Gruhalakshmi scheme: ಅರ್ಜಿ ಸಲ್ಲಿಕೆಗೆ ಲಂಚ ಪಡೆದರೆ ಕ್ರಿಮಿನಲ್ ಕೇಸ್ ಖಚಿತ: ಬಳ್ಳಾರಿ ಶಾಸಕರಿಂದ ಬ್ಯಾನರ್ ಬರಹ
ಬಳ್ಳಾರಿ, ಆಗಸ್ಟ್, 01: ರಾಜ್ಯದ ಎಲ್ಲಾ ಅರ್ಹ ಮಹಿಳೆಯರಿಗೆ ಮಾಸಿಕ 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸಂಬಂಧ ಈಗಾಗಲೇ ರಾಜ್ಯವ್ಯಾಪಿ ಮಹಿಳೆಯರು ಅರ್ಜಿ ಸಲ್ಲಿಸಲು ಸೇವಾ ಕೇಂದ್ರ ಸೇರಿದಂತೆ ಖಾಸಗಿ ಸಂಸ್ಥೆಗಳ ಕೇಂದ್ರಗಳಿಗೆ ಸಾಗಾರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಅಲ್ಲಲ್ಲಿ ಅರ್ಜಿ ಸಲ್ಲಿಸಲು ಹಣ ಕೇಳುತ್ತಿರುವ ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆ ಬಳ್ಳಾರಿ ನಗರ ಶಾಸಕರು ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.
ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆಗೆ ಮಹಿಳೆಯರ ಬಳಿ ಹಣ ಕೇಳುತ್ತಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಬ್ಯಾನರೊಂದನ್ನು ಗಾಂಧಿನಗರದ ತಮ್ಮ ಕಚೇರಿ ಬಳಿ ಅಳವಡಿಸುವ ಮೂಲಕ ಸೇವಾ ಕೇಂದ್ರಗಳ ಸಿಬ್ಬಂದಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

"ಗೃಹಲಕ್ಷ್ಮೀ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಸೇವಾ ಕೇಂದ್ರದಲ್ಲಿ ಲಂಚ ಪಡೆದರೆ ಕ್ರಿಮಿನಲ್ ಕೇಸ್ ಖಚಿತ" ಎಂದು ಬ್ಯಾನರ್ನಲ್ಲಿ ಮುದ್ರಿಸಲಾಗಿದೆ. ಯಾರಾದರೂ ಅರ್ಜಿ ಸಲ್ಲಿಕೆಗೆ ಲಂಚ ಕೇಳಿದರೆ ತಮ್ಮ ದೂರವಾಣಿ ಮೂಲಕ ಸಂಪರ್ಕಿಸುವಂತೆಯೂ ಬ್ಯಾನರ್ನಲ್ಲಿ ತಮ್ಮ ನಂಬರ್ ಹಾಕುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ವೃದ್ಧೆಯ ಚಿನ್ನಾಭರಣ ದೋಚಿದ ಖದೀಮ
ಗೃಹಲಕ್ಷ್ಮಿ ಯೋಜನೆ ನೊಂದಣಿ ಮಾಡಿಸುವುದಾಗಿ ನಂಬಿಸಿ ವೃದ್ಧೆಯ ಬಳಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬೊಂಬೆನಗರಿ ಖ್ಯಾತಿಯ ಚನ್ನಪಟ್ಟಣದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಗ್ರಾಮದ ಸಾವಿತ್ರಮ್ಮ (62) ಗೃಹಲಕ್ಷ್ಮಿ ಯೋಜನೆ ಮಾಡಿಸಲು ಹೋಗಿ ವಂಚನೆಗೊಳಗಾಗಿದ್ದಾರೆ. ಅನಾರೋಗ್ಯದಿಂದ ನಗರದ ಆಸ್ಪತ್ರೆಗೆ ಸೇರಿದ್ದ ಮಗಳನ್ನು ನೋಡಲು ಬಂದಿದ್ದ ವೃದ್ಧೆ ಸಾವಿತ್ರಮ್ಮ ಅವರನ್ನು ಸರ್ಕಾರದ ಯೋಜನೆಯ ಆಸೆ ತೋರಿಸಿದ ಖದೀಮ ಅವರ ಚಿನ್ನದ ಸರ ದೋಚಿದ್ದಾನೆ.
ವಂಚನೆಗೊಳಗಾದ ಸಾವಿತ್ರಮ್ಮ ತನ್ನ ಗ್ರಾಮ ಹಾರೋಕೊಪ್ಪದಿಂದ ಚನ್ನಪಟ್ಟಣ ನಗರಕ್ಕೆ ಬಂದ ಸಮಯದಲ್ಲಿ ಬಸ್ ನಿಲ್ದಾಣ ಪಕ್ಕದ ಅಂಚೆಕಚೇರಿ ರಸ್ತೆಯಲ್ಲಿ ವೃದ್ಧೆಯನ್ನು ಅನಾಮಿಕ ವ್ಯಕ್ತಿಯೋರ್ವ ಮಾತನಾಡಿಸಿ, ನೀವು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿದ್ದೀರಾ ಎಂದು ಕೇಳಿದ್ದಾನೆ. ಈ ವೇಳೆ ವೃದ್ಧೆ ಇಲ್ಲ ಎಂದಾಗ ನಿಮಗೆ ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದಾನೆ.
ಗೃಹಲಕ್ಷ್ಮಿ ಯೋಜನೆಗ ನೊಂದಾಯಿಸಲು ನಿಮ್ಮ ಮೆಡಿಕಲ್ ಸರ್ಟಿಫಿಕೇಟ್ ಬೇಕು ಎಂದು ವೃದ್ಧೆಯನ್ನು ನಂಬಿಸಿ ಚನ್ನಪಟ್ಟಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮೆಡಿಕಲ್ ಟೆಸ್ಟ್ ಮಾಡುವಾಗ ನಿಮ್ಮ ಚಿನ್ನಾಭರಣ ತೆಗೆದಿಡಬೇಕು, ನಿಮ್ಮ ಕತ್ತಿನಲ್ಲಿ ಚಿನ್ನದ ಸರ ನೋಡಿದರೆ ನೀವು ಶ್ರೀಮಂತರು ಎಂದು ಮೆಡಿಕಲ್ ಸರ್ಟಿಫಿಕೇಟ್ ಮಾಡಿಕೊಡುವುದಿಲ್ಲ ಎಂದು ಸುಳ್ಳು ಹೇಳಿದ್ದಾನೆ.
ಖದೀಮನ ಮಾತು ನಂಬಿದ ವೃದ್ಧೆ ತಮ್ಮ ಬಳಿ ಇದ್ದ ಸುಮಾರು 2.5ಲಕ್ಷ ಮೌಲ್ಯದ 40ಗ್ರಾಂ ಚಿನ್ನಾದ ಸರವನ್ನು ಕಳಚಿ ಪರ್ಸ್ನಲ್ಲಿ ಇಟ್ಟಿದ್ದಾರೆ. ಈ ವೇಳೆ ನಿಮ್ಮ ಬಳಿ ಚಿನ್ನದ ಒಡೆವೆ ಇದ್ದರೆ ಚೆಕ್ ಮಾಡುತ್ತಾರೆ ಎಂದು ನೆಪ ಹೇಳಿ ಅವರ ಬ್ಯಾಗಿನಲ್ಲಿ ಚಿನ್ನದ ಸರವಿದ್ದ ಪರ್ಸ್ ಕದ್ದು ವೃದ್ಧೆಯನ್ನು ಆಸ್ಪತ್ರೆಯಲ್ಲೇ ಬಿಟ್ಟು ವ್ಯಕ್ತಿ ಪರಾರಿ ಆಗಿದ್ದಾನೆ.
ಆಸ್ಪತ್ರೆಯಲ್ಲಿ ಸ್ವಲ್ಪ ಕಾಲ ಅನಾಮಿಕನಿಗೆ ಕಾದ ವೃದ್ಧೆಗೆ ಅನಾಮಿಕ ಬಾರದ ಹಿನ್ನಲೆಯಲ್ಲಿ ತಾನು ವಂಚನೆಗೊಳಗಾಗಿರೋದು ಗೊತ್ತಾಗಿದೆ. ಕೂಡಲೇ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಆಸ್ಪತ್ರೆಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಖದೀಮ ವೃದ್ಧೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರುವ ವಿಡಿಯೋ ಸೆರೆಯಾಗಿದೆ. ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ವಿಡಿಯೋ ಪರಿಶೀಲಿಸಿದ ಪೊಲೀಸರು ಖದೀಮನ ಬಂಧನಕ್ಕೆ ಬಲೆ ಬೀಸಿದ್ದರು.












Click it and Unblock the Notifications