ಭೂಮಿ ಇಲ್ಲದವರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಾಗೂ ಎರಡು ತಿಂಗಳಿಗೊಮ್ಮೆ ಉಚಿತ ಗ್ಯಾಸ್ ಸಿಲಿಂಡರ್ ಕೊಡ್ತೇವೆ: HDK ಘೋಷಣೆ
ಬಳ್ಳಾರಿ, ಏಪ್ರಿಲ್ 11: ಬಳ್ಳಾರಿ ಜಿಲ್ಲೆಯಲ್ಲಿ ಒಂದು ಕಡೆ ಶ್ರೀಮಂತ ವರ್ಗ ಇವೆ. ಮತ್ತೊಂದೆಡೆ ಬಡ ಕುಟುಂಬದ ಜನರು ಕಣ್ಣೀರು ಹಾಕುವುದನ್ನು ನೋಡಿದ್ದೇವೆ. ಹೀಗೆ ಕರ್ನಾಟಕ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಬಡತನ ಮತ್ತು ಅಪೌಷ್ಟಿಕತೆ ಇದೆ. ರಾಜ್ಯ, ದೇಶದಲ್ಲಿ ಆಳ್ವಿಕೆ ಮಾಡುವವರು ಪ್ರಗತಿ ಬಗ್ಗೆ ಚರ್ಚೆ ಮಾಡುತ್ತಾರೆ. ಶ್ರೀಮಂತರು ಕೊಡುವ ಕುಕ್ಕರ್, ಹಣಕ್ಕೆ ಮತದಾರರು ಮಾರು ಹೋಗಬಾರದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಬಳ್ಳಾರಿಯ ಗುಗ್ಗರಹಟ್ಟಿಯ ಕೃಷ್ಣಾ ಕಾಲೋನಿಯಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಬಹಿರಂಗ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ಧೇಶಿಸಿ ಅವರು ಮಾತನಾಡಿದರು. ಕಳೆದ ನಾಲ್ಕುವರೆ ತಿಂಗಳಿನಿಂದ ಪಂಚರತ್ನ ಯಾತ್ರೆ ಆರಂಭ ಆಗಿದೆ. ಪಂಚರತ್ನ ಯಾತ್ರೆ ಮೂಲಕ 105 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಅನ್ನೋದು ನನ್ನ ಉದ್ದೇಶವಾಗಿದೆ. ಹಾಗೆಯೇ ಉಚಿತ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ಸಿಗಬೇಕು ಎಂದರು.

ಪ್ರತಿ ತಿಂಗಳು 2 ಸಾವಿರ ರೂ. ಕೊಡುತ್ತೇವೆ
ಭೂಮಿ ಇಲ್ಲದವರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ. ಎರಡು ತಿಂಗಳಿಗೆ ಒಂದು ಗ್ಯಾಸ್ ಸಿಲಿಂಡರ್ ಅನ್ನು ಉಚಿತ ಕೊಡುತ್ತೇವೆ. ಮತ್ತು ರಾಜ್ಯದಲ್ಲಿನ ಪ್ರತಿ ಕುಟುಂಬಕ್ಕೂ ಒಂದು ಮನೆ ನಿರ್ಮಿಸಿ ಕೊಡುವ ಯೋಜನೆ ನಮ್ಮದಾಗಿದೆ ಎಂದು ಹೇಳಿದರು.
ಬಡತನ ದುರುಪಯೋಗ: ಎಚ್.ಡಿ.ಕೆ ಆರೋಪ
ಇನ್ನು ಬಳ್ಳಾರಿಯಲ್ಲಿ ಶ್ರೀಮಂತ ಗಣಿ ಮಾಲೀಕರಿದ್ದಾರೆ. ಅವರು ಚಿನ್ನದ ಅದಿರನ್ನು ವಿದೇಶಿಗಳಿಗೆ ರಫ್ತು ಮಾಡಿ ಕೋಟಿ ಕೋಟಿ ಸಂಪಾದಿಸಿದ್ದಾರೆ. ಆದರೂ ಈ ಪ್ರದೇಶದಲ್ಲಿ ಜನರ ಬಡತನವನ್ನು ಇಲ್ಲಿನವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹಾಸನದಲ್ಲಿ ಮನೆಹಾಳು ಮಾಡುವ ಶಕುನಿಗಳಿದ್ದಾರೆ
ಬಹಿರಂಗ ಸಮಾವೇಶದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಹಾಸನದಲ್ಲಿ ಮನೆ ಹಾಳು ಮಾಡುವ ಶಕುನಿಗಳು ಇದ್ದಾರೆ. ಕುರುಕ್ಷೇತ್ರದ ಯುದ್ದ ಶಕುನಿಯಿಂದಲೇ ಆಗಿದೆ, ಹಾಗೆಯೇ ಇಲ್ಲಿಯೂ ಶಕುನಿಗಳು ತಲೆ ಕೆಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಕುನಿಗಳು ನನ್ನ ಕುಟುಂಬದಲ್ಲಿ ಇಲ್ಲ, ಹಾಸನದಲ್ಲಿ ಇದ್ದಾರೆ. ಶಕುನಿಗಳು ಬೆಳಗಿನಿಂದ ಸಂಜೆಯವರೆಗೆ ಮೈಂಡ್ ವಾಶ್ ಮಾಡುತ್ತಾರೆ. ಬೇರೆ ಪಕ್ಷದವರು, ಬುದ್ಧಿಜೀವಿಗಳು ಮತ್ತು ಹಿತಶತ್ರುಗಳು ತಲೆ ಕೆಡಿಸಿದ್ದಾರೆ ಎಂದು ಹೇಳಿದ ಅವರು, ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕೆಂದು ಹೇಳಿದ್ದೇನೆ. ಇದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೂ ಸಹ ರೇವಣ್ಣ ಅವರನ್ನು ಮನವೊಲಿಸುವ ಶಕ್ತಿ ಇಲ್ಲ. ಕಳೆದ 15 ವರ್ಷದಿಂದ ಹಲವು ವಿಷಯ ನುಂಗಿಕೊಂಡಿದ್ದೇನೆ. ಕೆಲವು ವಿಷಯಗಳನ್ನು ಹೇಳಿಕೊಳ್ಳಲು ಆಗುವುದಿಲ್ಲ. ನನಗೆ ಆಗುತ್ತಿರುವ ಅನಾಹುತ ಗೊತ್ತಿದ್ದರೂ ಸಹ, ತಪ್ಪುಗಳು ಮಾಡದಿದ್ದರೂ ತಲೆ ಮೇಲೆ ಕೈ ಹೊತ್ತುಕುಳಿತುಕೊಳ್ಳುವಂತಾಗಿತ್ತು. ಈಗಲೂ ಅದೇ ರೀತಿ ವಾತಾವರಣ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಹೇಳಿಕೆಗೆ ಎಚ್.ಡಿ.ಕೆ ಟಾಂಗ್
ಸಿದ್ದರಾಮಯ್ಯ ಅಧ್ಯಕ್ಷ ಇದ್ದಾಗ ಜೆಡಿಎಸ್ ಪಕ್ಷ 59 ಕ್ಷೇತ್ರಗಳಲ್ಲಿ ಗೆದ್ದಿತ್ತು ಎಂಬ ಸಿದ್ಧರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಎಚ್.ಡಿ.ಕುಮಾರಸ್ವಾಮಿ, 59 ಸೀಟ್ ಪಡೆಯಲು ಯಾರ ಕೊಡುಗೆ ಎಷ್ಟು ಎಂಬುದು ಗೊತ್ತು. ಈ ಬಾರಿ ಚುನಾವಣೆಯಲ್ಲಿ 59 ಸೀಟ್ ಕ್ರಾಸ್ ಮಾಡುತ್ತೇನೆ. ಒಬ್ಬನೇ ಹೋರಾಟ ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚು ಗೆಲ್ಲುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ಕ್ಷೇತ್ರದ ಅಭ್ಯರ್ಥಿ ಮುನ್ನಾಭಾಯ್, ಜಿಲ್ಲಾಧ್ಯಕ್ಷ ಸೋಮಲಿಂಗನಗೌಡ, ಮೀನಳ್ಳಿ ತಾಯಣ್ಣ, ವಿಜಯಕುಮಾರ್, ರೋಷನ್ ಬಾಷ, ಬೆಂಗಳೂರಿನ ಯುವ ಮುಖಂಡ ಇಮ್ರಾನ್ ಪಾಷಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications