ಬೀದಿಗೆ ಬರಬೇಡಿ, ಮೊದಲು ಪ್ರಾಣ ಉಳಿಸಿಕೊಳ್ಳಿ; ಸಚಿವ ಶ್ರೀರಾಮುಲು
ಬಳ್ಳಾರಿ, ಮಾರ್ಚ್ 26: "ಇದುವರೆಗೆ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 1,30 ಲಕ್ಷ ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. 214 ಜನರಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 2242 ಜನರಿಗೆ ನೆಗೆಟಿವ್ ಇದೆ. ಇದುವರೆಗೆ ಒಟ್ಟು 52 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ" ಎಂದು ಮಾಹಿತಿ ನೀಡಿದರು ಆರೋಗ್ಯ ಸಚಿವ ಶ್ರೀರಾಮುಲು.
ಬಳ್ಳಾರಿಯಲ್ಲಿ ಮಾತನಾಡಿದ ಸಚಿವ ಶ್ರೀ ರಾಮುಲು, "ಗೌರಿಬಿದನೂರಿನಲ್ಲಿ ಒಬ್ಬರು ಕೊರೊನಾದಿಂದ ಸಾವನ್ನಪ್ಪಿರುವುದಾಗಿ ಲ್ಯಾಬ್ ವರದಿ ಬಂದಿದೆ. ರಾಜ್ಯದಲ್ಲಿ 50 ಪಾಸಿಟಿವ್ ಕೇಸ್ ಇದ್ದು, ಎರಡು ಸಾವು ಸಂಭವಿಸಿದೆ" ಎಂದರು.
"ನಾನು ಬಳ್ಳಾರಿ ಜಿಲ್ಲೆಯಿಂದ ಪ್ರಾರಂಭ ಮಾಡಿ ಎಲ್ಲಾ ಜಿಲ್ಲೆಗಳಲ್ಲಿ ಸಭೆ ಮಾಡುತ್ತೇನೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇನೆ. ಬೇಕಾದ ಎಲ್ಲಾ ಸೌಲಭ್ಯ ಮಾಡಿಕೊಡಲು ಸೂಚಿಸಲಾಗಿದೆ. ಈ ಸಲುವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರ ಸರಕಾರದ ನಿಯಮಗಳನ್ನು ಪಾಲನೆ ಮಾಡಬೇಕು" ಎಂದು ಮನವಿ ಮಾಡಿದ್ದಾರೆ.

"ಸಿಎಂ ಯಡಿಯೂರಪ್ಪ ಮಾಹಿತಿ ಪಡೆಯುತ್ತಿದ್ದಾರೆ. ಅವರು ನಮ್ಮ ಜತೆಗಿದ್ದಾರೆ- ಪ್ರಧಾನಿ ಅವರು ಹೇಳಿದಂತೆ ಕೇಳಬೇಕಿದೆ. ನಾವು ಕೆಲಸ ಮಾಡುತ್ತೇವೆ- ಜನರು ಆತಂಕ ಪಡೋದು ಬೇಡ, ಆದರೆ ಮುಂಜಾಗ್ರತೆ ಬೇಕು" ಎಂದು ಹೇಳಿದ್ದಾರೆ.
"ದಯವಿಟ್ಟು ಜನರು ಬೀದಿಗೆ ಬರಬೇಡಿ. ಮೊದಲು ಪ್ರಾಣ ಉಳಿಸಿಕೊಳ್ಳಿ. ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲು ಸೂಚಿಸಲಾಗಿದೆ" ಎಂದು ತಿಳಿಸಿದರು.












Click it and Unblock the Notifications