ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವೆ: ಶಾಸಕ ಗಣೇಶ್
ಬಳ್ಳಾರಿ, ಜುಲೈ 08: ಶಾಸಕ ಆನಂದ್ ಸಿಂಗ್ ಅವರ ರಾಜೀನಾಮೆಯೊಂದಿಗೆ ಆರಂಭವಾದ ಸರಣಿ ರಾಜೀನಾಮೆ ಪ್ರಹಸನ ಒಂದು ವಾರದಿಂದ ಮುಂದುವರೆದಿದೆ. ಸೋಮವಾರದ ವೇಳೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ 13 ಶಾಸಕರು ರಾಜೀನಾಮೆ ನೀಡಿದ್ದರಿಂದ ಕೈ ತೆನೆ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.
ಈ ನಡುವೆ ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ರೀತಿಯಿಂದಲೂ ಯತ್ನ ನಡೆದಿದ್ದು, ಆಪರೇಷನ್ ಕಮಲಕ್ಕೆ ಒಳಗಾಗದಂತೆ ಶಾಸಕರನ್ನು ಕಾಯಲಾಗುತ್ತಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಕೈ ತೆನೆ ಸರ್ಕಾರ ಸಚಿವರು, ಶಾಸಕರು ಸರಣಿ ರಾಜೀನಾಮೆಯಿಂದಾಗಿ ಉಂಟಾಗಿರುವ ಅಸ್ಥಿರತೆಯ ನಡುವೆಯೂ ಸರ್ಕಾರವನ್ನು ಉಳಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳ ಬಗ್ಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ವರಿಷ್ಠ ತಲೆ ಕೆಡಿಸಿಕೊಂಡಿದ್ದಾರೆ.
ಪಕ್ಷ ತೊರೆಯುವುದಿಲ್ಲ: ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂಪ್ಲಿ ಶಾಸಕ ಜೆ.ಎನ್ ಗಣೇಶ್, ಅಧಿಕಾರವಿರಲಿ, ಇಲ್ಲದಿರಲಿ ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ, ನಾನು ನನ್ನ ನಿಷ್ಠೆಯನ್ನು ಬದಲಾಯಿಸುವುದಿಲ್ಲ ಎಂದರು.

ಸಚಿವ ಡಿಕೆ ಶಿವಕುಮಾರ್ ಅವರು ನೀಡಿದ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ಡಿಸಿಎಂ ಜಿ ಪರಮೇಶ್ವರ್ ಅವರು ಮಂಗಳವಾರದಂದು ಶಾಸಕಾಂಗ ಪಕ್ಷದ ಸಭೆಗೆ ಬರಲು ಆಹ್ವಾನಿಸಿದ್ದಾರೆ. ಸಭೆಗೆ ತಪ್ಪದೇ ಹಾಜರಾಗುತ್ತೇನೆ. ಪಕ್ಷ ನನ್ನಿಂದ ಏನು ಬಯಸಿದರೂ ಮಾಡಲು ಸಿದ್ಧ, ಪಕ್ಷ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ಬದ್ಧ ಎಂದು ಹೇಳಿದರು. 'ನನ್ನನ್ನು ಯಾರೊಬ್ಬರೂ ಸಂಪರ್ಕಿಸಿಲ್ಲ, ನಾನು ಯಾವುದೇ ಅತೃಪ್ತ ಶಾಸಕರ ಸಂಪರ್ಕ ಮಾಡಿಲ್ಲ' ಎಂದು ಮತ್ತೊಮ್ಮೆ ಹೇಳಿದರು.
13 ಶಾಸಕರ ರಾಜೀನಾಮೆ ಹಾಗೂ 22 ಸಚಿವರ ಸರಣಿ ರಾಜೀನಾಮೆ ನಂತರ ಸರ್ಕಾರ ಉಳಿಯುವುದೋ ಅಥವಾ ಸರ್ಕಾರ ಪತನವಾಗುವುದೋ ಎಂಬ ಆತಂಕ ಮನೆ ಮಾಡಿದೆ. ಆದರೆ, ಸರ್ಕಾರ ಇನ್ನು ಬಿದ್ದಿಲ್ಲ, ಅತೃಪ್ತರು ತಮ್ಮ ಬೇಡಿಕೆಯೊಂದಿಗೆ ಮರಳಿ ಬಂದು ಭೇಟಿಯಾಗಲಿ, ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಕರ್ನಾಟಕ ಉಸ್ತುವಾರಿ ಕೆಸಿ ವೇಣುಗೋಪಾಲ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಲ್ಪಮತಕ್ಕೆ ಕುಸಿತದ ಮೈತ್ರಿ ಸರ್ಕಾರ: ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಶಾಸಕರ ರಾಜೀನಾಮೆ ನಂತರ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಎಲ್ಲಾ 22 ಸಚಿವರ ಸರಣಿ ರಾಜೀನಾಮೆ ನಂತರ ಸರ್ಕಾರ ಉಳಿಯುವುದೋ ಅಥವಾ ಸರ್ಕಾರ ಪತನವಾಗುವುದೋ ಎಂಬ ಆತಂಕ ಮನೆ ಮಾಡಿದೆ. ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಲು 'ಕಾಮರಾಜ ಮಾರ್ಗ' ಅನುಸರಿಸಿ ಎಲ್ಲಾ ಸಚಿವರು ರಾಜೀನಾಮೆ ಪಡೆದು, ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ.












Click it and Unblock the Notifications