Breaking: ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಣೆ:ಶಾಸಕರಿಂದ ಪತ್ತೆ
ಬಳ್ಳಾರಿ, ಜುಲೈ 24: ಬಡಜನರಿಗಾಗಿ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೊರ ರಾಜ್ಯಗಳಿಗೆ ಸಾಗಿಸುತ್ತಿದ್ದ ಜಾಲ ಒಂದು ಶಾಸಕರ ದಾಳಿಯಿಂದ ಪತ್ತೆಯಾದ ಘಟನೆ ಶನಿವಾರ ತಡರಾತ್ರಿ ಜಿಲ್ಲೆಯಲ್ಲಿ ನಡೆದಿದೆ.
ಕಂಪ್ಲಿ ಶಾಸಕರಾದ ಜೆ. ಎನ್. ಗಣೇಶ್ ಶನಿವಾರ ತಡರಾತ್ರಿ ದಾಳಿ ಮಾಡಿ 400 ಚೀಲ ಅಕ್ಕಿ ಸಾಗಿಸತ್ತಿದ್ದ ಲಾರಿಯನ್ನು ಪತ್ತೆ ಮಾಡಿದ್ದಾರೆ. ಇದೇ ರೀತಿ ದಂಧೆಕೋರರು ನಿತ್ಯ ಕಂಪ್ಲಿಯಿಂದ ತಮಿಳುನಾಡು ಸೇರಿದಂತೆ ಇನ್ನಿತರ ನೆರೆಯ ರಾಜ್ಯಗಳಿಗೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
400 ಅಕ್ಕಿ ಚೀಲ ಸಾಗಿಸತ್ತಿದ್ದ ಲಾರಿಯ ಮೂಲಕ ನಿತ್ಯ ಒಂದೂವರೆ ಲಕ್ಷ ಲಾಭ ಪಡೆಯಲಾಗುತ್ತಿತ್ತು. ಇದಕ್ಕೆ ಕಾರಣರಾದವರು ಯಾರು?, ಅದರ ಹಿಂದಿರುವ ಪ್ರಭಾವಿ ನಾಯಕ ಯಾರು? ಎಂಬುದು ಪತ್ತೆ ಆಗಬೇಕಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಶಾಸಕರ ತಂಡಕ್ಕೆ ನಾಲ್ವರು ಸಿಕ್ಕಿಬಿದ್ದಿದ್ದು, ಉಳಿದವರು ತಪ್ಪಿಸಿಕೊಂಡಿದ್ದಾರೆ.

ದಂಧೆಯಲ್ಲಿ ತೊಡಗಿಕೊಂಡಿದ್ದವರು ಸ್ಥಳೀಯರು ಅಲ್ಲ. ಸ್ಥಳೀಯ ನಿವಾಸಿಗಳು ಅಲ್ಲದ ಹಾಗೂ ಕನ್ನಡ ಭಾಷೆ ಬಾರದ ವ್ಯಕ್ತಿಗಳು ಈ ದಂಧೆಯಲ್ಲಿ ತೊಡಗಿಕೊಂಡು ರಾಜ್ಯದ ಅನ್ನ ಯೋಜನೆ ಅಕ್ಕಿಗೆ ಕನ್ನ ಹಾಕುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ನಿತ್ಯ ಇಷ್ಟು ಬೃಹತ್ ಪ್ರಮಾಣದಲ್ಲಿ ಅಕ್ಕಿ ಮೂಟೆಗಳನ್ನು ಸಾಗಿಸಲಾಗುತ್ತಿದೆ ಎಂದರೆ ದಂಧೆ ಹಿಂದೆ ಯಾರದ್ದೋ ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವ ಅನುಮಾನ ವ್ಯಕ್ತವಾಗಿದೆ. ಆದರೆ ಇಲ್ಲಿ ಕೆಲಸ ಮಾಡುತ್ತಿದ್ದ ಸದ್ಯ ಬಂಧಿತರಾಗಿರುವ ಕಾರ್ಮಿಕರು ಯಾರು, ಯಾರ ಸೂಚನೆ ಮೇರೆಗೆ ಅವರು ಈ ದಂಧೆಯಲ್ಲಿ ತೊಡಗಿಕೊಂಡಿದ್ದರು ಎಂಬುದು ತಿಳಿಯಬೇಕಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿರಾರು ಚೀಲ ಅಕ್ಕಿ, ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಎಲ್ಲವನ್ನೂ ವಶಪಡಿಸಿಕೊಂಡಿದ್ದಾರೆ.












Click it and Unblock the Notifications