡ ಪರಿಣಾಮ ಬೆಂಗಳೂರು ಕಡೆಗೆ ಹೊರಟಿದ್ದ ಸರ್ಕಾರಿ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಗಾಯಗೊಂಡ 8 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತ ಪಟ್ಟವರನ್ನು ಕೃಷ್ಣ ಜಲಭಾಗ್ಯ ನಿಗಮ ಮಂಡಳಿ ಅಧಿಕಾರಿಗಳಾದ ಕೋದಂಡ ರಾಮಸ್ವಾಮಿ (55), ಜಿತೇಂದ್ರ ಪನ್ವರ್ (50) ಮತ್ತು ಖಾಸಗಿ ಕಾರಿನಲ್ಲಿದ್ದ ಕಾವ್ಯ (35), ಶರಣ ಬಸವ (10) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ "ಒಂದು ಸರ್ಕಾರಿ ಇನ್ನೋವಾ ಕಾರು ಮತ್ತು ಇನ್ನೊಂದು ಖಾಸಗಿ ಇನ್ನೋವಾ ಕಾರು ಮುಖಮುಖಿ ಡಿಕ್ಕಿ ಹೊಡೆದಿವೆ. ಈ ಅಪಘಾತದಲ್ಲಿ 4 ಜನರು ಸಾವನ್ನಪ್ಪಿದ್ದಾರೆ" ಎಂದು ಹೇಳಿದ್ದಾರೆ.












Click it and Unblock the Notifications