ಕಾಳೇಶ್ವರನಿಗೆ, ತಿಮ್ಮಪ್ಪನಿಗೆ ನಮಿಸಿ ಜನರ ಆಶೀರ್ವಾದ ಬೇಡಿದ ಸೋಮಶೇಖರ
ಬಳ್ಳಾರಿ, ಏಪ್ರಿಲ್ 21 : ಕಾಳಹಸ್ತಿಯ ಕಾಳೇಶ್ವರನಿಗೆ, ತಿರುಪತಿಯ ತಿಮ್ಮಪ್ಪನಿಗೆ, ಕಸಾಪುರದ ಆಂಜನೇಯನಿಗೆ ಪೂಜೆ ಸಲ್ಲಿಸಿ ಬಳ್ಳಾರಿಗೆ ಬಂದಿರುವೆ. ನನಗೆ ನಿಮ್ಮ ಆಶೀರ್ವಾದವೂ ಬೇಕು ಎಂದು ಕೋರಿದವರು ರೆಡ್ಡಿ ಬ್ರದರ್ಸ್ ಗಳಲ್ಲಿ ಒಬ್ಬರಾದ ಜಿ ಸೋಮಶೇಖರ ರೆಡ್ಡಿ ಅವರು.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸುತ್ತಿರುವ ಸೋಮಶೇಖರ ರೆಡ್ಡಿ ಬಳ್ಳಾರಿ ಜನರ ಆಶೀರ್ವಾದದಿಂದ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಹೊಂದಿದ್ದಾರೆ. ಅವರು ಕಾಂಗ್ರೆಸ್ನ ಅನಿಲ್ ಲಾಡ್ ವಿರುದ್ಧ ಸೆಣೆಸಲಿದ್ದಾರೆ.
ಶನಿವಾರ ನಾಮಪತ್ರ ಸಲ್ಲಿಸಿದ ನಂತರ ಅವರು ಹೇಳಿದ್ದು ಹೀಗೆ, "ಅಮ್ಮನ ತವರೂರಾದ ಶ್ರೀಕಾಳಹಸ್ತಿಯ ಕಾಳೇಶ್ವರನಿಗೆ, ಅಪ್ಪನ ಊರಾದ ತಿರುಪತಿಯ ತಿಮ್ಮಪ್ಪನಿಗೆ, ನನ್ನ ಆರಾಧ್ಯ ದೈವವಾಗಿರುವ ಕಸಾಪುರದಲ್ಲಿ ಶನಿವಾರ ಬೆಳಗ್ಗೆ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಬಳ್ಳಾರಿಗೆ ಬಂದಿರುವೆ. ನಿಮ್ಮೆಲ್ಲರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ."
ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಶನಿವಾರ ಬೆಳಗ್ಗೆ ಮೂರು ಸೆಟ್ ನಾಮಪತ್ರ ಸಲ್ಲಿಸಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಳ್ಳಾರಿ ನಗರಕ್ಕೆ ನಾಮಪತ್ರ ಸಲ್ಲಿಸಿದವರ ಪೈಕಿ ನನ್ನ ಮೊದಲನೇ ನಾಮಪತ್ರದ ಸಂಖ್ಯೆ 9, ನಂತರದ ಎರಡು ಸೆಟ್ಟುಗಳ ಸಂಖ್ಯೆ ಕ್ರಮವಾಗಿ 10 ಮತ್ತು 11 ಆಗಿವೆ. ಒಂಭತ್ತು ಶ್ರೀರಾಮನ ಸಂಖ್ಯೆ. ನನಗೂ ಅದೃಷ್ಟದ ಸಂಖ್ಯೆ ಎಂದು ಮುಗುಳ್ನಕ್ಕರು.
ಭಾರೀ ಸಂಖ್ಯೆಯ ಅಭಿಮಾನಿಗಳು ಮತ್ತು ಬೆಂಬಲಿಗರ ಜೊತೆ ಬಾಣಬಿರುಸುಗಳ ಜೊತೆ ನಾಮಪತ್ರ ಸಲ್ಲಿಸಲು ಆಗಮಿಸಿದ ಜಿ. ಸೋಮಶೇಖರರೆಡ್ಡಿ, ನಾಮಪತ್ರ ಸಲ್ಲಿಸುವಾಗ ಕುರುಬ'ರ ಕೆ.ಎ. ರಾಮಲಿಂಗಪ್ಪ ಮತ್ತು ಕೆ. ಶಶಿಕಲಾ ಅವರಿಗೆ ಪ್ರಥಮ ಆದ್ಯತೆ ನೀಡಿದ್ದು ವಿಶೇಷವಾಗಿತ್ತು.
ನಾನು ನಗರಸಭೆ ಸದಸ್ಯನಾಗಿ, ಉಪಾಧ್ಯಕ್ಷನಾಗಿ, ಅಧ್ಯಕ್ಷನಾಗಿ, ಮೇಯರ್ ಆಗಿ ಮತ್ತು ಶಾಸಕನಾಗಿ ಸಲ್ಲಿಸಿದ ಜನಸೇವೆಯನ್ನು ಮೆಚ್ಚಿ ಜನತೆ ಪ್ರೀತಿ ತೋರಿ ಆಶೀರ್ವಾದ ಮಾಡಿ ವೋಟು ಹಾಕಲಿದ್ದಾರೆ. "ನಿಮಗೆ ಓಟು ಹಾಕಿದಲ್ಲಿ ನೀವು ಬಳ್ಳಾರಿಯಲ್ಲೇ ಇರುತ್ತೀರಿ. ಕಾರಣ ನಿಮಗೇ ನಮ್ಮ ಬೆಂಬಲ" ಎಂದು ಅನೇಕರು ಹೇಳುತ್ತಿದ್ದಾರೆ. ಕಾರಣ ನಾನು, ಗೆಲ್ಲುವ ವಿಶ್ವಾಸವಿದೆ ಎಂದರು.