ಬಿಜೆಪಿ ಟಿಕೆಟ್ ಮಾರಾಟವಾಗಿದೆ: ಟಿಕೆಟ್ ಘೋಷಣೆ ಬಳಿಕ ಬಳ್ಳಾರಿಯಲ್ಲಿ ಭಿನ್ನಮತ ಸ್ಫೋಟ
ಬಳ್ಳಾರಿ, ಏಪ್ರಿಲ್ 12: ಬಿಜೆಪಿ ಪ್ರಥಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಬಳ್ಳಾರಿ ಜಿಲ್ಲೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಾಜ್ಯದ ಇನ್ನುಳಿದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡ ಹಲವು ದಿನಗಳ ಬಳಿಕ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿಗೆ ಈಗ ಭಿನ್ನಮತದ ಕಾವು ತಟ್ಟುತ್ತಿದೆ.
ಗಣಿ ನಾಡು, ಬಳ್ಳಾರಿಯಲ್ಲಿ ಬಿಜೆಪಿಯಲ್ಲಿ ಬಂಡಾಯದ ಬಿಸಿ ಭುಗಿಲೆದಿದ್ದೆ. ಸಂಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಸ್ ದಿವಾಕರ್ಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿಲ್ಲ. ಬದಲಿಗೆ ಶಿಲ್ಪಾ ರಾಘವೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಎಸ್ ದಿವಾಕರ್ ತೀವ್ರ ಅಸಮಧಾನಗೊಂಡಿದ್ದಾರೆ.

ಬಳ್ಳಾರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅರು, ಪಕ್ಷಕ್ಕೆ ಹಲವು ವರ್ಷಗಳಿಂದ ದುಡಿಯುತ್ತಿರುವವರಿಗೆ ಟಿಕೆಟ್ ದೊರೆಯುತ್ತಿಲ್ಲ. ಬದಲಿಗೆ ಬಿಜೆಪಿ ಟಿಕೆಟ್ ಮಾರಾಟವಾಗಿದೆ ಎಂದು ಸಂಡೂರು ಬಿಜೆಪಿ ಟಿಕೆಟ್ ವಂಚಿತ ಕೆ.ಎಸ್ ದಿವಾಕರ್ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಪಕ್ಷದಲ್ಲಿ ತತ್ವ ಸಿದ್ಧಾಂತಗಳಿಗೆ ಬೆಲೆ ಇಲ್ಲದಂತಾಗಿದೆ. ಸಂಡೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಸಿಗದಂತಾಗಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವವಿಲ್ಲದವರಿಗೆ ಟಿಕೆಟ್ ದೊರೆತಿದೆ. ಕಳೆದ ಮೂರು ವಿಧಾನಸಭಾ ಚುನಾವಣೆಗಳಿಂದ ಆಕಾಂಕ್ಷಿಯಾಗಿದ್ದ ನನಗೆ, ಬಿಜೆಪಿ ಸತತ ಮೂರು ಸಾರಿ ನನಗೆ ಮೋಸ ಮಾಡಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಸತತ 10 ವರ್ಷಗಳ ಕಾಲ ನಾನು ಬಿಜೆಪಿ ಪಕ್ಷ ಸಂಘಟನೆ ಮಾಡಿರುವೆ. ನೈಜವಾಗಿ ಪಕ್ಷಕ್ಕಾಗಿ ಶ್ರಮಿಸಿದವರಿಗೆ ಟಕೆಟ್ ನೀಡಿಲ್ಲ. ಸರ್ವೇ, ಪಕ್ಷದ ಸಿದ್ಧಾಂತ ಎಂಬ ಎಲ್ಲ ಮಾತುಗಳು ಸುಳ್ಳು ಎಂದ ಅವರು, ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿರುವೆ.
ಬುಧವಾರ ಸಂಡೂರಿನಲ್ಲಿ ಕಾರ್ಯಕರ್ತರ ಸಭೆ ಬಳಿಕ ನನ್ನ ನಿರ್ಧಾರ ತಿಳಿಸುವೆ ಎಂದು ಬಿಜೆಪಿ ಪಕ್ಷ ತೊರೆಯುವ ಮುನ್ಸೂಚನೆ ನೀಡಿದ್ದಾರೆ.
ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪಕ್ಷದಿಂದ ಸ್ಪರ್ಧಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದಲೂ ನನಗೆ ಆಹ್ವಾನವಿದೆ. ಮುಂದೆ ನೋಡೋಣ ಕಾರ್ಯಕರ್ತರ ಸಭೆ ಬಳಿಕ ಚರ್ಚಿಸಿ ನನ್ನ ಅಂತಿಮ ನಿರ್ಧಾರ ತಿಳಿಸುವೆ ಎಂದು ಹೇಳಿದರು.

ಸಿದ್ಧಾರ್ಥ್ ಟಿಕೆಟ್: ಯುವಕರಿಗೆ ಮನ್ನಣೆ ಎಂದ ಸಚಿವ ಸಿಂಗ್
ವಿಜಯನಗರ: ತಮ್ಮ ಪುತ್ರ ಸಿದ್ಧಾರ್ಥ್ ಸಿಂಗ್ಗೆ ಬಿಜೆಪಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ನೀಡಿರುವುದು ಯುವಕರಿಗೆ ಮನ್ನಣೆ ನೀಡಿದಂತಾಗಿದೆ ಎಂದು ಸಚಿವ ಆನಂದ್ ಸಿಂಗ್ ಅವರು ಅಭಿಪ್ರಾಯಪಟ್ಟರು.
ಸಚಿವ ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ್ ಸಿಂಗ್ ಅವರಿಗೆ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಬುಧವಾರ ಬೆಳಗ್ಗೆ ಹಂಪೆಯ ಬಳಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ನಂತರ ವಿರೂಪಾಕ್ಷನ ಸ್ವಾಮಿಯ ದರ್ಶನ ಪಡೆದರು. ಈ ವೇಳೆ ಸಚಿವ ಆನಂದ್ ಸಿಂಗ್ ಅವರು ಹಾಜರಿದ್ದರು.
ವಿರೂಪಾಕ್ಷ ಸ್ವಾಮಿಯ ದರ್ಶನ ಪಡೆದ ನಂತರ ಸಚಿವ ಆನಂದ್ ಸಿಂಗ್ ಅವರು ಪುತ್ರ ಸಿದ್ಧಾರ್ಥ್ ಸಿಂಗ್ ಅವರಿಗೆ ಸಿಹಿ ಹಂಚಿದರು. ಈ ವೇಳೆ ಹಾಜರಿದ್ದ ಅಭಿಮಾನಿಗಳು, ಕಾರ್ತಕರ್ತರಿಗೂ ಸಚಿವ ಸಿಂಗ್ ಸಿಹಿ ಹಂಚಿದರು. ಬಳಿಕ ವಿರೂಪಾಕ್ಷ ದೇವಸ್ಥಾನದ ಆನೆ ಲಕ್ಷ್ಮೀಯಿಂದ ಹೂಮಾಲೆಯ ಆಶೀರ್ವಾದ ಪಡೆಯಲಾಯಿತು.
ರಾಜ್ಯ ಹಾಗೂ ರಾಷ್ಟ್ರ ನಾಯಕರ ಆಶಯದಂತೆ ಯುವಕರಿಗೆ ಪಕ್ಷದಿಂದ ಮನ್ನಣೆ ನೀಡಿದಂತಾಗಿದೆ. ಹೀಗಾಗಿ ಸಿದ್ಧಾರ್ಥ ಸಿಂಗ್ಗೆ ಟಿಕೆಟ್ ಸಿಕ್ಕಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕೆಲಸಗಳೇ ನಮಗೆ ಶ್ರೀರಕ್ಷೆ. ಸಿದ್ಧಾರ್ಥ್ ಸಿಂಗ್ ಗೆಲ್ಲಲಿದ್ದಾರೆ, ಅವರ ಗೆಲುವಿಗೆ ಕಾರ್ಯಕರ್ತರು ತಯಾರಿ ನಡೆಸಿದ್ದಾರೆ ಎಂದು ಸಚಿವ ಸಿಂಗ್ ಹೇಳಿದರು.
ಸದ್ಯಕ್ಕೆ ನಾನು ಮತ್ಯಾವ ಕ್ಷೇತ್ರದ ಕುರಿತು ಯೋಚಿಸಿಲ್ಲ, ಸಮಾಜ ಸೇವೆಯೊಂದೇ ನನ್ನ ಮುಂದಿನ ಗುರಿ ಎಂದು ಹೇಳಿದ ಆನಂದ್ ಸಿಂಗ್, ಅಂಬೆಗಾಲಿಡುವ ನೂತನ ಜಿಲ್ಲೆಯ ಅಭಿವೃದ್ಧಿಯನ್ನು ಚಿರತೆಯ ವೇಗದಂತೆ ಅಭಿವೃದ್ಧಿ ಮಾಡುತ್ತೇವೆ. ಡಬಲ್ ಇಂಜಿನ್ ಸರ್ಕಾರದಂತೆ ನಾನು ಸಿದ್ಧಾರ್ಥ ಸಿಂಗ್ ಈ ಕಾರ್ಯದಲ್ಲಿ ತೊಡಗುತ್ತೇವೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಹೆಚ್.ಆರ್.ಗವಿಯಪ್ಪ ಅವರ ಬಗ್ಗೆ ಮಾತನಾಡಿದ ಸಚಿವ ಆನಂದ್ ಸಿಂಗ್, ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಗವಿಯಪ್ಪನವರ ಒಳ್ಳೆಯತನವನ್ನು ಮೆಚ್ಚಿಕೊಂಡಿದ್ದಾರೆ.












Click it and Unblock the Notifications