ಜನಾರ್ದನ ರೆಡ್ಡಿಯಿಂದ ಸಂಬಧಿಕರೇ ದೂರ ಆಗಿದ್ದಾರೆ: ಬಳ್ಳಾರಿಯಲ್ಲಿ ಅರುಣಾ ಲಕ್ಷ್ಮೀ ಹೀಗೆ ಹೇಳಿದ್ದೇಕೆ?
ಬಳ್ಳಾರಿ, ಏಪ್ರಿಲ್, 09: ನನ್ನ ಪತಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಗ್ರಾಮ ಪಂಚಾಯತಿ ಸದಸ್ಯರಿಂದ ಹಿಡಿದು ಮುಖ್ಯಮಂತ್ರಿಯವರೆಗೆ ಜನರನ್ನು ಬೆಳೆಸಿದ್ದಾರೆ. ಆದರೆ ಇದೀಗ ಜನಾರ್ದನ ರೆಡ್ಡಿ ಅವರಿಂದ ಎಲ್ಲವನ್ನೂ ಪಡೆದು ಎಲ್ಲರೂ ದೂರ ಆಗಿದ್ದಾರೆ ಎಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕೆಆರ್ಪಿ ಪಕ್ಷದ ಅಭ್ಯರ್ಥಿ ಅರುಣಾ ಲಕ್ಷ್ಮೀ ಹೇಳಿದರು.
ಬಳ್ಳಾರಿಯಲ್ಲಿ ಭಾನುವಾರ ಅವರು ವಿದ್ಯಾನಗರದಲ್ಲಿರುವ ಮಾಜಿ ಮೇಯರ್ ವೆಂಕಟರಮಣ ಅವರ ನಿವಾಸದ ಬಳಿ ಏರ್ಪಡಿಸಿದ್ದ ಕೆಆರ್ಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜಕೀಯ ತಂತ್ರ, ಕುತಂತ್ರ ಇದೆ. ರೆಡ್ಡಿ ಅವರ ಒಡಹುಟ್ಟಿದ ಸಹೋದರರು ಕೂಡ ನಮ್ಮಿಂದ ದೂರ ಆಗಿದ್ದಾರೆ. ಜನಾರ್ದನ ರೆಡ್ಡಿ ಅವರಿಂದ ಬೆಳೆದು ಇದೀಗ ಅವರನ್ನೇ ಒಬ್ಬಂಟಿಯಾಗಿ ಮಾಡಿದ್ದಾರೆ ಎಂದು ದೂರಿದರು.

ಜನಾರ್ದನ ರೆಡ್ಡಿ ಕಳೆದ 12 ವರ್ಷಗಳಿಂದ ವನವಾಸವನ್ನು ಅನುಭವಿಸಿದ್ದಾರೆ. ಅವರಿಗೆ ಬಂದ ಕಷ್ಟಗಳು ಯಾವ ಶತ್ರುವಿಗೂ ಬರಬಾರದು. ಜನಾರ್ದನ ರೆಡ್ಡಿ ಅನುಪಸ್ಥಿತಿಯಲ್ಲಿ ಇಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಜನಾರ್ದನ ರೆಡ್ಡಿ ಅವರ ಬಳಿ ಸಹಕಾರ ಪಡೆದವರು ಇದೀಗ ಅವರ ಜೊತೆಗಿಲ್ಲ. ಆದರೆ ಇದೆಲ್ಲದಕ್ಕೂ ಮಿಗಿಲಾಗಿ ಬಳ್ಳಾರಿ ಜನರ ವಿಶ್ವಾಸ, ಬೆಂಬಲ ಜನಾರ್ದನ ರೆಡ್ಡಿಯವರ ಜೊತೆಗಿದೆ ಎಂದು ಹೇಳಿದರು.
12 ವರ್ಷಗಳಲ್ಲಿ ಅಭಿವೃದ್ಧಿ ಮರೀಚಿಕೆ
ಕ್ಷೇತ್ರದಲ್ಲಿ ಕಳೆದ 12 ವರ್ಷಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ನಮ್ಮವರು ಸೇರಿ ಜನಾರ್ದನರೆಡ್ಡಿ ವಿರುದ್ಧ ಇಲ್ಲಸಲ್ಲದ ಮಾತನಾಡುತ್ತಿದ್ದಾರೆ. ಜನಾರ್ದನರೆಡ್ಡಿಯವರು ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಪಟ್ಟಿಯನ್ನು ತೆಗೆದುಕೊಂಡು ಬರುತ್ತೇನೆ. ನಿಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಪಟ್ಟಿಯನ್ನು ತೆಗೆದುಕೊಂಡು ಬನ್ನಿ ಎಂದು ಎದುರಾಳಿಗಳಿಗೆ ಸವಾಲು ಹಾಕಿದರು.
ಹಾಗೆಯೇ ಬಳ್ಳಾರಿ ನಗರದ ಅಭಿವೃದ್ಧಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡೋಣ ಎಂದು ವಿಪಕ್ಷ ನಾಯಕರಿಗೆ ಅರುಣಾ ಲಕ್ಷ್ಮೀ ಅವರು ಸವಾಲು ಹಾಕಿದರು. ಇದೇ ವೇಳೆ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹಾನಗರ ಪಾಲಿಕೆ ಮಾಜಿ ಮೇಯರ್ ವೆಂಕಟರಮಣ ಸೇರಿದಂತೆ ಐದು ಜನ ಪಾಲಿಕೆ ಮಾಜಿ ಸದಸ್ಯರು ಅರುಣಾ ಲಕ್ಷ್ಮೀ ಅವರ ಸಮ್ಮುಖದಲ್ಲಿ ಕೆಆರ್ಪಿ ಪಕ್ಷಕ್ಕೆ ಸೇರ್ಪಡೆಯಾದರು.
ಮಾಜಿ ಕಾಪೆರ್ಪೋರೇಟರ್ಗಳಾದ ಶಾಸಾಬ್, ರಾಮುಡು, ಮರಿದೇವಯ್ಯ ಹಾಗೂ ಫರ್ವಿನ್ ಬಾನು ಕೆಆರ್ಪಿ ಪಕ್ಷಕ್ಕೆ ಸೇರ್ಪಡೆಯಾದವರಾಗಿದ್ದಾರೆ.
ಯಾರಿಗೂ ಟಿಕೆಟ್ ಖಚಿತವಾಗಿಲ್ಲ
ಇನ್ನು ಮುಖ್ಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆದಿಯಾಗಿ ಯಾರಿಗೂ ಟಿಕೆಟ್ ಖಚಿತವಾಗಿಲ್ಲ. ಕ್ಷೇತ್ರ ಆಯ್ಕೆ ನಂತರದ ವಿಷಯ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಇತ್ತೀಚೆಗಷ್ಟೇ ಹೇಳಿದ್ದರು.
ಪಕ್ಷದ ಆಂತರಿಕ ಚುನಾವಣೆಯ ಬಳಿಕ ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ಕ್ಷೇತ್ರಗಳಿಗೂ ಸಂಘಟನಾತ್ಮಕ ವೀಕ್ಷಕರಾಗಿ ನಾಯಕರು ಬಂದಿದ್ದಾರೆ. ಗದಗನಲ್ಲಿಯೂ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಪಕ್ಷದ ಪದಾಧಿಕಾರಿಗಳು 3 ಅಭ್ಯರ್ಥಿಗಳ ಆಯ್ಕೆ ಮಾಡುವ ಅವಕಾಶ ಇದೆ. ಯಾರಿಗೆ ಹೆಚ್ಚಿಗೆ ಅಭಿಪ್ರಾಯ ಸಂಗ್ರಗವಾಗಿದೆ ಅವರಿಗೆ ಆದ್ಯತೆ ಕೊಡಲಾಗುವುದು ಎಂದಿದ್ದರು.
ಮಾತು ಮುಂದುವರಿಸಿದ ಲಕ್ಷ್ಮಣ್ ಸವದಿ, ರಾಜ್ಯ ಕೋರ್ ಕಮೀಟಿ ಎದುರು ಅದನ್ನು ಓಪನ್ ಮಾಡುತ್ತೇವೆ. ಕಾರ್ಯಕರ್ತರ ಅಭಿಪ್ರಾಯ ಆಧಾರವಾಗಿಟ್ಟುಕೊಂಡು ಈ ಆಯ್ಕೆ ನಡೆಯಲಿದೆ. ಆಂತರಿಕ ಸರ್ವೆ ಕೂಡ ಬಂದಿದೆ. ಎಲ್ಲವನ್ನೂ ಆಧಾರವಾಗಿಟ್ಟುಕೊಂಡು ಚರ್ಚೆ ನಡೆಯುತ್ತದೆ ಎಲ್ಲಿ ಒಂದಕ್ಕಿಂತ ಹೆಚ್ಚು ಹೆಸರು ಇರೋದಿಲ್ಲವೋ ಅಲ್ಲಿ ಒಂದು ಹೆಸರನ್ನೇ ಶಿಫಾರಸ್ಸು ಮಾಡುತ್ತೇವೆ. ಹೆಚ್ಚಿಗೆ ಇದ್ದರೇ ಚರ್ಚೆ ಮಾಡಿ ಒಂದು ಎರಡು ಮೂರು ಅಭ್ಯರ್ಥಿಗಳ ಹೆಸರು ಕಳುಹಿಸುತ್ತೇವೆ ಎಂದರು.












Click it and Unblock the Notifications