ಬಳ್ಳಾರಿ ವಿಭಜನೆಗೆ ಬೆಂಕಿಯೇ ಹತ್ತುವುದಿಲ್ಲ ಇನ್ನೂ ಹೊತ್ತಿ ಉರಿಯುವ ಪ್ರಶ್ನೆ ಎಲ್ಲಿಂದ?
ಬಳ್ಳಾರಿ, ಅಕ್ಟೋಬರ್ 01: ಬಿ.ಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರವು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಎಂಬ ನೂತನ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲು ಮುಂದಾಗಿದೆ. ಈ ನಡುವೆ ಜಿಲ್ಲೆ ವಿಭಜನೆ ಬಗ್ಗೆ ಶಾಸಕ ಸೋಮಶೇಖರ ರೆಡ್ಡಿ ಅವರು ನೀಡಿರುವ ಹೇಳಿಕೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರರಾದ ಪತ್ರೇಶ್ ಹಿರೇಮಠ ಅವರು ಪ್ರತಿಕ್ರಿಯಿಸಿದ್ದಾರೆ.
"ಬಳ್ಳಾರಿ ಜಿಲ್ಲೆ ವಿಭಜನೆಯಾದರೆ ಇಡೀ ಬಳ್ಳಾರಿ ಜಿಲ್ಲೆ ಹೊತ್ತಿ ಉರಿಯುತ್ತೆ ಅಂತ ಶಾಸಕ ಸೋಮಶೇಖರ ರೆಡ್ಡಿ ಹೇಳಿರುವುದು ತುಂಬಾ ಹಾಸ್ಯಾಸ್ಪದ ಮತ್ತು ಖಂಡನೀಯ. ಬಳ್ಳಾರಿ ಜಿಲ್ಲೆ ವಿಭಜನೆ ಆಗೋಕೆ ಶಾಸಕರಾದ ಸೋಮಶೇಖರ ರಡ್ಡಿ ಮತ್ತು ಕರುಣಾಕರರೆಡ್ಡಿ ವಿರೋಧ ಬಿಟ್ಟರೆ ಉಳಿದ ಎಲ್ಲಾ ಪಕ್ಷಗಳ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಒಪ್ಪಿಗೆ ಇದೆ" ಎಂದು ಪತ್ರೇಶ್ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.
"ಬಳ್ಳಾರಿ ಜಿಲ್ಲೆ ವಿಭಜನೆಗೆ ಎಲ್ಲರ ಸಹಮತ ಇದೆ ಜೊತೆಗೆ ನೂತನ ಕೇಂದ್ರ ಸ್ಥಾನದ ಬಗ್ಗೆ ಹೊಸಪೇಟೆ ಹಗರಿಬೊಮ್ಮನಹಳ್ಳಿ ಹಡಗಲಿ ಹರಪನಹಳ್ಳಿ ಹೀಗೆ ನಮ್ಮ ತಾಲ್ಲೂಕು ಜಿಲ್ಲೆಯಾಗಲಿ ಎನ್ನುವ ಬೇಡಿಕೆ ಇದೆಯೇ ಹೊರತು ಬಳ್ಳಾರಿ ಜಿಲ್ಲೆಯ ವಿಭಜನೆಗೆ ಎಲ್ಲಾ ತಾಲೂಕಗಳ ಸಮ್ಮತಿ ಇದೆ. ಬಳ್ಳಾರಿ ಜಿಲ್ಲೆ ವಿಭಜನೆಯಾದರೆ ಎಲ್ಲಿಯೂ ಬೆಂಕಿಯೇ ಹತ್ತುವುದಿಲ್ಲ ಇನ್ನೂ ಹೊತ್ತಿ ಉರಿಯುವ ಪ್ರಶ್ನೆ ಎಲ್ಲಿಂದ?" ಎಂದು ಪ್ರಶ್ನಿಸಿದ್ದಾರೆ.

"ಕಾರು, ಹೆಲಿಕಾಪ್ಟರ್ ಬಳಸುವ ನಿಮಗೆ ಜಿಲ್ಲಾ ಕೇಂದ್ರಕ್ಕೆ ಬರಲು ಪಶ್ಚಿಮ ತಾಲ್ಲೂಕಿನ ಸಾರ್ವಜನಿಕರ ಗೋಳು ಅರ್ಥ ಮಾಡಿಕೊಂಡರೆ ತಾವು ವಿಭಜನೆಗೆ ಒಪ್ಪುತ್ತೀರಿ. ಇಲ್ಲಿಯವರೆಗಿನ ಸಾರ್ವಜನಿಕರ ಗೋಳು ಇನ್ನಾದರೂ ಕಡಿಮೆಯಾಗಲು ಬಳ್ಳಾರಿ ಜಿಲ್ಲೆ ವಿಭಜನೆಯಾಗಲಿ" ಎಂದು ಒತ್ತಾಯಿಸಿದ್ದಾರೆ.
ಬಳ್ಳಾರಿಯಲ್ಲಿ ಕುರುಗೋಡು, ಸಿರಗುಪ್ಪ, ಸಂಡೂರು ಹಾಗೂ ಕೂಡ್ಲಿಗಿ ತಾಲೂಕು ಉಳಿಸಿಕೊಳ್ಳಲಾಗುತ್ತದೆ. ನೂತನ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ಜಿಲ್ಲಾಕೇಂದ್ರವಾಗಿರಲಿದ್ದು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕಂಪ್ಲಿ, ಕೊಟ್ಟೂರು, ಹಡಗಲಿ ತಾಲೂಕುಗಳಿರಲಿವೆ.
ಆಡಳಿತ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆ ವಿಭಜನೆಗೆ ಬಿಜೆಪಿ ಸರ್ಕಾರ ಮುಂದಾಗಿದ್ದು, ಗಾಲಿ ರೆಡ್ಡಿ ಸೋದರರು ವಿರೋಧ ವ್ಯಕ್ತಪಡಿಸಿದ್ದರೆ, ಆನಂದ್ ಸಿಂಗ್ ಬಣ ಸಹಮತ ವ್ಯಕ್ತಪಡಿಸಿದೆ. ಸಾರ್ವಜನಿಕರಲ್ಲೂ ಪರ-ವಿರೋಧ ಚರ್ಚೆ ಮುಂದುವರೆದಿದೆ.












Click it and Unblock the Notifications