ಕೆಎಟಿಯಿಂದ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ವರ್ಗಾವಣೆಗೆ ತಡೆ
ಬಳ್ಳಾರಿ, ಡಿಸೆಂಬರ್ 2: ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರನ್ನು ಬಂದ ಹತ್ತು ದಿನದಲ್ಲೇ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವಧಿ ಪೂರ್ವ ವರ್ಗಾವಣೆ ಮಾಡಿದ್ದರಿಂದ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಲಯದಿಂದ ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದು ಮುಂದುವರೆದಿದ್ದಾರೆ.
ಐಎಎಸ್ ಅಧಿಕಾರಿಯಾಗಿರುವ ಪ್ರೀತಿ ಗೆಹ್ಲೋಟ್ ಅವರ ಪಾರದರ್ಶಕ ಆಡಳಿತದಿಂದ ಮಹಾನಗರ ಪಾಲಿಕೆಯಲ್ಲಿ ತಮ್ಮ ಕೈ ಚಳಕ ನಡೆಯದ ವ್ಯಕ್ತಿಗಳು ಇವರ ವರ್ಗಾವಣೆಗೆ ಪ್ರಯತ್ನ ಮಾಡಿರಬಹುದು ಎಂಬ ಮಾತು ಕೇಳಿಬಂದಿದೆ.
ಪಾಲಿಕೆ ಆಯುಕ್ತೆ ಹುದ್ದೆಗೆ ಬರಲು ಪ್ರಯತ್ನಿಸಿದವರು ಸಾಕಷ್ಟು ಒತ್ತಡ ಹಾಕಿ, ಗೆಹ್ಲೋಟ್ ಅವರ ಸ್ಥಾನಕ್ಕೆ ಬರಲು ವರ್ಗಾವಣೆ ಮಾಡಿಸಿರಬಹುದು ಎಂಬ ಮಾತೂ ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.

ಈ ಹಿಂದೆ ಇದ್ದಂತಹ ಪಾಲಿಕೆ ಆಯುಕ್ತೆ ತುಷಾರಮಣಿ ಅವರೂ ಸಹ ಆರಂಭದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದ ಕಾರಣ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರೂ ಸಹ ಆಡಳಿತಾತ್ಮಕ ನ್ಯಾಯಾಲಯದ ಮೊರೆ ಹೋಗಿ ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು.
ಆದರೆ, ತುಷಾರಮಣಿ ಅವರು ನಂತರದ ದಿನಗಳಲ್ಲಿ ತಮ್ಮ ಕಾರ್ಯಶೈಲಿಯಲ್ಲಿ ಬದಲಾಗಿ, ಕೆಲ ದುಷ್ಟ ಶಕ್ತಿಗಳ ಜೊತೆ ಕೈಜೋಡಿಸಿ ಭ್ರಷ್ಟಾಚಾರದ ಕೂಪಕ್ಕೆ ಬಿದ್ದಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಐಎಎಸ್ ಅಧಿಕಾರಿಯಾಗಿದ್ದು, ಭ್ರಷ್ಟ ಶಕ್ತಿಗಳನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ಉತ್ತಮ ಆಡಳಿತ ನೀಡಿ ನಗರದ ನಾಗರಿಕರ ಮನ ಗೆಲ್ಲಬೇಕೆಂಬುದು ಬಳ್ಳಾರಿ ಜನರ ಆಶಯವಾಗಿದೆ.












Click it and Unblock the Notifications