ತುಂಗಭದ್ರೆಯಿಂದ ಹರಿದ ನೀರು, ಮುಳುಗಿದ 60 ವರ್ಷ ಹಳೆಯ ಕಂಪ್ಲಿ ಸೇತುವೆ
ಬಳ್ಳಾರಿ, ಆ. 15 : ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷ 91 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿರುವ ಕಾರಣ ಬಳ್ಳಾರಿ - ಕೊಪ್ಪಳ ಜಿಲ್ಲೆಗಳ ಸಂಪರ್ಕಿಸುವ ಕಂಪ್ಲಿ -ಕೋಟೆ ಪ್ರದೇಶದ 60 ವರ್ಷಗಳ ಹಳೆಯದಾದ ಸೇತುವೆ ಸಂಪೂರ್ಣವಾಗಿ ಮುಳುಗಿ, ನೀರು ಸೇತುವೆಯ ಮೇಲೆ ಹರಿಯುತ್ತಿದೆ.
ಕಂಪ್ಲಿ-ಕೋಟೆ ಬಳಿಯ ದೇವಸ್ಥಾನಗಳು ಹಾಗೂ ಮನೆಗಳಿಗೆ ನೀರು ನುಗ್ಗಿದೆ. ಕಂಪ್ಲಿ-ಕೋಟೆ ಬಳಿಯ ಭತ್ತ ಹಾಗೂ ಬಾಳೆ ತೋಟಗಳಿಗೆ ನೀರುನುಗ್ಗಿದೆ. ಕೋಟೆಯ ಪ್ರಸನ್ನ ವೆಂಕಟರಮಣ ದೇವಸ್ಥಾನ, ಹೊಳೆ ಆಂಜನೇಯಸ್ವಾಮಿ ದೇವಸ್ಥಾನ, ಐತಿಹಾಸಿಕ ಕೋಟೆ ಜಲಾವೃತ್ತವಾಗಿದ್ದು, ಕೋಟೆ ಪ್ರದೇಶದ ಬಹುತೇಕ ಮಾರ್ಗಗಳು ಜಲಾವೃತಗೊಂಡಿವೆ.
ಕೋಟೆ ಪ್ರದೇಶದಲ್ಲಿ ವಾಸವಾಗಿದ್ದ ಮೀನುಗಾರರ ಆರು ಕುಟುಂಬಗಳನ್ನು ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಿ, ಕಂದಾಯ ಅಧಿಕಾರಿಗಳು ನೆರವಾಗಿದ್ದಾರೆ.
ಕಂಪ್ಲಿ - ಗಂಗಾವತಿ ಸಂಪರ್ಕ ಕಲ್ಪಿಸುವ ಸೇತುವೆ ಮೇಲಿನ ವಾಹನ ಸಂಚಾರವನ್ನು ನಿನ್ನೆ ರಾತ್ರಿಯಿಂದಲೇ ಸ್ಥಗಿತಗೊಳಿಸಿ, ಕಡೆಬಾಗಲಿಲು ಸಮೀಪದ ಹೊಸ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಧಿಕಾರಿಗಳು ಕೋಟೆ ಪ್ರದೇಶ, ಸೇತುವೆ ಮತ್ತಿತರೆಡೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಕಂಪ್ಲಿ ತಾಲ್ಲೂಕಿನ ಬೆಳಗೊಡುಹಾಳು, ಇಟಗಿ, ಸಣಾಪುರ ಗ್ರಾಮಗಳಿಗೆ ಭೇಟಿ ನೀಡಿರುವ ತಹಶೀಲ್ದಾರ್ ಎಂ. ರೇಣುಕ ಅವರು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿದರು.
ಉಚಿತ ಹರಿಗೋಲು ಸೇವೆ : ಕಂಪ್ಲಿ ಕೋಟೆಯ ತುಂಗಭದ್ರಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಬಂದಿರುವುದರಿಂದ ಕೋಟೆ ಪ್ರದೇಶದ ಬಹುತೇಕ ದೇವಸ್ಥಾನಗಳು ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ, ನಾಗರ ಪಂಚಮಿ ಹಬ್ಬದ ನಿಮಿತ್ತ ಹಾಲೆರೆಯಲು ಭಕ್ತರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ, ಹಸೇನಪ್ಪ ಅವರು ದೇವಸ್ಥಾನಕ್ಕೆ ತೆರಳುವ ಎಲ್ಲಾ ಭಕ್ತರನ್ನು ಉಚಿತವಾಗಿ ತಮ್ಮ ಹರಿಗೋಲಿನಲ್ಲಿ ಎರಡೂ ಬದಿಗಳನ್ನು ತಲುಪಿಸುವ ಕಾರ್ಯನಿರ್ವಹಿಸಿದ್ದಾರೆ.
ಇಷ್ಟೆಲ್ಲ ಅನಾಹುತವಾಗಿದ್ದರೂ ಯುವಪೀಳಿಗೆಯು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ಬ್ಯುಸಿ ಆಗಿರುವುದು ಕಂಡುಬಂತು. ಒಟ್ಟಿನಲ್ಲಿ ಪರಿಸ್ಥಿತಿ ಏನೇ ಇರಲಿ, ಹೇಗೆ ಇರಲಿ ಯುವಕ ಯುವತಿಯರು ಸೆಲ್ಫೆ ತೆಗೆದುಕೊಳ್ಳುವುದನ್ನು ಬಿಡುವುದಿಲ್ಲ.