ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ; ಶಾಸಕ ಭೀಮಾ ನಾಯ್ಕ
ಬಳ್ಳಾರಿ, ಫೆಬ್ರವರಿ 14: ಬಳ್ಳಾರಿಯ ಹೊಸಪೇಟೆ ಹೊರವಲಯದಲ್ಲಿ ಮರಿಯಮ್ಮನ ಹಳ್ಳಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ರವಿ ನಾಯ್ಕ ಅವರ ಮನೆಗೆ ಶಾಸಕ ಭೀಮಾ ನಾಯ್ಕ ಭೇಟಿ ನೀಡಿ ಸಾಂತ್ವನ ಹೇಳಿದರು.
"ಈ ಪ್ರಕರಣದಲ್ಲಿ ಪೊಲೀಸರು ಒತ್ತಡದಿಂದ ಕೆಲಸ ಮಾಡಿದ್ದಾರೆ. ಮರಿಯಮ್ಮನ ಹಳ್ಳಿ ಪೊಲೀಸರು ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡ್ತಿದ್ದಾರೆ. ಪ್ರಾಮಾಣಿಕ ತನಿಖೆಯಾಗಬೇಕು. ಈ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವೆ" ಎಂದು ತಿಳಿಸಿದ್ದಾರೆ.
ಬಳ್ಳಾರಿ ಅಪಘಾತ ಪ್ರಕರಣ; ಸತ್ತ ರವಿ ನಾಯ್ಕನ ಮನೆಯವರಿಗೆ ಉತ್ತರ ನೀಡುವವರಾರು?
"ಅಪಘಾತವಾದ ಕಾರಿನಲ್ಲಿ ಆರ್. ಅಶೋಕ ಅವರ ಮಗ ಇದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಈ ಬಗ್ಗೆ ತನಿಖೆಯಾಗಬೇಕು. ಕಾರಿನಲ್ಲಿದ್ದವರು ಐದು ಜನರೋ ನಾಲ್ಕು ಜನರೋ ಅನ್ನೋ ಬಗ್ಗೆ ಅನುಮಾನಗಳಿವೆ. ಅಶೋಕ ಅವರ ಮಗ ಇದ್ದಾರೋ ಇಲ್ಲವೋ ಅನ್ನುವುದು ಗೊತ್ತಾಗಬೇಕಾದರೆ ಕಾರಿನಲ್ಲಿದ್ದವರನ್ನು ಬಂಧಿಸಬೇಕು. ಆಗ ನಿಜವಾದ ಆರೋಪಿಗಳು ಯಾರು ಎನ್ನುವುದು ಗೊತ್ತಾಗುತ್ತದೆ" ಎಂದಿದ್ದಾರೆ.
ಮೃತನ ಕುಟುಂಬಕ್ಕೂ ಸಾಂತ್ವನ ಹೇಳಿದ ಶಾಸಕ ಭೀಮಾ ನಾಯ್ಕ, "ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕು. ಆಸ್ಪತ್ರೆಗೆ ಹೋಗಿದ್ದಾಗ ಎಷ್ಟು ಜನರು ಇದ್ದರು, ಮರಣೋತ್ತರ ಪರೀಕ್ಷೆ ಮಾಡಲು ಪೊಲೀಸರೇಕೆ ವೈದ್ಯರ ಮೇಲೆ ಒತ್ತಡ ಹಾಕಿದರು ಎಂಬುದೆಲ್ಲ ತನಿಖೆಯಿಂದ ಹೊರಬರಬೇಕು" ಎಂದರು. ಇದೇ ಸಂದರ್ಭ, ಅವರ ಸೋದರತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ ಅಪಘಾತ ಪ್ರಕರಣ; ತನಿಖೆಗೆ ಮೂರು ತಂಡ ರಚನೆ
ಶಾಸಕ ಭೀಮಾ ನಾಯ್ಕ ಅವರ ಮುಂದೆ ರವಿ ನಾಯ್ಕ ಪೋಷಕರು ಕಣ್ಣೀರಿಟ್ಟರು. ಪೋಷಕರಿಗೆ ಸಾಂತ್ವನ ಹೇಳಿದ ಭೀಮಾ ನಾಯ್ಕ, ಕುಟುಂಬಕ್ಕೆ 50 ಸಾವಿರ ರೂಪಾಯಿ ಕೊಟ್ಟರು.