ದಸರಾ; ಬೆಂಗಳೂರು-ಬಳ್ಳಾರಿ ವಿಶೇಷ ರೈಲಿಗೆ ಬೇಡಿಕೆ
ಬಳ್ಳಾರಿ, ಅಕ್ಟೋಬರ್ 18: ಹುಬ್ಬಳ್ಳಿಯಲ್ಲಿ ಕೇಂದ್ರ ಕಛೇರಿ ಹೊಂದಿರುವ ನೈಋತ್ಯ ರೈಲ್ವೆ ದಸರಾ ಹಬ್ಬದ ಪ್ರಯುಕ್ತ ಹಲವು ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಬೆಂಗಳೂರು ನಗರಿಂದ ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳು ಸಂಚಾರ ನಡೆಸುತ್ತಿವೆ.
ವಾರಾಂತ್ಯದ ರಜೆ, ದಸರಾ ಹಬ್ಬದ ಸಂದರ್ಭದಲ್ಲಿಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಅಕ್ಟೋಬರ್ 20 ರಿಂದ 24, 25ರ ತನಕ ವಿಶೇಷ ರೈಲುಗಳು ಓಡಲಿವೆ.

ಬಳ್ಳಾರಿಯ ಸಂಸದ ವೈ. ದೇವೇಂದ್ರಪ್ಪ ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ಗೆ ಪತ್ರವೊಂದನ್ನು ಬರೆದಿದ್ದಾರೆ. ದಸರಾ ಸಂದರ್ಭದಲ್ಲಿ ಬೆಂಗಳೂರು ನಗರ ಮತ್ತು ಬಳ್ಳಾರಿ, ವಿಜಯನಗರಕ್ಕೆ ವಿಶೇಷ ರೈಲು ಓಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಂಸದರ ಪತ್ರದ ವಿವರ; ಸಂಸದ ವೈ. ದೇವೇಂದ್ರಪ್ಪ ಪತ್ರದಲ್ಲಿ ಕರ್ನಾಟಕದ ವಿವಿಧ ಭಾಗದಲ್ಲಿ ದಸರಾವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ವಿಜಯನಗರ ಸಾಮಾಜ್ಯದ ಕಾಲದಿಂದಲೂ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ವಿವರಣೆ ನೀಡಿದ್ದಾರೆ.
ವಿಜಯನಗರ ರೈಲ್ವೆ ಹಿತರಕ್ಷಣಾ ಸಮಿತಿ ಸದಸ್ಯರು ತಮಗೆ ಬೆಂಗಳೂರು-ಬಳ್ಳಾರಿ-ವಿಜಯನಗರ ನಡುವೆ ದಸರಾ ಸಂರ್ಭದಲ್ಲಿ ವಿಶೇಷ ರೈಲಿನ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ಪತ್ರದಲ್ಲಿ ಸಂಸದರು ಹೇಳಿದ್ದಾರೆ.
ದಸರಾ ಸಂದರ್ಭದಲ್ಲಿ ಹೆಚ್ಚಿನ ಜನರು ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗೆ ಬೆಂಗಳೂರು ನಗರದಿಂದ ಸಂಚಾರ ನಡೆಸುತ್ತಾರೆ. ಈ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲು ಓಡಿಸಬೇಕು ಎಂದು ಕೋರಿದ್ದಾರೆ.
ಆದ್ದರಿಂದ ನೈಋತ್ಯ ರೈಲ್ವೆ ಬೆಂಗಳೂರು ನಗರದಿಂದ ಬಳ್ಳಾರಿ, ವಿಜಯನಗರಕ್ಕೆ ದಸರಾ ವಿಶೇಷ ರೈಲು ಓಡಿಸಿದರೆ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗೆ ಆಗಮಿಸುವ ಜನರು, ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ಸಂಸದರು ಮನವಿ ಮಾಡಿದ್ದಾರೆ.
ನೈಋತ್ಯ ರೈಲ್ವೆ ಈಗಾಗಲೇ ದಸರಾ ಹಬ್ಬದ ಅಂಗವಾಗಿ ಬೆಂಗಳೂರು-ಮೈಸೂರು, ಮೈಸೂರು-ಚಾಮರಾಜನಗರ, ವಾಸ್ಕೋ-ಡ- ಗಾಮಾ ಮತ್ತು ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ.
ಮೈಸೂರು ಮಾರ್ಗದಲ್ಲಿ ಸಂಚಾರ ನಡೆಸುವ ರೈಲುಗಳಿಗೆ ಅಕ್ಟೋಬರ್ 19 ರಿಂದ 29ರ ತನಕ ಹಲವು ನಿಲ್ದಾಣಗಳಲ್ಲಿ ವಿಶೇಷ ನಿಲುಗಡೆ ನೀಡಿದೆ. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಯಾವ ಮಾರ್ಗದಲ್ಲಿ ವಿಶೇಷ ರೈಲು ಓಡಿಸಬೇಕು ಎಂದು ವೇಳಾಪಟ್ಟಿ ತಯಾರು ಮಾಡುತ್ತಿದೆ.
ಮೈಸೂರು ದಸರಾ ಮಾದರಿಯಲ್ಲಿ ಮಡಿಕೇರಿ, ಮಂಗಳೂರು ನಗರದಲ್ಲಿಯೂ ಸಹ ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ದಸರಾ ಸಂದರ್ಭ ಸಾವಿರಾರು ಜನರು ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುತ್ತಾರೆ. ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಓಡಿಸಬೇಕು ಎಂದು ನೈಋತ್ಯ ರೈಲ್ವೆ ಮುಂದೆ ಬೇಡಿಕೆ ಇಡಲಾಗಿದೆ.
ಹೈದರಾಬಾದ್-ಕರ್ನಾಟಕ, ಉತ್ತರ ಕರ್ನಾಟಕ ಭಾಗಕ್ಕೆ ನೈಋತ್ಯ ರೈಲ್ವೆ ಇನ್ನೂ ದಸರಾ ವಿಶೇಷ ರೈಲುಗಳನ್ನು ಘೋಷಣೆ ಮಾಡಿಲ್ಲ. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಒಂದು ಟ್ರಿಪ್ ಸಂಚಾರ ನಡೆಸುವ ರೈಲುಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ. ಖಾಸಗಿ ಬಸ್ಗಳ ದರಗಳು ಸಹ ದುಪ್ಪಟ್ಟು ಆಗಿದ್ದು, ವಿಶೇಷ ರೈಲುಗಳ ಸಂಚಾರದಿಂದ ಜನರಿಗೆ ಸಹಾಯಕವಾಗಲಿದೆ.
ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು, ಜನಶತಾಬ್ದಿ ರೈಲುಗಳಿವೆ. ಗದಗ, ಕೊಪ್ಪಳ, ಬೀದರ್, ಬೆಳಗಾವಿ ಮುಂತಾದ ನಗರಗಳಿಗೆ ವಿಶೇಷ ರೈಲುಗಳನ್ನು ಓಡಿಸಬೇಕು ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ.












Click it and Unblock the Notifications