ಬೇಗ ಮದುವೆ ಮಾಡಿಸುವಂತೆ ಟವರ್ ಹತ್ತಿ ಕುಳಿತ ಯುವಕ!
ವಿಜಯನಗರ, ಜೂನ್ 14; ಬೇಗ ಮದುವೆ ಮಾಡಿಸಿ ಎಂದು ಯುವಕನೊಬ್ಬ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಷಕರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಚಿರಂಜೀವಿ (23) ಎಂಬ ಯುವಕ ಯಾರು ಇಲ್ಲದ ಸಮಯದಲ್ಲಿ ಸಿನಿಮಾ ಟಾಕೀಸ್ ರಸ್ತೆಯಲ್ಲಿರುವ ಟವರ್ ಏರಿ ಕುಳಿತಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆಸ್ಕಾಂ ಕಚೇರಿಗೆ ಕರೆ ಮಾಡಿ ಟವರ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಚಿರಂಜೀವಿಗೆ ಈಗಾಗಲೇ ಹುಡುಗಿಯನ್ನು ಗೊತ್ತು ಮಾಡಲಾಗಿದೆ. ಆದರೆ ಬೇಗ ಮದುವೆ ಮಾಡಿಸುವಂತೆ ಯುವಕ ಬೇಡಿಕೆ ಇಟ್ಟಿದ್ದ.

ಚಿರಂಜೀವಿಯ ಅಣ್ಣನಿಗೆ ಇನ್ನೂ ವಿವಾಹವಾಗಿಲ್ಲ. ಆತನ ಮದುವೆ ಮಾಡಿದ ಮೇಲೆ ನಿನಗೆ ಮದುವೆ ಮಾಡುತ್ತೇವೆ ಎಂದು ಪೋಷಕರು ಹೇಳಿದ್ದರು. ಇದಕ್ಕೆ ಒಪ್ಪದ ಚಿರಂಜೀವಿ ಇಲ್ಲಾ ನನಗೆ ಬೇಗನೇ ಮದುವೆ ಮಾಡಿ ಅಂತ ಹಠ ಹಿಡಿದಿದ್ದ.
ಗೊತ್ತಾಗಿರುವ ಹುಡುಗಿಯ ಅಣ್ಣ ಮತ್ತು ಆತನ ಸ್ನೇಹಿತರು ಸೇರಿ ಟವರ್ ಮೇಲೆ ಏರಿ ಚಿರಂಜೀವಿ ಮನವೊಲಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ನಾವು ಮುಂದೆ ನಿಂತು ಮದುವೆ ಮಾಡಿಸುತ್ತೇವೆ ಎಂದು ಮೈಕ್ ಮೂಲಕ ಘೋಷಣೆ ಮಾಡಿದರು.
ಟವರ್ ಮೇಲಿಂದ ಇಳಿದ ಮೇಲೆ ನನಗ್ಯಾರು ಹೊಡೆಯಬಾರದು ಎಂದು ಷರತ್ತು ಹಾಕಿದ ಚಿರಂಜೀವಿ ಕೊನೆಗೆ ಕೆಳಗಿಳಿದು ಬಂದ. ಈ ಹಿಂದೆಯೂ ಈತ ನನಗೆ ಮದುವೆ ಮಾಡಿ ಎಂದು ಮನೆಯಲ್ಲಿ ಹಠ ಮಾಡಿದ್ದನಂತೆ.
ಚಿರಂಜೀವಿ ಟವರ್ನಿಂದ ಜಿಗಿದರೆ ರಕ್ಷಣೆ ಮಾಡಲು ಪೊಲೀಸರು ಮುಂಜಾಗ್ರತ ಕ್ರಮವಾಗಿ ಬಲೆಯನ್ನು ಒಡ್ಡಿ ನಿಂತಿದ್ದರು. ಇಳಿಸುವುದಕ್ಕೆ ಆತನ ಸ್ನೇಹಿತರು ಹರಸಾಹಸ ಪಡಬೇಕಾಯಿತು.












Click it and Unblock the Notifications