ಬಳ್ಳಾರಿ ಬಿಜೆಪಿ ಅಭ್ಯರ್ಥಿಯಾಗಿ ಹರಪನಹಳ್ಳಿ ದೇವೇಂದ್ರಪ್ಪ ಕಣಕ್ಕೆ?
ಬಳ್ಳಾರಿ, ಮಾ.11: ಈ ಹಿಂದೆ ಗಣಿನಾಡಿನಲ್ಲಿ ನಡೆದ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ಆಯ್ಕೆ ಕುರಿತಂತೆ ಕಾಂಗ್ರೆಸ್ ಪಕ್ಷದಲ್ಲಿದ್ದ ಪರಿಸ್ಥಿತಿ ಈಗ ಭಾರತೀಯ ಜನತಾ ಪಕ್ಷಕ್ಕೆ ಬಂದೊದಾಗಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆಯಲು ದೆಹಲಿಗೆ ಅಲೆದೂ, ಅಲೆದೂ, ನಾಮಪತ್ರ ಸಲ್ಲಿಸಲು ಕೊನೆಯ ದಿನದವರೆಗೆ ಕಾದು, ಟಿಕೆಟ್ ಪಡೆದ ಮೇಲೆ ಅಭ್ಯರ್ಥಿ ಯಾರೆಂದು ಗೊತ್ತಾಗುತ್ತಿತ್ತು. 1996ರಲ್ಲಿ ನಡೆದ ಚುನಾವಣೆ 1999, 2000 ಉಪಚುನಾವಣೆ, 2004ರ ಚುನಾವಣೆ ಹಾಗೂ ಕಳೆದ ಕೆಲ ತಿಂಗಳ ಹಿಂದೆ ನಡೆದ ಉಪಚುನಾವಣೆವರೆಗೂ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ತಿಳಿಯಲು ನಾಮಪತ್ರ ಸಲ್ಲಿಸುವ ಕೊನೆಯ ದಿನದ ಮುನ್ನ ದಿನದ ವರೆಗೆ ಕಾಯಬೇಕಿತ್ತು. ಆದರೆ ಈ ಬಾರಿ ಪಕ್ಷಕ್ಕೆ ಆ ಪರಿಸ್ಥಿತಿ ಇಲ್ಲ.
ವಿ.ಎಸ್.ಉಗ್ರಪ್ಪನವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂಬುದು ಖಚಿತವಾಗಿರುವುದರಿಂದ ಈಗಾಗಲೇ ಅವರು ಕ್ಷೇತ್ರದಾದ್ಯಂತ ಓಡಾಟ ನಡೆಸಿದ್ದಾರೆ.ಆದರೆ, ಈ ಹಿಂದೆ ಇದ್ದ ಕಾಂಗ್ರೆಸ್ ನವರ ಪರಿಸ್ಥಿತಿ ಈಗ ಬಿಜೆಪಿಗೆ ಬಂದೊದಗಿದೆ.
ಕಳೆದ 3 ಸಾರ್ವತ್ರಿಕ ಚುನಾವಣೆಯಲ್ಲಿ ರೆಡ್ಡಿ ಮತ್ತು ಶ್ರೀರಾಮುಲು ತಂಡ ಹೇಳಿದಂತೆ ನಡೆಯುತ್ತಿದ್ದರಿಂದ ಪಕ್ಷಕ್ಕಿಂತ ಮೊದಲೇ ತಮ್ಮ ಅಭ್ಯರ್ಥಿಗಳು ಇವರು ಎಂದು ಘೋಷಣೆ ಮಾಡಿಕೊಂಡು ಪ್ರಚಾರ ನಡೆಸುತ್ತಿದ್ದರು.ಈಗ ಪರಿಸ್ಥಿತಿ ಬದಲಾಗಿದೆ. ಇದಕ್ಕೆ ಕಾರಣ ಏನೆಂಬುದನ್ನು ತಿಳಿಯಲು ಕೆಳಗಿನ ಸ್ಲೈಡ್ ನಲ್ಲಿ ಓದಿ...

ಶ್ರೀರಾಮುಲು ಒಬ್ಬರೇ ಸಾಟಿ
ಕಳೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಆದ ಭಾರೀ ಹಿನ್ನೆಡೆ, 2.40 ಲಕ್ಷ ಮತಗಳ ಅಂತರದ ಸೋಲು ಪಕ್ಷವನ್ನು ಕಂಗೆಡಿಸಿದೆ. ಕ್ಷೇತ್ರ ಎಸ್ ಟಿಗೆ ಮೀಸಲಿದ್ದು, ಹೊಸಪೇಟೆಯ ಕಟಿಗಿ ರಾಮಕೃಷ್ಣ, ಸಂಡೂರಿನ ಬಂಗಾರು ಹನುಮಂತ ನಾವು ಸ್ಪರ್ಧೆ ಮಾಡುತ್ತೇವೆ. ಟಿಕೆಟ್ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ ಇಂದಿನ ಚುನಾವಣೆಗಳನ್ನು ಎದುರಿಸಲು ಬೇಕಾದ ದ್ರವ್ಯ ಅವರ ಬಳಿ ಇಲ್ಲದ ಕಾರಣ ಅವರ ಮನವಿಗೆ ಬೆಲೆ ಇಲ್ಲದಂತಾಗಿದೆ. ವಾಕ್ ಚತುರ ಉಗ್ರಪ್ಪಗೆ ಸಡ್ಡು ಹೊಡೆಯಲು ಸದ್ಯ ಜಿಲ್ಲೆಯಲ್ಲಿ ಶ್ರೀರಾಮುಲು ಒಬ್ಬರೇ ಸಾಟಿ ಎನ್ನುವಂತಹ ಪರಿಸ್ಥಿತಿ ಇದೆ.

ಸುರೇಶ್ ಬಾಬು ಸಮ್ಮತಿಸುತ್ತಿಲ್ಲ
ಮೊಳಕಾಮ್ಮೂರು ಶಾಸಕರಾದವರು ಪದೇ ಪದೇ ರಾಜಿನಾಮೆ ಕೊಟ್ಟು, ಮತ್ತೊಂದು ಚುನಾವಣೆಗೆ ಕಾರಣರಾಗುತ್ತಾರೆಂಬ ಕಾರಣಕ್ಕೆ ಈಗ ಪಕ್ಷ ಸದ್ಯ ಶ್ರೀರಾಮುಲು ಅವರ ಹೆಸರನ್ನು ಬದಿಗಿರಿಸಿದೆ. ಶ್ರೀರಾಮುಲುಗೆ ಬಿಟ್ಟು, ಜಗದೀಶ್ ಶೆಟ್ಟರ್ ಅವರಿಗೆ ಜಿಲ್ಲೆಯ ಉಸ್ತುವಾರಿಯನ್ನು ಪಕ್ಷ ನೀಡಿದ್ದು, ಇದರಿಂದ ಜಿಲ್ಲೆಯಲ್ಲಿ ಪಕ್ಷ ತಮ್ಮ ಹಿಡಿತದಿಂದ ಕೈ ಜಾರುತ್ತಿದೆ ಎಂದು ಗಮನಿಸಿದ ಶ್ರೀರಾಮುಲು ಅವರು, ತಮ್ಮ ಸಂಬಂಧಿಗಳಾದ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಇದಕ್ಕೆ ಸುರೇಶ್ ಬಾಬು ಸಮ್ಮತಿಸುತ್ತಿಲ್ಲ ಎನ್ನಲಾಗುತ್ತಿದೆ.

ಬಿಜೆಪಿ ಮುಖಂಡರನ್ನು ಕಾಡುತ್ತಿರುವುದು
ಸದ್ಯ ಸಚಿವ ಡಿ.ಕೆ.ಶಿವಕುಮಾರ್ ಉಸ್ತುವಾರಿಕೆಯಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿರುವುದರಿಂದ ಚುನಾವಣಾ ವೆಚ್ಚಕ್ಕೆ ಲಕ್ಷ್ಮಿ ಪುತ್ರರೇ ಬೇಕೆಂಬ ನಿಟ್ಟಿನಲ್ಲಿ ತುಮಕೂರು, ಮೈಸೂರು ಭಾಗದ ಉದ್ಯಮಿಗಳಿಗೂ ಟಿಕೆಟ್ ನೀಡಬೇಕೆಂಬ ಚಿಂತನೆಯೂ ನಡೆದಿದೆಯಂತೆ. ಮತ್ತೊಂದು ಕಡೆ ಕಾಂಗ್ರೆಸ್ ನಲ್ಲಿನ ಅಸಮಾಧಾನದ ಗ್ರಾಮೀಣ ಶಾಸಕ ನಾಗೇಂದ್ರ ಅವರನ್ನು ಬಿಜೆಪಿಗೆ ಕರೆ ತರಬೇಕೆಂಬ ವಿಷಯವೂ ಜೀವಂತವಾಗಿದೆ.ಒಟ್ಟಿನಲ್ಲಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಪ್ರಶ್ನೆ ಈ ಹಿಂದೆ ಕಾಂಗ್ರೆಸ್ ಪಾಳೆಯದಲ್ಲಿದ್ದಂತೆ ಈಗ ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ಕಾಡತೊಡಗಿದೆ.

ಹರಪನಹಳ್ಳಿ ದೇವೇಂದ್ರಪ್ಪ ಬಿಜೆಪಿ ಅಭ್ಯರ್ಥಿ
ಈ ಹಿಂದೆ 1996ರಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯ್ತಿಯ ಉಪಾಧ್ಯಕ್ಷರಾಗಿದ್ದ ಹರಪನಹಳ್ಳಿಯ ದೇವೇಂದ್ರ ಅವರನ್ನು ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಹುತೇಕ ನಿರ್ಧರಿಸಿಲಾಗಿದೆ ಎಂದು ಹೇಳಲಾಗುತ್ತಿದೆ.ಈ ಬಗ್ಗೆ ಬಿಜೆಪಿ ಹೈಕಮಾಂಡ್ ಸಹ ಒಲವು ಹೊಂದಿದೆ. ಸದ್ಯ ಪರಹನಹಳ್ಳಿ ಬಳ್ಳಾರಿ ಜಿಲ್ಲೆಗೆ ಸೇರಿರುವುದರಿಂದ ಅವರ ಆಯ್ಕೆ ಸೂಕ್ತವಾಗುತ್ತೆ. ಜೊತೆಗೆ ಚುನಾವಣೆಯ ಎಲ್ಲ ತಂತ್ರಗಳನ್ನು ಎದುರಿಸುವ ಶಕ್ತಿ ಅವರಲ್ಲಿದೆ ಎನ್ನಲಾಗುತ್ತಿದೆ. ಇವರು ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ, ಜಾರಕಿಹೊಳಿ ಕುಟುಂಬದ ಬಂಧುಗಳಾದ ದೇವೇಂದ್ರಪ್ಪ ಅವರ ಪತ್ನಿ ಹಾಲಿ ದಾವಣಗೆರೆ ಜಿಲ್ಲಾ ಪಂಚಾಯ್ತಿಯ ಕಾಂಗ್ರೆಸ್ ನ ಸದಸ್ಯರಾಗಿದ್ದಾರೆ. ದೇವೇಂದ್ರಪ್ಪ ಅವರ ಮೂಲಕ ಡಿ.ಕೆ.ಶಿ ಗೆ ಟಾಂಗ್ ಕೊಡಲು ಜಾರಕಿಹೊಳಿ ಈ ಸೂತ್ರ ಹೆಣೆದಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಯಕರ್ತರ ಅಭಿಪ್ರಾಯದಂತೆ ಆಯ್ಕೆ
ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಏನಿಲ್ಲ. ಜಿಲ್ಲೆಯ ಮುಖಂಡರ ಅಭಿಪ್ರಾಯ ಪಡೆದು ಪಕ್ಷದ ವರಿಷ್ಠರಿಗೆ ಕಳುಹಿಸಿದೆ. 2-3 ದಿನದಲ್ಲಿ ಅಂತಿಮವಾಗಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಚೆನ್ನಬಸವನಗೌಡ ತಿಳಿಸಿದ್ದಾರೆ. "ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಲಿ, ಜಿಲ್ಲೆಯವರಾಗಲಿ, ಹೊರಗಿನವರಾಗಲಿ ಪಕ್ಷದ ಸೂಚನೆಯಂತೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ" ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ತಿಳಿಸಿದ್ದಾರೆ. "ಅಭ್ಯರ್ಥಿ ಕುರಿತು ಬೆಂಗಳೂರಿನಲ್ಲಿ ಅಂತಿಮ ಹಂತದ ಚರ್ಚೆ ನಡೆದಿದೆ. ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಷ್ಟ್ರ ಅಧ್ಯಕ್ಷ ಅಮಿತ್ ಷಾ, ಜಿಲ್ಲಾ ಉಸ್ತುವಾರಿಗಳಾದ ಜಗದೀಶ್ ಶೆಟ್ಟರ್ ಮಾರ್ಗದರ್ಶನದಂತೆ ಮತ್ತು ಜಿಲ್ಲೆಯ ಕಾರ್ಯಕರ್ತರ ಅಭಿಪ್ರಾಯದಂತೆ ಅಭ್ಯರ್ಥಿ ಆಯ್ಕೆ ಆಗಲಿದೆ" ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications