IN PICS : ಶ್ರೀರಾಮುಲು ಹೊಸ ಅರಮನೆ 'ಅರುಣಾ ಗಾರ್ಡನ್'
ಬಳ್ಳಾರಿ ಸಂಸದ ಶ್ರೀರಾಮುಲು ಈಚೆಗೆ ತಮ್ಮ ಕನಸಿನ ಬಂಗಲೆಯ ಗೃಹ ಪ್ರವೇಶ ಮಾಡಿದ್ದಾರೆ. ಅವರ ಗೆಳೆಯ ಜನಾರ್ದನ ರೆಡ್ಡಿ ರಿಬ್ಬನ್ ಕತ್ತರಿಸಿ ಮನೆ ಉದ್ಘಾಟಿಸಿದ್ದಾರೆ. ಈ ಬಂಗಲೆ ನಿರ್ಮಾಣಕ್ಕೆ ಐವತ್ತು ಕೋಟಿ ರುಪಾಯಿ ಆಗಿದೆ ಎಂಬುದು ಸದ್ಯದ ಸುದ್ದಿ.
ಬೆಂಗಳೂರು, ನವೆಂಬರ್ 5: ಬಳ್ಳಾರಿಯಿಂದ ಮತ್ತೊಂದು ಸುದ್ದಿ: ಈ ಬಾರಿ ಒಳ್ಳೆ ಕಾರಣಗಳಿಂದಾಗಿ. ಸಂಸದ ಬಿ.ಶ್ರೀರಾಮುಲು ಗೃಹ ಪ್ರವೇಶ ಮಾಡಿದ್ದಾರೆ. ಇದಕ್ಕೆ ಅರುಣಾ ಗಾರ್ಡನ್ ಎಂದು ಹೆಸರಿಡಲಾಗಿದೆ. ಇದನ್ನು ಬರೀ ಗೃಹ ಅನ್ನಬೇಕೋ ಅಥವಾ ಅರಮನೆ ಅನ್ನಬೇಕೋ ಎಂಬುದು ನಿಮಗೆ ಬಿಟ್ಟಿದ್ದು. ಏಕೆಂದರೆ ಈ ಭವ್ಯ ಬಂಗಲೆ ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದೆ.
ಮಾಧ್ಯಮಗಳಲ್ಲಿ ಈ ಬಗ್ಗೆ ಈಗಾಗಲೇ ಸುದ್ದಿಯಾಗಿದ್ದು, ಶ್ರೀರಾಮುಲು ಈಚೆಗಷ್ಟೇ ಗೃಹಪ್ರವೇಶ ಮಾಡಿ ಮುಗಿಸಿದ್ದಾರೆ. ಶ್ರೀರಾಮುಲು ಜೀವದ ಗೆಳೆಯ ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆ ಸಲುವಾಗಿ ಬಳ್ಳಾರಿಗೆ ಹೋದವರು, ಗೃಹ ಪ್ರವೇಶದಲ್ಲಿ ಪಾಲ್ಗೊಂಡು, ಸ್ವತಃ ರಿಬ್ಬನ್ ಕತ್ತರಿಸಿದ್ದಾರೆ. ಆ ನಂತರ ಮಾಧ್ಯಮದವರ ಜೊತೆ ಮಾತನಾಡಿ, ಸ್ನೇಹಿತ ಶ್ರೀರಾಮುಲು ನನ್ನಿಂದಲೇ ಈ ಕೆಲಸ ಮಾಡಿಸಬೇಕು ಎಂದು ಕಾದಿದ್ದರು ಎಂದಿದ್ದಾರೆ.[ಜನಾ ರೆಡ್ಡಿಗೆ ಕುಡಿದು-ಕುಣಿದು ಅದ್ಧೂರಿ ಸ್ವಾಗತ, ಕೇಸು ಹಾಕಿದ ಪೊಲೀಸರು]

ಈ ಕನಸಿನ ಮನೆ ಕಟ್ಟಿ ಮುಗಿಸಿ ಬಹಳ ಕಾಲವೇ ಆಯಿತು. ಆದರೆ ನಾನು ಬರಲಿ ಎಂದು ಕಾದಿದ್ದರು. ಅವರಿಗೆ ಸದಾ ಜನರಿರಬೇಕು. ಆದ್ದರಿಂದಲೇ ಗೃಹ ಪ್ರವೇಶ ಕೂಡ ಇಷ್ಟು ಜನರ ಮಧ್ಯೆ ನಡೆದಿದೆ ಎಂದು ಹೇಳಿದ್ದಾರೆ. ಅಂದಹಾಗೆ ಬಂಗಲೆ ನಿರ್ಮಿಸಿರುವುದು ಬಳ್ಳಾರಿ ಸಿರಗುಪ್ಪ ರಸ್ತೆ ಹವಂಬಾಯಿಯ ಹತ್ತಿರ. ಇದೇನು ಅಂದಾಜೋ ಅಥವಾ ಇದಕ್ಕಿಂತ ಹೆಚ್ಚಿನ ಹಣ ಆಗಿದೆಯೋ, ಒಟ್ಟು ಐವತ್ತು ಕೋಟಿ ಈ ಬಂಗಲೆ ನಿರ್ಮಾಣಕ್ಕೆ ಆಗಿದೆ ಎಂಬುದು ಸದ್ಯದ ಮಾಹಿತಿ.

ಮುಂಬೈ ಮೂಲದ ಡೆಕೊರೇಟರ್ಸ್
ವಾಸ್ತು ದೋಷ ಎಂಬ ಕಾರಣಕ್ಕೆ ಮನೆ ಕೆಡವಿ, 2008ರಲ್ಲಿ ಈ ಮನೆಯ ನಿರ್ಮಾಣ ಶುರು ಮಾಡಿದ್ದರು ಶ್ರೀರಾಮುಲು. ಈ ಮನೆಯ ಒಳ ವಿನ್ಯಾಸವನ್ನು ಮುಂಬೈ ಮೂಲದ ಡೆಕೋರೇಟರ್ಸ್ ಮಾಡಿದ್ದಾರಂತೆ. ಇನ್ನು ಮೊದಲ ಅಂತಸ್ತಿನಲ್ಲಿ ಕಚೇರಿ ಮತ್ತು ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಚಿತ್ರಮಂದಿರ, ಈಜುಕೊಳ
ಎರಡು ಅಂತಸ್ತಿನ ಕಟ್ಟಡದಲ್ಲಿ ಈಜುಕೊಳ, ಬೋನ್ಸಾಯ್ ಗಾರ್ಡನ್, ಮೊದಲ ಅಂತಸ್ತಿಗೆ ನೇರವಾಗಿ ಕಾರಿನಲ್ಲಿ ತೆರಳಲು ವ್ಯವಸ್ಥೆ ಹೀಗೆ ಆಧುನಿಕ, ಅಗತ್ಯ ಸವಲತ್ತು-ಸೌಕರ್ಯಗಳು ಇಲ್ಲಿವೆ. ಚಿತ್ರಮಂದಿರ, ಉದ್ಯಾನ, ಅಡುಗೆ ಮನೆ, ದೇವರ ಮನೆ, ಡೈನಿಂಗ್ ಹಾಲ್ ಇದ್ದು, ಎರಡನೇ ಅಂತಸ್ತಿನಲ್ಲಿ 60x40 ಅಳತೆಯ ಐದು ಕೋಣೆಗಳಿವೆಯಂತೆ.

ಆರ್ಥಿಕ ಸಮಸ್ಯೆ
ಆದರೆ, ಮನೆ ನಿರ್ಮಾಣಕ್ಕೆ ತಡವಾಗಿರುವುದಕ್ಕೆ ಬೇರೆ ಕಾರಣಗಳೇ ಇವೆ ಎನ್ನುವವರಿದ್ದಾರೆ. ಬಿಎಸ್ ಆರ್ ಪಕ್ಷ ಸ್ಥಾಪಿಸಿದ ನಂತರ ಶ್ರೀರಾಮುಲು ಆರ್ಥಿಕ ಸಮಸ್ಯೆ ಎದುರಿಸುವಂತಾಯಿತು. ಜತೆಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಜಾಮೀನು ದೊರೆತರೂ ಬಳ್ಳಾರಿ ಪ್ರವೇಶಿಸುವಂತಿರಲಿಲ್ಲ. ಅದರಿಂದಲೂ ಗೃಹಪ್ರವೇಶ ಕಾರ್ಯಕ್ರಮ ಮುಂದೂಡಲಾಗಿತ್ತು ಎಂಬುದು ಚಾಲ್ತಿಯಲ್ಲಿರುವ ಸುದ್ದಿ.

ವಿವಿಧೆಡೆ ಜ್ಯೋತಿಷಿಗಳು, ಪುರೋಹಿತರು
ಜ್ಯೋತಿಷ್ಯ, ದೇವರು, ವಾಸ್ತು ಬಗ್ಗೆ ಅಪಾರ ನಂಬಿಕೆ ಇರುವ ಶ್ರೀರಾಮುಲು ಕೇರಳ, ತಮಿಳುನಾಡು, ಚಿಕ್ಕಮಗಳೂರು ಮತ್ತಿತರ ಕಡೆಯಿಂದ ಜ್ಯೋತಿಷಿಗಳು, ಪುರೋಹಿತರನ್ನು ಗೃಹಪ್ರವೇಶ ಕಾರ್ಯಕ್ರಮಕ್ಕೆ ಕರೆಸಿದ್ದರು.












Click it and Unblock the Notifications