ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಸಮಾವೇಶ
ಬಳ್ಳಾರಿ, ಏ.4 : ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಹನುಮಂತಪ್ಪ ಪರವಾಗಿ ಮತ್ತು ಮಂಗಳೂರಿನಲ್ಲಿ ಜನಾರ್ದನ ಪೂಜಾರಿ ಪರವಾಗಿ ರಾಹುಲ್ ಗಾಂಧಿ ಮತ ಯಾಚನೆ ಮಾಡಲಿದ್ದಾರೆ. ಮೊದಲು ಬಳ್ಳಾರಿಯಲ್ಲಿ ಸಮಾವೇಶ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ರಾಹುಲ್ ಗಾಂಧಿ ಅವರ ಸಮಾವೇಶ ಆಯೋಜಿಸಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ರಾಹುಲ್ ಗಾಂಧಿ ಸಮಾವೇಶಕ್ಕೆ ಆಗಮಿಸಿದರು. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಹನುಮಂತಪ್ಪ ಮುಂತಾದವರು ರಾಹುಲ್ ಗಾಂಧಿ ಅವರ ಜೊತೆಗಿದ್ದರು. [ಮೋದಿ ಮಾತನ್ನು ಕನ್ನಡಲ್ಲಿ ಕೇಳಿರಿ]

ರಾಹುಲ್ ಗಾಂಧಿ ಭಾಷಣ : ಕರ್ನಾಟಕದಲ್ಲಿ ದೇವರಾಜ ಅರಸು ಅವರ ಕಾಲದಲ್ಲಿ ಎಲ್ಲಾ ವರ್ಗಗಳ ಅಭಿವೃದ್ಧಿ ಆರಂಭವಾಯಿತು. ಕರ್ನಾಟಕದ ಬೆಂಗಳೂರು ಐಟಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿತು. ಅದಕ್ಕೆ ರಾಜೀವ್ ಗಾಂಧಿ ಅವರ ದೂರದೃಷ್ಠಿಯ ಆಲೋಚನೆ ಮತ್ತು ಎಸ್ಎಂ ಕೃಷ್ಣ ಅವರ ಶ್ರಮ ಕಾರಣ.
* ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಹೊಡೆದರು ಎಂದು ನಿಮಗೆ ತಿಳಿದಿದೆ. ಬಳ್ಳಾರಿ ಸರ್ಕಾರದ ದರ್ಬಾರ್ ಈಗ ಅಂತ್ಯಗೊಂಡಿದೆ. ಜನರಿಗೆ ವಂಚಿಸಿದರು ಜೈಲು ಸೇರಿದ್ದಾರೆ. [ರಾಹುಲ್ ಮಂಗಳೂರಿನಲ್ಲಿ ಹೇಳಿದ್ದೇನು?]
* ಬಿಜೆಪಿ ನಾಯಕರ ದೇಶದ ತುಂಬಾ ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರೆ. ಆದರೆ, ಯಡಿಯೂರಪ್ಪ ಅವರ ಬಗ್ಗೆ ಮೌನ ವಹಿಸಿದ್ದಾರೆ. ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಂಡಿರುವ ಬಿಜೆಪಿ ಭ್ರಷ್ಟಾಚಾರದ ಕುರಿತು ಮಾತನಾಡುತ್ತದೆ. ಕರ್ನಾಟಕದಲ್ಲಿ ಪಕ್ಷದ ಸಮಾವೇಶ ನಡೆಸುವ ಬಿಜೆಪಿ ನಾಯಕರು ವೇದಿಕೆಯಲ್ಲಿ ಯಡಿಯೂರಪ್ಪ ಅವರನ್ನು ಕೂರಿಸಿಕೊಂಡಿರುತ್ತಾರೆ.
* ಬಳ್ಳಾರಿ-ಸಿಗರುಪ್ಪ-ಲಿಂಗಸಗೂರು ರೈಲು ಮಾರ್ಗವನ್ನು ಕೇಂದ್ರದ ಯುಪಿಎ ಸರ್ಕಾರ ಇಲ್ಲಿನ ಜನರಿಗೆ ನೀಡಿದೆ. 371ನೇ ವಿಧಿಗೆ ತಿದ್ದುಪಡಿ ತಂದು ಜಿಲ್ಲೆಯ ಅಭಿವೃದ್ಧಿ ಮಾಡಲು ಅವಕಾಶ ನೀಡಿದ್ದೇವೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ತಂದು ಜನರು ಹಸಿವಿನಿಂದ ಬಳಲದಂತೆ ಮಾಡಿದೆ.
* ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದ್ದು, ಬಡವರ ಅಭಿವೃದ್ಧಿಗಾಗಿ ಪಕ್ಷ ಕೆಲಸ ಮಾಡುತ್ತದೆ. ಬಡವರ ಅಭಿವೃದ್ಧಿಗಾಗಿ ನಾವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಅನೇಕ ಹೊಸ ಅಂಶಗಳನ್ನು ಹೇಳಿದ್ದೇವೆ. [ಕಾಂಗ್ರೆಸ್ ಪ್ರಣಾಳಿಕೆ ನೋಡಿ]
* ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತದೆ ಆದ್ದರಿಂದ ಲೋಕಪಾಲ್ ಬಿಲ್ ಜಾರಿಗೆ ತಂದೆವು, ಉಳಿದ ಐದು ಮಸೂದೆಗಳನ್ನು ಅನುಮೋದನೆ ಮಾಡಲು ಪ್ರತಿಪಕ್ಷಗಳು ಸಹಕಾರ ನೀಡಲಿಲ್ಲ.
* ಕಾಂಗ್ರೆಸ್ ಪಕ್ಷವನ್ನು ನೀವು ನಮ್ಮನ್ನು ಬೆಂಬಲಿಸುತ್ತೀರಿ ಎಂಬ ವಿಶ್ವಾಸ ನಮಗಿದೆ. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ. ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.
* ಅಕ್ರಮ ಗಣಿಗಾರಿಕೆ ನಡೆಸಿ ಬಳ್ಳಾರಿಯ ರಾಜನಾಗಿ ಮೆರೆದವರು ಜೈಲು ಸೇರಿದ್ದಾರೆ. ಜನರಿಗೆ ವಂಚಿಸಿದವರು ಬಳ್ಳಾರಿಗೆ ವಾಪಸ್ ಬರುವುದಿಲ್ಲ. ನಿಮ್ಮ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು ರಾಹುಲ್ ಗಾಂಧಿ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು. [ಚಿತ್ರಗಳಲ್ಲಿ ನೋಡಿ ರಾಹುಲ್ ಸಮಾವೇಶ]
ಸಿದ್ದರಾಮಯ್ಯ ಭಾಷಣ : ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳೆದ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹದಗೆಟ್ಟಿದ್ದ ಕಾನೂನು ಸುವ್ಯಸ್ಥೆ ಸದ್ಯ ಹತೋಟಿಗೆ ಬಂದಿದೆ. ಆದ್ದರಿಂದ ರಾಜ್ಯದ 28 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲರೂ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ ಬಿ.ಶ್ರೀರಾಮುಲು ಅವರಿಗೆ ನೀವು ಮತ ಹಾಕುತ್ತಿರಾ? ರಾಜ್ಯದ ಹತ್ತು ತಿಂಗಳ ಕಾಂಗ್ರೆಸ್ ಆಡಳಿತ ಮತ್ತು ಯುಪಿಎ ಸರ್ಕಾರದ ಸಾಧನೆಯನ್ನು ನೋಡಿ ದೇಶದ ಹಿತಾಸಕ್ತಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅಕ್ರಮ ಗಣಿಗಾರಿಕೆ ಮಾಡಿದವರಿಗೆ ಕಾನೂನಿನಂತೆ ಶಿಕ್ಷೆ ಆಗಬೇಕಾದರೆ, ಕಾಂಗ್ರೆಸ್ ಬೆಂಬಲಿಸಿ ಎಂದರು.












Click it and Unblock the Notifications