ಬಳ್ಳಾರಿಯಲ್ಲಿ ರೆಡ್ಡಿ ಪಾಳಯ ಪ್ರಾಬಲ್ಯ: ಬುಡಾ ಅಧ್ಯಕ್ಷರ ಮರು ನೇಮಕ
ಬಳ್ಳಾರಿ, ಮೇ 22: ಲಾಕ್ ಡೌನ್ ನಡುವೆಯೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ದಮ್ಮೂರು ಶೇಖರ್ ಅವರನ್ನು ಮರು ನೇಮಕಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶವು ಈಗ ಮತ್ತೆ ವಿವಾದ ಸೃಷ್ಠಿಯಾಗುವ ಸಾಧ್ಯತೆ ದಟ್ಟವಾಗಿದೆ.
ಈ ಹಿಂದೆ ರೆಡ್ಡಿ ಸಹೋದರರ ಪರಮಾಪ್ತರಾಗಿದ್ದ ದಮ್ಮೂರು ಶೇಖರ್ ಅವರನ್ನು ನೇಮಕಗೊಳಿಸಿದ್ದರಿಂದ ಜಿಲ್ಲೆಯ ಬಿಜೆಪಿ ಪಾಳೆಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಬಿಜೆಪಿಯ ಜಿಲ್ಲಾ ಅಧ್ಯಕ್ಷರಾದಿಯಾಗಿ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆಯ ಪ್ರಹಸನಕ್ಕೂ ಸಾಕ್ಷಿಯಾಗಿತ್ತು.

ಇದರಿಂದ ಗಲಿಬಿಲಿಗೊಂಡ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕೂಡಲೇ ಬುಡಾ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ ಆದೇಶವನ್ನು ರದ್ದುಪಡಿಸಿದ್ದರು. ಇದೀಗ ಮತ್ತೊಮ್ಮೆ ದಮ್ಮೂರು ಶೇಖರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ದಮ್ಮೂರು ಶೇಖರ್ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಪರಮಾಪ್ತ ಎಂದು ಹೇಳಲಾಗುತ್ತಿದೆ.

ಆದೇಶ ಹೀಗಿದೆ
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯಿದೆ, 1987 ರ ಕಲಂ 3(3 X ಎ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಮ್ಮೂರು ಶೇಖರ್ ಅವರನ್ನು ಈ ತತ್ ಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 3 ವರ್ಷದ ಅವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.












Click it and Unblock the Notifications