ವಿಜಯನಗರ; ಬಾಯಿ ಬಡಿದು ಕೊಂಡ್ರು ಬಾಯಿ ತುಂಬಾ ನೀರು ಸಿಗಲ್ಲ!
ವಿಜಯನಗರ, ಮೇ 14; ಕೊರೊನಾ ಹಾವಳಿ ಒಂದು ಕಡೆಯಾದರೆ ಮತ್ತೊಂದು ಕಡೆ ಬೇಸಿಗೆಯಲ್ಲಿ ನೀರಿ ಕೊರತೆ ಜನರನ್ನು ಕಾಡುತ್ತಿದೆ. ಕುಡಿಯುವ ನೀರಿಗಾಗಿ ಜನರು ದಿನಪೂರ್ತಿ ಪರದಾಡುತ್ತಿದ್ದಾರೆ. ಜನರು ಬಾಯಿ ಬಡಿದುಕೊಂಡರೂ ನೀರು ಮಾತ್ರ ಸಿಗುತ್ತಿಲ್ಲ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಂಡೇ ಬಸಾಪುರ ತಾಂಡದಲ್ಲಿ ನೀರಿಗಾಗಿ ದಿನಪೂರ್ತಿ ಸರತಿ ಸಾಲಲ್ಲಿ ನಿಲ್ಲಬೇಕು. ದಿನಪೂರ್ತಿ ನಿಂತರೂ ಸಹ ನಿತ್ಯ ಬಳಕೆಗೆ ಬೇಕಾದಷ್ಟು ನೀರು ಸಿಗುತ್ತಿಲ್ಲ. ಗ್ರಾಮದಲ್ಲಿ ಪ್ರಭಾವಿಗಳು ಇರುವಲ್ಲಿ ಮಾತ್ರ ಸಮರ್ಪಕ ನೀರು ಪೂರೈಕೆಯಾಗುತ್ತಿದೆ.
ಕೂಲಿ ಮಾಡಿ ಬದುಕುವ ಜನರು ಇರುವ ಕಡೆ ನೀರು ಸಿಗುತ್ತಿಲ್ಲ. ಗ್ರಾಮದ ಜನರು ಖಾಲಿ ಕೊಡಗಳನ್ನು ಹಿಡಿದು ಸುತ್ತಾಡಿದರೂ ನೀರು ಮಾತ್ರ ದೊರೆಯುತ್ತಿಲ್ಲ. ಸಾವಿರಾರು ಜನ ಸಂಖ್ಯೆಗೆ ಕೇವಲ ಬೆರಳೆಣಿಕೆಯಷ್ಟು ಕಡೆಗಳಲ್ಲಿ ನೀರಿನ ಪೂರೈಕೆ ಮಾಡುತ್ತಿದ್ದಾರೆ. ಇದರಿಂದಾಗಿ ಅನಿವಾರ್ಯವಾಗಿ ಜನರು ನೀರಿಗಾಗಿ ಪರದಾಡುವಂತಾಗಿದ್ದು ಹಗಲಿರುಳು ಸರತಿಸಾಲಿನಲ್ಲಿ ನಿಂತರೂ ಕೂಡ ಸಾಕಾಗುವಷ್ಟು ನೀರು ಸಿಗುತ್ತಿಲ್ಲ.
ನೀರಿಗಾಗಿ ಜನರು ಪರಸ್ಪರ ಜಗಳವಾಡುವ ಪ್ರಸಂಗವೂ ನಡೆದಿದೆ. ನೀರಿನ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

4,500 ಜನಸಂಖ್ಯೆ ಇರುವ ತಾಂಡ
ಕೂಡ್ಲಿಗಿ ತಾಲೂಕಿನ ಬಿ. ಬಿ. ತಾಂಡದಲ್ಲಿನ ಒಟ್ಟು ಜನಸಂಖ್ಯೆ ಸುಮಾರು 4,500. ಈ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸಹ ಇದ್ದಾರೆ. ಗ್ರಾಮದಲ್ಲಿ 30 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 3 ಜನ ಮೃತಪಟ್ಟಿದ್ದಾರೆ.

ಕೊಳವೆ ಬಾವಿಗಳೇ ಆಧಾರ
ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಿ. ಬಿ. ತಾಂಡದಲ್ಲಿ ಕುಡಿಯು ನೀರಿಗಾಗಿ 8 ಕೊಳೆವೆ ಬಾವಿಗಳನ್ನು ಕೊರೆಸಲಾಗಿದ್ದು, ಇದರಲ್ಲಿ ಕುಡಿಯುವುದಕ್ಕೆ ಯೋಗ್ಯವಾಗಿರುವುದು ಒಂದು ಮಾತ್ರ. ಈ ಗ್ರಾಮದಲ್ಲಿ ಒಂದು ಆರ್. ಓ. ಪ್ಲಾಂಟ್ ಅನ್ನು ಹಾಕಲಾಗಿದೆ. ಆದರೆ ಅದರ ನೀರು ಕುಡಿದರೆ ಕೈ, ಕಾಲು ನೋವು ಬರುತ್ತವೆ ಎನ್ನುತ್ತಾರೆ ಜನರು.

ಕೋವಿಡ್ ನಿಯಮ ಗಾಳಿಗೆ
ಕುಡಿಯುವ ನೀರು ಸಂಗ್ರಹಣೆಗಾಗಿ ಜನರು ಗುಂಪುಗುಂಪಾಗಿ ಆಗಮಿಸುತ್ತಾರೆ. ಗ್ರಾಮದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾದರೂ ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಯಾವುದೇ ಕೋವಿಡ್ ನಿಯಮ ಪಾಲನೆ ಮಾಡುತ್ತಿಲ್ಲ. "ಗ್ರಾಮದಿಂದ ಗುಳೆಹೋದ ಜನರು ವಾಪಸ್ ಬಂದಿದ್ದಾರೆ. ಕೋವಿಡ್ ನಿಯಮ ಪಾಲಿಸುಂತೆ ಮನವಿ ಮಾಡಿದರೂ ಅವರು ಕೇಳುವುದಿಲ್ಲ" ಎಂದು ಯುವ ಮುಖಂಡ ಲಕ್ಷ್ಮೀಪತಿ ನಾಯ್ಕ ದೂರಿದ್ದಾರೆ.

ಜನಪ್ರತಿನಿಧಿಗಳಿದ್ದು ಪ್ರಯೋಜನವಿಲ್ಲ
ಗ್ರಾಮದಲ್ಲಿ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ. ಗ್ರಾಮ ತಾಲೂಕು ಕೇಂದ್ರದಿಂದ ಕೂಗಳತೆ ದೂರದಲ್ಲಿದೆ. ಅಧಿಕಾರಿಗಳು ಸಹ ತಮ್ಮ ಗೋಳು ಆಲಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ತಹಶೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.












Click it and Unblock the Notifications