ಜನಾರ್ದನ ರೆಡ್ಡಿ ಸ್ನೇಹಕ್ಕೆ ಜೀವ ಕೊಡಲು ಸಿದ್ಧನಿದ್ದೇನೆ: ಸ್ನೇಹ ಮಂತ್ರ ಜಪಿಸಿದ ಶ್ರೀರಾಮುಲು
ಬಳ್ಳಾರಿ, ಡಿಸೆಂಬರ್ 8: ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಬಂಡಾಯದ ಮುನ್ಸೂಚನೆ ನೀಡುತ್ತಿದ್ದಂತೆ ಸಚಿವ ಶ್ರೀರಾಮುಲು ಅವರು ಸ್ನೇಹದ ಮಂತ್ರ ಜಪಿಸಲು ಮುಂದಾಗಿದ್ದಾರೆ.
ಜನಾರ್ದನ ರೆಡ್ಡಿ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಫರ್ಧಿಸಲು ಸಿದ್ಧತೆ ಆರಂಭಿಸಿದ್ದು, ಬಿಜೆಪಿ ಬಗ್ಗೆ ಅಸಮಾಧಾನಗೊಂಡು ಹೊಸ ಪಕ್ಷ ಕಟ್ಟುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜನಾರ್ದನ ರೆಡ್ಡಿ, ಅಭಿಮಾನ ಅಂದರೆ ಬಿಜೆಪಿ, ನನ್ನ ಸಂಪೂರ್ಣ ರಾಜಕೀಯ ಜೀವನ ಅಂದರೆ ಅದು ಬಿಜೆಪಿ ಎಂದಿದ್ದರು.
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಆಪ್ತಮಿತ್ರರಾಗಿದ್ದ ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಶ್ರೀರಾಮುಲು ಗೈರಾಗಿದ್ದು, ರಾಜಕೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಇದೀಗ ಸಚಿವ ಶ್ರೀರಾಮುಲು ತಮ್ಮ ಹಾಗೂ ಜನಾರ್ದನ ರೆಡ್ಡಿ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.
ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯ
ಬಳ್ಳಾರಿ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮನವೊಲಿಸಿ, ಅವರ ಅಸಮಾಧಾನ ಹೋಗಲಾಡಿಸಲು ನಾನು ಸಿದ್ಧನಿದ್ದೇನೆ. ಅವರೊಂದಿಗಿನ ಸ್ನೇಹಕ್ಕೆ ಜೀವ ಕೊಡಲು ತಯಾರಿದ್ದೇನೆ" ಎಂದು ಶ್ರೀರಾಮುಲು ಹೇಳಿದ್ದಾರೆ.
"ಜನಾರ್ದನ ರೆಡ್ಡಿ ಅವರು ನನ್ನ ಆತ್ಮೀಯ ಸ್ನೇಹಿತರು, ಸ್ನೇಹ ಅಂದ್ರೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಎನ್ನುವಂತೆ ಎಲ್ಲರೂ ಮಾತಾಡುತ್ತಾರೆ. ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ ಶ್ರೀರಾಮುಲು. ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯ. ಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ಸ್ನೇಹ ಮತ್ತು ಪಾರ್ಟಿ ವಿಚಾರ ಬಂದಾಗ ಎರಡನ್ನೂ ಕೂಡ ಸರಿದೂಗಿಸಿಕೊಂಡು ಹೋಗುವೆ ಎಂದು ಶ್ರೀರಾಮುಲು ತಮ್ಮ ನಡೆಯನ್ನು ತಿಳಿಸಿದ್ದಾರೆ.
ನನ್ನ ಸ್ನೇಹಿತ ಅಸಮಾಧಾನಗೊಳ್ಳದಂತೆ ನಾನು ಮಾತನಾಡುವೆ
"ರಾಜಕಾರಣ ವಿಚಾರ ಬಂದಾಗ ಜನಾರ್ದನ ರೆಡ್ಡಿ ಅವರ ಬಗ್ಗೆ ಅಲ್ಲಿಇಲ್ಲಿ ಸುದ್ದಿಗಳನ್ನು ಕೇಳುತ್ತಿದ್ದೇವೆ. ನಾನು ಇನ್ನೂ ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿಲ್ಲ. ಜನಾರ್ದನ ರೆಡ್ಡಿ ಅವರ ಸದ್ಯದ ರಾಜಕೀಯದ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರು ನನಗೆ ಸಿಕ್ಕ ಬಳಿಕ ಅವರನ್ನು ಕೂರಿಸಿಕೊಂಡು ಮಾತಾಡುವೆ. ನನ್ನ ಸ್ನೇಹಿತ ಅಸಮಾಧಾನಗೊಳ್ಳದಂತೆ ನಾನು ಕೂರಿಸಿ ಮಾತಾಡುವೆ. ಅವರ ಮನವೊಲಿಸುವ ಕೆಲಸ ಮಾಡುವೆ. ಪಕ್ಷಕ್ಕೆ ಮುಜುಗರವಾಗದಂತೆ ಎಲ್ಲವನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವೆ ಎಂದು ಹೇಳಿದರು.
ಗದಗ ಶ್ರೀರಾಮುಲು ಮನೆಗೆ ಭೇಟಿ ನೀಡಿದ ಜನಾರ್ದನ ರೆಡ್ಡಿ
ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಜೊತೆ ಬಿಜೆಪಿ ನಾಯಕರು ಕಾಣಿಸಿಕೊಂಡ ಬಗ್ಗೆ ಮಾತನಾಡಿದ ಶ್ರೀರಾಮುಲು ಅವರೆಲ್ಲರೂ ಹನುಮ ಜಯಂತಿಗೆ ಬಂದಿದ್ದರು. ಸಾರ್ವಜನಿಕ ಕಾರ್ಯಕ್ರಮವಗಿರುವುದರಿಂದ ಎಲ್ಲರೂ ಪಕ್ಷಾತೀತವಾಗಿ ಬರುತ್ತಾರೆ. ಈ ಬಗ್ಗೆ ಅಪಾರ್ಥ ಕಲ್ಪಿಸುವುದು ಬೇಡ ಎಂದರು.
ಇನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಂಗಳವಾರ ಗದಗಕ್ಕೆ ಭೇಟಿ ನೀಡಿದ್ದು, ಸಾರಿಗೆ ಸಚಿವ ಶ್ರೀರಾಮುಲು ಅವರ ನಿವಾಸಕ್ಕೂ ತೆರಳಿದ್ದರು. ಬಳಿಕ ಬಸವೇಶ್ವರ ಗಾರ್ಡನ್ಗೆ ಭೇಟಿ ನೀಡಿದ್ದರು.
ಗಂಗಾವತಿಯಲ್ಲಿ ಜನಾರ್ದನ್ ರೆಡ್ಡಿ ಸಂಚಾರ
ಗಾಲಿ ಜನಾರ್ದನ್ ರೆಡ್ಡಿ ಅವರ ಸದ್ಯ ರಾಜಕೀಯವಾಗಿ ಮುಂದಿನ ನಡೆಯ ಬಗ್ಗೆ ಸಾಕಷ್ಟು ಕುತೂಹಲ ಇದೆ. ಈಗಾಗಲೇ ಜನರ ಜೊತೆ ಬೆರೆಯಲು ಜನಾರ್ದನ್ ರೆಡ್ಡಿ ಈಗಾಗಲೇ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸಂಚಾರ ಆರಂಭಿಸಿದ್ದಾರೆ. ಜನಾರ್ದನ್ ರೆಡ್ಡಿ ಗಂಗಾವತಿಯ ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದು, ಕೆಲವು ಸಾರ್ವಜನಿಕ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿದ್ದಾರೆ. ಕೋರ್ಟ್ ಆದೇಶದಂತೆ ಬಳ್ಳಾರಿಯಿಂದ ದೂರಾಗಿರುವ ಜನಾರ್ದನ್ ರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡಿದ್ದಾರೆ. ಇನ್ನು ಈವೆರೆಗೂ ಹೊಸ ಪಕ್ಷದ ವಿಚಾರವಾಗಿ ಯಾವುದೇ ಮಾತನಾಡದ ಅವರು, ಜನರ ಜೊತೆ ಸಂಪರ್ಕದಲ್ಲಿರಲು ಸಂಚಾರ ನಡೆಸುತ್ತಿದ್ದೇನೆ ಎಂದು ಈ ಹಿಂದೆ ತಿಳಿಸಿದ್ದರು.