ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಟ್ಟ ದಯಾನಂದ ಪುರಿ ಮಾಹಾ ಸ್ವಾಮೀಜಿ
ವಿಜಯನಗರ, ಜುಲೈ 22; ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡುವುದಕ್ಕೆ ಹಂಪಿಯ ಗಾಯತ್ರಿ ಪೀಠದ ದಯಾನಂದಪುರಿ ಮಹಾಸ್ವಾಮೀಜಿ ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ನಾಯಕರಿಗೆ ಅವರು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಗುರುವಾರ ಹಂಪಿಯಲ್ಲಿ ಮಾತನಾಡಿದ ಅವರು ಅಖಂಡ ನೇಕಾರ ಸ್ವಾಮೀಜಿ ಪರವಾಗಿ ಆಗ್ರಹವನ್ನು ಮಾಡಿದರು. "ಈ ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿ ಯಡಿಯೂರಪ್ಪನವರಾಗಿದ್ದಾರೆ. ಕೋವಿಡ್ ಸಂಕಷ್ಟದ ಸಮಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ" ಎಂದರು.
"ಬಿಜೆಪಿ ಯಡಿಯೂರಪ್ಪರನ್ನು ನ್ಯಾಯಯುತವಾಗಿ ಮತ್ತು ಗೌರವಯುತವಾಗಿ ಬಳಸಿಕೊಳ್ಳಬೇಕು. ರಾಜೀನಾಮೆ ನೀಡಿದರೆ ಯಡಿಯೂರಪ್ಪಗೆ ನಷ್ಟ ಸಂಭವಿಸುವುದಿಲ್ಲ. ಬದಲಾಗಿ ಪಕ್ಷಕ್ಕೆ ದೊಡ್ಡ ಹಾನಿ ಉಂಟಾಗುತ್ತದೆ. ಅವರು ಒಂದೇ ಸಮುದಾಯಕ್ಕೆ ಮೀಸಲಾಗಿರುವವರಲ್ಲ, ಎಲ್ಲಾ ಸಮುದಾಯಗಳಿಗೆ ಬೇಕಾದವರು" ಎಂದು ಸ್ವಾಮೀಜಿ ಬಣ್ಣಿಸಿದರು.

"ಈ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೇ ಯಡಿಯೂರಪ್ಪ ಪಾತ್ರ ದೊಡ್ಡದಿದೆ. ಈಗ ಬಿಜೆಪಿ ಅಧಿಕಾರಕ್ಕೆ ಬಂದಿದೆ ಅಂತ ಅವರನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ದಯಾನಂದಪುರಿ ಮಾಹಾ ಸ್ವಾಮೀಜಿ ಎಚ್ಚರಿಕೆಯನ್ನು ನೀಡಿದರು.
"ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಸತತವಾಗಿ 4 ದಶಕಗಳ ಕಾಲ ಹೋರಾಟಗಳನ್ನು ಮಾಡಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಸಣ್ಣ ಸಣ್ಣ ಜಾತಿಗಳನ್ನು ಕೂಡಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರೊಬ್ಬರು ಜಾತ್ಯಾತೀತ ನಾಯಕ" ಎಂದರು.
"ಯಡಿಯೂರಪ್ಪ ಅವರ ಸೇವೆ ರಾಜ್ಯಕ್ಕೆ ಇನ್ನೂ ಬೇಕಾಗಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವವರಿದ್ದಾರೆ. ಅವರನ್ನ ಸ್ವತಂತ್ರ್ಯವಾಗಿ ಕೆಲಸ ಮಾಡುವುದಕ್ಕೆ ಬಿಡಬೇಕು. ಮುಂದಿನ ಎರಡು ವರ್ಷಗಳ ಕಾಲ ಅವರೇ ಸಿಎಂ ಆಗಿ ಮುಂದುವರೆಯಬೇಕು" ಎಂದು ಸ್ವಾಮೀಜಿ ಆಗ್ರಹಿಸಿದರು.












Click it and Unblock the Notifications