ಬಳ್ಳಾರಿಯಲ್ಲಿ ಮದ್ಯ ಸಿಗದೇ ಖಿನ್ನನಾಗಿ ವ್ಯಕ್ತಿ ಸಾವು
ಬಳ್ಳಾರಿ, ಏಪ್ರಿಲ್ 03: ಕುಡಿಯಲು ಮದ್ಯ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೊಬ್ಬರು ಊಟ ಬಿಟ್ಟು ಸಾವನ್ನಪ್ಪಿರುವ ಘಟನೆ ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಸ್ಥಾನದ ಬಳಿ ನಡೆದಿದೆ.
ಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಆಗಿ ಎಲ್ಲೆಡೆ ಮದ್ಯ ಮಾರಾಟ ಸ್ಥಗಿತವಾಗಿದೆ. ಲಾಕ್ ಡೌನ್ ಗೂ ಮುನ್ನವೇ ಮನೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಕೊಂಡಿದ್ದ ಮದ್ಯ ಸಹ ಖಾಲಿಯಾಗಿದೆ. ಈ ಕಾರಣ ಜಿಲ್ಲೆಯ ಸಿರುಗುಪ್ಪ ತಾಲೂಕು ತೆಕ್ಕಲಕೋಟೆಯ ನಿವಾಸಿ ಶಶಿಧರ ಕಳೆದ ಎರಡು ಮೂರು ದಿನಗಳಿಂದ ಗ್ರಾಮದ ಎಲ್ಲ ಕಡೆ ಮದ್ಯಕ್ಕಾಗಿ ಓಡಾಡಿದ್ದಾರೆ. ಎಲ್ಲಿಯೂ ಮದ್ಯ ಸಿಕ್ಕಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ, ಊಟವನ್ನೂ ಬಿಟ್ಟಿದ್ದು, ಇಂದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ದಾವಣಗೆರೆಯಲ್ಲೂ ಮೆಕಾನಿಕ್ ಆತ್ಮಹತ್ಯೆ: ಮಧ್ಯ ಕರ್ನಾಟಕ ದಾವಣಗೆರೆಯಲ್ಲೂ ಮದ್ಯ ಸಿಗದ ಕಾರಣಕ್ಕೆ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ಭರತ್ ಕಾಲೊನಿ ನಿವಾಸಿ, ಮೆಕಾನಿಕ್ ಕೆಲಸ ಮಾಡುತ್ತಿದ್ದ ರವಿಚಂದ್ರ (43) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಮದ್ಯವ್ಯಸನಿಯಾಗಿದ್ದು, ಹತ್ತು ದಿನಗಳಿಂದ ಎಣ್ಣೆ ಇಲ್ಲದೆ ಪರದಾಡುತ್ತಿದ್ದ. ಎಲ್ಲಿಯೂ ಮದ್ಯ ಸಿಗದ ಕಾರಣ ಬೇಸತ್ತು ಇಂದು ಬೆಳಗಿನ ಜಾವ ನಿರ್ಜನ ಪ್ರದೇಶದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications