ಬಳ್ಳಾರಿಯಲ್ಲಿ ಅನಿಲ್ ಲಾಡ್, ಕೊಂಡಯ್ಯ ಜಟಾಪಟಿ
ಬಳ್ಳಾರಿ, ಡಿ. 16 : "ಮುಂಬರುವ ಲೋಕಸಭೆ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ನಾನು ಚುನಾವಣೆಗೆ ಸ್ಪರ್ಧಿಸಲಿದ್ದೇನೆ, ನನಗೆ ಟಿಕೆಗೆ ತಪ್ಪಿಸುವ ಸಾಮರ್ಥ್ಯ ರಾಜ್ಯದ ಯಾವ ನಾಯಕರಿಗೂ ಇಲ್ಲ" ಎಂದು ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಹೇಳಿದ್ದಾರೆ. ಈ ಮೂಲಕ ಬಳ್ಳಾರಿ ಕಾಂಗ್ರೆಸ್ ಭಿನ್ನಮತವನ್ನು ಬಹಿರಂಗಪಡಿಸಿದ್ದಾರೆ.
ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ಸಮಯಯಲ್ಲಿ ಬೀದಿಗೆ ಬಂದಿದ್ದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಬಂಡಾಯ ಇನ್ನೂ ಶಮನವಾಗಿಲ್ಲ, ಸದ್ಯ ಕಾಂಗ್ರೆಸ್ ಲೋಕಸಭೆ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಸಿದ್ದಪಡಿಸಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ನಾನು ಟಿಕೆಟ್ ಆಂಕಾಕ್ಷಿ ಎಂದು ಕೊಂಡಯ್ಯ ಕಣಕ್ಕೆ ಇಳಿದಿದ್ದಾರೆ. (ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ)

ಭಾನುವಾರ ಬಳ್ಳಾರಿಯಲ್ಲಿ ಮಾತನಾಡಿದ ಕೆ.ಸಿ.ಕೊಂಡಯ್ಯ, ಟಿಕೆಟ್ ನೀಡಿ ಎಂದು ರಾಜ್ಯ ನಾಯಕರನ್ನು ನಾನು ಕೋರುವುದಿಲ್ಲ. ನನಗೆ ಟಿಕೆಟ್ ತಪ್ಪಿಸುವ ಸಾಮರ್ಥ್ಯ ಯಾರಿಗೂ ಇಲ್ಲ. ನನಗೆ ಟಿಕೆಟ್ ನೀಡುವ ನಿರ್ಧಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೈಯಲ್ಲಿದೆ ಎಂದು ಹೇಳುವ ಮೂಲಕ ಎದುರಾಳಿಗಳಿಗೆ ತಿರುಗೇಟು ನೀಡಿದ್ದಾರೆ. (ಪಕ್ಷದ ನಾಯಕರ ಸಂಚಿಗೆ ಬಲಿಯಾದೆ)
ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ದೊರೆಯಬಾರದು ಎಂದು ನನ್ನ ವಿರೋಧಿಗಳು ಷಡ್ಯಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಕಚೇರಿ ಭೂ ಕಬಳಿಕೆ ಆರೋಪವನ್ನು ನನ್ನ ಮೇಲೆ ಹೊರಿಸಿ, ಚುನಾವಣೆಗೆ ಸ್ಪರ್ಧಿಸದಂತೆ ಮಾಡಲು ತಯಾರಿ ನಡೆಸಿದ್ದಾರೆ. ಇವು ಶಾಸಕ ಅನಿಲ್ ಲಾಡ್ ಹಾಗೂ ಇತರರು ನಡೆಸಿದ ಹುನ್ನಾರದ ಫಲ ಎಂದು ಕೊಂಡಯ್ಯ ಆರೋಪಿಸಿದರು. (ಕೊಂಡಯ್ಯ ಅಮಾನತಿಗೆ ರಾಹುಲ್ ಸೂಚನೆ)
ಕೊಂಡಯ್ಯ ಎಷ್ಟು ಪ್ರಮಾಣಿಕರು ಎಂಬುದು ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಅವರಿಗೆ ತಿಳಿದಿದೆ. ಆದ್ದರಿಂದ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯ ನೇತೃತ್ವದ ಸಮಿತಿ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್ ಅವರಿಗೆ ದೂರು ನೀಡಿದರೂ ನನಗೆ ಆತಂಕವಿಲ್ಲ. ನಿರಂತರವಾಗಿ ಪಕ್ಷದಲ್ಲಿ ನನ್ನ ವಿರುದ್ಧ ಇಂತಹ ಚಟುವಟಿಕೆ ನಡೆಯುತ್ತಿದೆ ಎಂದು ಕೊಂಡಯ್ಯ ಹೇಳಿದರು.
ಸದ್ಯ ಬಳ್ಳಾರಿ ಕ್ಷೇತ್ರ ಬಿಜೆಪಿ ಕೈಯಲ್ಲಿದ್ದೆ. ಸಂಸದೆ ಶಾಂತ ಮುಂಬರುವ ಲೋಕಸಭಾ ಚುನಾಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಾರೋ? ಅಥವ ಬಿಎಸ್ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರೋ? ಎಂಬುದು ಇನ್ನೂ ಅಂತಿಮವಾಗಿಲ್ಲ. ಆಗಲೇ ಕಾಂಗ್ರೆಸ್ ನಾಯಕರ ಜಟಾಪಟಿ ಆರಂಭವಾಗಿದ್ದು, ಟಿಕೆಟ್ ಗಾಗಿ ಲಾಬಿ ಆರಂಭವಾಗಿದೆ. ಭೂ ವಿವಾದ ಆರೋಪ ಎದುರಿಸುತ್ತಿರುವ ಕೊಂಡಯ್ಯಗೆ ಟಿಕೆಟ್ ಸಿಗುತ್ತಾ?












Click it and Unblock the Notifications