ವಿಜಯನಗರದಲ್ಲಿ ಬಿಜೆಪಿಗೆ ತಲೆನೋವಾದ ರೆಬೆಲ್ ಕವಿರಾಜ
ಬಳ್ಳಾರಿ, ನವೆಂಬರ್ 22: ಆನಂದ್ ಸಿಂಗ್ ಅವರು ನಮ್ಮ ನಾಯಕರು, ಅವರು ದೊಡ್ಡ ಮನಸ್ಸು ಮಾಡಿ ನಮ್ಮಂಥವರಿಗೆ ಅವಕಾಶ ಮಾಡಿಕೊಡಬೇಕು ಎಂದು ಉದ್ಯಮಿ ಕಮ್ ರಾಜಕಾರಣಿ ಕವಿರಾಜ್ ಅರಸ್ ಕೇಳಿಕೊಂಡಿದ್ದರು. ಪ್ರತ್ಯೇಕ ವಿಜಯನಗರ ಜಿಲ್ಲೆ ಸ್ಥಾಪನೆಯ ಕನಸು ಹೊತ್ತುಕೊಂಡಿರುವ ಆನಂದ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆ ಕನಸಿನ ಮಾತು. ಹೀಗಾಗಿ ಕವಿರಾಜ್ ರನ್ನು ಹಿಂದಕ್ಕೆ ಸರಿಯುವಂತೆ ಕೇಳಿಕೊಳ್ಳಲಾಯಿತು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೇ ಖುದ್ದು ಮಾತನಾಡಿದರು. ಆದರೆ ರೆಬೆಲ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಮಾತೇ ಇಲ್ಲ ಎಂದು ಕವಿರಾಜ್ ಅರಸ್ ಘೋಷಿಸಿಬಿಟ್ಟರು.
"ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಇಚ್ಛೆಯಂತೆ ನಾನು ಕಣಕ್ಕಿಳಿದಿದ್ದೇನೆ. ನಾನು ಗೆದ್ದ ಬಳಿಕ ಬಿಜೆಪಿ ಸರ್ಕಾರಕ್ಕೆ ಮೊದಲಿಗೆ ನನ್ನ ಬೆಂಬಲ ಘೋಷಿಸುತ್ತೇನೆ" ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರಿಗೂ ಮುನ್ನ ಡಿಸಿಎಂ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಬಿ ಶ್ರೀರಾಮುಲು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರು ಕೂಡಾ ಕವಿರಾಜ್ ಮನ ಓಲೈಕೆ ಮಾಡಲು ಯತ್ನಿಸಿ ಸೋತಿದ್ದಾರೆ. ನಿಗಮ -ಮಂಡಳಿ ಅಧ್ಯಕ್ಷ ಸ್ಥಾನದ ಆಫರ್ ಕೂಡಾ ನೀಡಿದರೂ ಕವಿರಾಜ್ ಮನ ಕರಗಿಲ್ಲ.
ಬಿಜೆಪಿ ಆಂತರಿಕ ತಿಕ್ಕಾಟ: ಕವಿರಾಜ್ ಅವರಿಗೆ ಸ್ಥಳೀಯ ಆರೆಸ್ಸೆಸ್ ಹಾಗೂ ಬಿಜೆಪಿ ಮುಖಂಡರ ಬೆಂಬಲ ಸಿಕ್ಕಿರುವ ಮಾಹಿತಿಯಿದೆ. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿರುವ ಮಾಜಿ ಶಾಸಕ ಗವಿಯಪ್ಪ ಅವರು ಕೂಡಾ ಉಪ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯಲು ನಿರ್ಧರಿಸಿದ್ದಾರೆ.

2018ರಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದ ಆನಂದ್ ಸಿಂಗ್ ವಿರುದ್ಧ ಸ್ಪರ್ಧಿಸಿ ಗವಿಯಪ್ಪ ಸೋಲು ಕಂಡಿದ್ದರು. ಇದಲ್ಲದೆ ಬಿಜೆಪಿ ಮಹಿಳಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಕೂಡಾ ಆನಂದ್ ಸಿಂಗ್ ಪರ ಪ್ರಚಾರ ಕೈಗೊಳ್ಳಲು ಸಿದ್ಧರಿಲ್ಲ. ಪ್ರತ್ಯೇಕ ವಿಜಯನಗರ ಜಿಲ್ಲೆ ವಿರೋಧಿಸುವ ಗಾಲಿ ರೆಡ್ಡಿ ಬಣದ ಅನೇಕ ಮುಖಂಡರು ಆನಂದ್ ಸಿಂಗ್ ಪರ ಪ್ರಚಾರ ನಡೆಸುವುದಿಲ್ಲ. ಹೀಗಾಗಿ, ಬಳ್ಳಾರಿಯಲ್ಲಿ ಆಂತರಿಕ ಕಚ್ಚಾಟದ ಲಾಭವನ್ನು ಪಡೆಯಲು ಕಾಂಗ್ರೆಸ್ ಸಜ್ಜಾಗಿದೆ.











Click it and Unblock the Notifications