ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಶರಣಾದ ಬಳ್ಳಾರಿಯ ದಂಪತಿ
ಬಳ್ಳಾರಿ, ಸೆಪ್ಟೆಂಬರ್ 29: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿಂಗ್ರಿಹಳ್ಳಿ ಗ್ರಾಮದಲ್ಲಿ ನಿನ್ನೆ ಸೆ.28ರ ರಾತ್ರಿ ನಡೆದಿದೆ.
ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿಂಗ್ರಿಹಳ್ಳಿ ಸುಧಾ (30) ಎಂಬುವವರು ಕ್ರಿಮಿನಾಶಕ ಸೇವಿಸಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸಾವನ್ನು ಕಂಡು, ಎಲ್ಲಿ ತನ್ನ ಮೇಲೆ ಆರೋಪ ಬರುತ್ತದೋ ಎಂದು ಹೆದರಿ ಪತಿ ತೆಲಿಗರ ಹನುಮಂತಪ್ಪ (33) ಕೂಡ ತನ್ನ ಜಮೀನಿಗೆ ತೆರಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ಘಟನೆಯ ವಿವರ: ಮದುವೆಯಾಗಿ ಮೂರು ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ವಿಷಯವಾಗಿ ಆಗಾಗ್ಗೆ ಜಗಳವೂ ನಡೆಯುತ್ತಿತ್ತು. ಇದರಿಂದ ಮನನೊಂದ ಪತ್ನಿ ಸುಧಾ, ಗಂಡನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸಾವಿನ ಆರೋಪ ತನ್ನ ಮೇಲೆ ಬರುತ್ತದೆ ಎಂಬ ಕಾರಣಕ್ಕೆ ಪತಿ ಹನುಮಂತಪ್ಪ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಸುಧಾ ಅವರ ತಂದೆ ಹಾಗೂ ಮೃತ ಹನುಮಂತಪ್ಪನ ಸಹೋದರ ಇಬ್ಬರು ಪ್ರತ್ಯೇಕವಾಗಿ ದೂರು ನೀಡಿದ್ದು. ಈ ಕುರಿತು ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಶೀಲ್ದಾರ ಅನಿಲ್ಕುಮಾರ ಹಾಗೂ ವೃತ್ತ ನಿರೀಕ್ಷಕ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.












Click it and Unblock the Notifications