ಶವಸಂಸ್ಕಾರಕ್ಕೂ ಪರದಾಟ; ಅಸುಂಡಿ ಗ್ರಾಮದ ದಾರುಣ ಕಥೆ
ಬಳ್ಳಾರಿ, ಸೆಪ್ಟೆಂಬರ್ 25: ಊರಿನಲ್ಲಿ ಶವ ಸಂಸ್ಕಾರಕ್ಕೂ ಸೂಕ್ತ ವ್ಯವಸ್ಥೆಯಿಲ್ಲದೆ ತುಂಬಿದ ಹಳ್ಳ ದಾಟಿಕೊಂಡೇ ಶವ ಹೊತ್ತುಕೊಂಡು ಜನರು ತೆರಳಿದ ದಾರುಣ ಘಟನೆ ಬಳ್ಳಾರಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಅಸುಂಡಿ ಗ್ರಾಮ ನಿವಾಸಿ ಪರಶುರಾಮ್ (45) ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಸುಂಡಿ ಗ್ರಾಮದಲ್ಲಿದ್ದ ಹಳ್ಳ ತುಂಬಿ ಹರಿಯುತ್ತಿತ್ತು. ಗ್ರಾಮದ ಆ ಬದಿ ಸ್ಮಶಾನವಿದೆ. ಹೀಗಾಗಿ ತುಂಬಿದ ನೀರಿನಲ್ಲಿ ಶವ ಹೊತ್ತೊಯ್ಯಲಾಗುವುದಿಲ್ಲ ಎಂದು ಅಂದಿನಿಂದ ಶವವನ್ನು ಇಟ್ಟುಕೊಂಡು ನೀರು ಇಳಿಯಲು ಕಾದು ಕುಳಿತಿದ್ದರು. ಆದರೆ ನೀರು ಇಳಿಯುವ ಯಾವ ಲಕ್ಷಣವೂ ಕಾಣಲಿಲ್ಲ. ಹೀಗಾಗಿ ಬೇರೆ ವಿಧಿಯಿಲ್ಲದೆ ಕುಟುಂಬದವರು, ಗ್ರಾಮಸ್ಥರು ಸೇರಿ ನಿನ್ನೆ ಶವವನ್ನು ಶವದ ಪೆಟ್ಟಿಗೆಯಲ್ಲಿ ಹೊತ್ತುಕೊಂಡು ಹಳ್ಳ ದಾಟಿ ಶವ ಸಂಸ್ಕಾರ ಮಾಡಿದ್ದಾರೆ.
ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿದ್ದು, ಇದನ್ನು ದಾಟುವಾಗ ಸ್ವಲ್ಪ ಯಾಮಾರಿದರೂ ಕೊಚ್ಚಿ ಹೋಗುವಂತಿದೆ. ಪದೇ ಪದೇ ಹೀಗೆ ಹಳ್ಳದಲ್ಲಿ ಪ್ರವಾಹದಿಂದಾಗಿ ನೀರು ತುಂಬುತ್ತಿದೆ. ಅಲ್ಲದೆ ಗ್ರಾಮದಲ್ಲಿ ಮೇಲ್ವರ್ಗ, ಕೆಳ ವರ್ಗದವರಿಗೆ ಪ್ರತ್ಯೇಕ ಸ್ಮಶಾನವಿದೆ. ಕೆಳ ವರ್ಗದ ಸ್ಮಶಾನ ಹಳ್ಳದ ಆ ಬದಿಗೆ ಇರುವುದರಿಂದ ಗ್ರಾಮಸ್ಥರು ಶವ ಸಂಸ್ಕಾರ ಮಾಡಲು ಪರದಾಡುವ ಸ್ಥಿತಿ ಇದೆ.

ಈ ಕುರಿತು ಪಿಡಿಒ, ತಹಶೀಲ್ದಾರ್ ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಈ ಹಿಂದೆ ಶಾಸಕ ನಾಗೇಂದ್ರ ಕೂಡ ಚುನಾವಣೆ ವೇಳೆ ಸ್ಮಶಾನಕ್ಕೆ ಜಾಗ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ. ಈ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications