ಪಾಪ ಪರಿಹಾರಕ್ಕೆ ರಾಮೇಶ್ವರನ ಮೊರೆ ಹೋದರಾ ಜನಾರ್ಧನ ರೆಡ್ಡಿ?
ಬಳ್ಳಾರಿ, ಸೆಪ್ಟೆಂಬರ್ 13: ದಕ್ಷಿಣ ಭಾರತದ ಪುಣ್ಯಕ್ಷೇತ್ರವಾದ ತಮಿಳುನಾಡಿನ ರಾಮೇಶ್ವರಕ್ಕೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಕುಟುಂಬ ಸಮೇತ ಭೇಟಿ ನೀಡಿರುವ ಕುರಿತು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮೈನಿಂಗ್ ಕೇಸ್ ನಲ್ಲಿ ಜೈಲು ಸೇರಿದ ಬಳಿಕ ಬಳ್ಳಾರಿಗೆ ಕಾಲಿಡದೆ ವರ್ಷಗಳೇ ಕಳೆದಿದ್ದು, ಸದ್ಯ ರಾಜಕೀಯದಿಂದ ದೂರವಿರುವ ಜನಾರ್ಧನ ರೆಡ್ಡಿ ಅವರು ತಮಿಳುನಾಡು ರಾಜ್ಯದ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ನಲ್ಲಿರುವ ಜ್ಯೋತಿರ್ಲಿಂಗದ ದರ್ಶನ ಪಡೆದಿದ್ದಾರೆ.
ರಾಮೇಶ್ವರಂ ಕ್ಷೇತ್ರವು ವಿಶೇಷವಾಗಿ ಪಂಬನ್ ನಡುಗಡ್ಡೆಯಲ್ಲಿದೆ. ಪಂಬನ್ ಸೇತುವೆಯು ರಾಮೇಶ್ವರವನ್ನು ದೇಶದ ಇತರ ಭಾಗಗಳೊಂದಿಗೆ ಜೋಡಿಸುತ್ತದೆ. ಶ್ರೀಲಂಕಾದ ಮನ್ನಾರ್ ದ್ವೀಪ ರಾಮೇಶ್ವರದಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿದೆ.

ಪುರಾಣಗಳ ಪ್ರಕಾರ ಶ್ರೀ ಮಹಾವಿಷ್ಣುವಿನ ಏಳನೇ ಅವತಾರ ಎಂದು ಕರೆಯಲ್ಪಡುವ ಶ್ರೀರಾಮನು ಲಂಕಾಧೀಶ ರಾವಣನನ್ನು ವಧಿಸಿ, ತನ್ನ ಮಾತೃ ಭೂಮಿಗೆ ಕಾಲಿಟ್ಟಾಗ, ಬ್ರಾಹ್ಮಣನನ್ನು ವಧಿಸಿದ ಕಾರ್ಯದ ಪರಿಹಾರಾರ್ಥವಾಗಿ ಸ್ವತಃ ಶ್ರೀರಾಮನೇ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಶಿವನನ್ನು ಪೂಜಿಸುತ್ತಾನೆ ಹಾಗೂ ಶಿವನು ಇಲ್ಲಿ ನಿರಂತರವಾಗಿ ವಾಸಿಸಬೇಕು ಎಂದು ಪ್ರಾರ್ಥಿಸುತ್ತಾನೆ.
ಶ್ರೀರಾಮನು ಈಶ್ವರನನ್ನು ಪೂಜಿಸಿರುವುದರಿಂದ ಕ್ರಮೇಣವಾಗಿ ಈ ಪ್ರದೇಶಕ್ಕೆ ರಾಮೇಶ್ವರಂ ಎಂಬ ಹೆಸರಿನಿಂದ ಕರೆಯುಲಾಗುತ್ತಿದೆ. ಶ್ರೀರಾಮನು ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿದ ಸ್ಥಳ ಎಂದು ಹೇಳಲಾಗುತ್ತದೆ. ಈ ಪುಣ್ಯಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತರು ಸಮುದ್ರ ಸ್ನಾನ ಮಾಡಿಕೊಂಡು ಬಂದ ನಂತರ 24 ತೀರ್ಥ ಬಾವಿಗಳ ನೀರಿನಲ್ಲಿ ಸ್ನಾನ ಮಾಡಿದರೆ ತಮ್ಮ ಪಾಪಗಳೆಲ್ಲವೂ ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ತಿಳಿಸಿದ್ದಾರೆ.

16ನೇ ಶತಮಾನದಿಂದ 1765ರ ವರೆಗೆ ಅಂದರೆ, ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ರಾಮೇಶ್ವರವನ್ನು ವಶಕ್ಕೆ ತೆಗೆದುಕೊಳ್ಳುವ ಮೊದಲು ರಾಮೇಶ್ವರ, ವಿಜಯನಗರ ಸಾಮ್ರಾಜ್ಯದ ಆಡಳಿತಕ್ಕೊಳಪಟ್ಟಿತ್ತು. ಅಲ್ಲಿನ ಅನೇಕ ಸಂಸ್ಕೃತಿಗಳು ಹಾಗೂ ಸ್ಥಳೀಯ ಜನರ ದೈನಂದಿನ ಸಂಪ್ರದಾಯಗಳು ಅಲ್ಲದೆ ಕಟ್ಟಡಗಳ ವಾಸ್ತುಶಿಲ್ಪಗಳಲ್ಲಿ ವಿಜಯನಗರ ಸಾಮ್ರಾಜ್ಯದ ಕುರುಹುಗಳನ್ನು ಕಾಣಬಹುದು.
ಈ ಒಂದು ಪುಣ್ಯಕ್ಷೇತ್ರವು ನಮ್ಮ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ಸ್ಥಳವಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಶ್ರೀರಾಮಚಂದ್ರ ಪಾಪ ಪರಿಹಾರಕ್ಕೆ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಶಿವನನ್ನು ಪೂಜಿಸಿದ ಪುಣ್ಯಕ್ಷೇತ್ರಕ್ಕೆ ನಾನು ಕುಟುಂಬ ಸಮೇತ ಹೋಗಿ ರಾಮನಾಥೇಶ್ವರ ದೇವರ ದರ್ಶನ ಪಡೆದು ಬಂದಿರುವೆ ಎಂದು ಮಾಜಿ ಸಚಿವ ಹೇಳಿದ್ದಾರೆ.












Click it and Unblock the Notifications