ಯೂಟರ್ನ್ ಹೊಡೆದ ಅತೃಪ್ತ ಶಾಸಕ ಪರಮೇಶ್ವರ್ ನಾಯ್ಕ್
ಬಳ್ಳಾರಿ, ಜೂನ್ 09: ಅತೃಪ್ತ ಕಾಂಗ್ರೆಸ್ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಯೂ ಟರ್ನ್ ಹೊಡೆದಿದ್ದಾರೆ. 'ನಾನು ಯಾವ ಗುಂಪಿಗೂ ಸೇರಿಲ್ಲ, ಪಕ್ಷದ ವಿರುದ್ಧ ಭಿನ್ನಮತ ಹೊಂದಿಲ್ಲ' ಎಂದಿದ್ದಾರೆ.
ಹೂವಿನಹಡಗಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಯಾವ ಗುಂಪಿಗೂ ಸೇರಿಲ್ಲ. ನಾನು ಪಕ್ಷದ ವಿರುದ್ಧವಾಗಲೀ, ಮುಖಂಡರ ವಿರುದ್ಧವಾಗಲೀ ಭಿನ್ನಮತ ಹೊಂದಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ನನಗೆ ಸಾಕಷ್ಟು ಜನಸೇವೆಯ ಅವಕಾಶ ನೀಡಿದೆ. ನಾಲ್ಕುಬಾರಿ ಶಾಸಕನಾಗಿ, ಒಮ್ಮೆ ಸಚಿವನಾಗಿ ಸೇವೆ ಮಾಡಿರುವೆಎಂದಿದ್ದಾರೆ.
ಎಂ.ಬಿ. ಪಾಟೀಲ್ ನೇತೃತ್ವದ ಭಿನ್ನಮತೀಯ ಚಟುವಟಿಕೆಗಳಲ್ಲಿ ನಾನು ಎಲ್ಲಿಯೂ ಪಾಲ್ಗೊಂಡಿಲ್ಲ. ನಾನು, ಪಕ್ಷದ ನಿರ್ಣಯ ನಿರ್ಧಾರಗಳಿಗೆ ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.

' ಕಾಂಗ್ರೆಸ್ ಪಕ್ಷ ಪ್ರಸ್ತುತ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಪಕ್ಷದ ಸಂಘಟನೆ ಅತಿ ಮುಖ್ಯ. ಹೈಕಮಾಂಡ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಶಾಸಕಾಂಗ ನಾಯಕರಾಗಿರುವ ಸಿದ್ದರಾಮಯ್ಯ ಅವರ ಕೈಬಲಪಡಿಸಲು ನಿರಂತರವಾಗಿ ಶ್ರಮಿಸುತ್ತೇನೆ ಎಂದರು.
ಬಳ್ಳಾರಿ ದೊಡ್ಡ ಜಿಲ್ಲೆ. ಕೂಡಲೇ ಸಂಪುಟದಲ್ಲಿ ಜಿಲ್ಲೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಎಂಬಿ.ಪಾಟೀಲ್ ನೇತೃತ್ವದ ಭಿನ್ನಮತೀಯ ಸಭೆಗಳಲ್ಲಿ ಪಿ.ಟಿ. ಪರಮೇಶ್ವರನಾಯ್ಕ ಅವರು ಪಾಲ್ಗೊಂಡಿದ್ದಾರೆ ಎನ್ನುವ ಹಿನ್ನಲೆಯಲ್ಲಿ ಅವರು ಶನಿವಾರ ಪತ್ರಕರ್ತರಿಗೆ ಸ್ಪಷ್ಟನೆ ನೀಡಿದರು.












Click it and Unblock the Notifications