ವಿಜಯನಗರ; ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಜನ!
ಹೊಸಪೇಟೆ, ಏಪ್ರಿಲ್ 25; ಕೋವಿಡ್ ಸೋಂಕು ಹರಡುವಿಕೆ ತಡೆಯಲು ಸರ್ಕಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಬೆಳಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಕೊಟ್ಟಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು. ಈ ಸಂದರ್ಭದಲ್ಲಿ ಹಲವಾರು ಜನರು ಮಾಸ್ಕ್ ಸಹ ಧರಿಸಿರಲಿಲ್ಲ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಖರೀದಿ ಭರಾಟೆಯಲ್ಲಿ ಬ್ಯುಸಿಯಾಗಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಎಸಿ ಮತ್ತು ಡಿವೈಎಸ್ಪಿ ಆಗಮಿಸಿ ಜನರನ್ನು ಚದುರಿಸಿದರು. ಶನಿವಾರವೂ ಸಹ ಜನರು ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ತರಕಾರಿ ಖರೀದಿಗೆ ಮುಗಿಬಿದ್ದಿದ್ದರು. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದರು.

ಎಪಿಎಂಸಿಗೆ ಆಗಮಿಸಿದ ಸಹಾಯಕ ಆಯುಕ್ತಾರದ ಸಿದ್ದರಾಮೇಶ್ವರ ಮತ್ತು ಡಿವೈಎಸ್ಪಿ ರಘುಕುಮಾರ ಜನರನ್ನು ಚದುರಿಸುವ ಕೆಲಸವನ್ನು ಮಾಡಿದರು. ವರ್ತಕರಿಗೆ ಮತ್ತು ಸಾರ್ವಜನಿಕರಿಗೆ ಎಸಿ ಮತ್ತು ಡಿವೈಎಸ್ಪಿಯವರು ಮೈಕ್ ಮುಖಾಂತರ ಕೋವಿಡ್ ನಿಯಮ ಪಾಲಿಸುವಂತೆ ಕರೆ ಕೊಟ್ಟರು.
ಮಾರುಕಟ್ಟೆಯಲ್ಲಿ ಓಡಾಟ; ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ತಿಳುವಳಿಕೆ ಹೇಳಿದರೂ ಸಹ ಕೇಳುತ್ತಿಲ್ಲ. ಆದ್ದರಿಂದ, ಸ್ವತಃ ಎಸಿ ಲಾಠಿ ಹಿಡಿದು ಎಪಿಎಂಸಿ ಮಾರುಕಟ್ಟೆಯಲ್ಲಿ ಓಡಾಡಿದರು. ವರ್ತಕರಿಗೆ ರಿಟೇಲ್ ಇನ್ನೊಮ್ಮೆ ಕೊಡುತ್ತಿರುವುದು ಗಮನಕ್ಕೆ ಬಂದರೇ ನಿಮ್ಮ ಲೈಸೆನ್ಸ್ ರದ್ದು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಪ್ರಕರಣ ದಾಖಲು; ಕೋವಿಡ್ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಪ್ರಕರಣಗಳನ್ನು ದಾಖಲು ಮಾಡಲಾಗುತ್ತದೆ ಎಂದು ಟಿ. ಬಿ. ಡ್ಯಾಂನ ಸಿಪಿಐ ನಾರಾಯಣ ಎಚ್ಚರಿಕೆ ನೀಡಿದರು.
ಹೊಸಪೇಟೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳು ಮೊಕ್ಕಂ ಹೂಡಿದ್ದರು. ಕೋವಿಡ್ ನಿಯಮ ಪಾಲನೆ ಬಗ್ಗೆ ಪರಿಶೀಲಿಸಿದರು.












Click it and Unblock the Notifications