ಸಿದ್ದರಾಮಯ್ಯ ವಿರುದ್ಧ ಹಗುರ ಮಾತು, ಶ್ರೀರಾಮುಲುಗೆ ಅಧಿಕಾರದ ಮದ ಏರಿದೆ ಎಂದ ಶಾಸಕ ನಾಗೇಂದ್ರ
ಬಳ್ಳಾರಿ, ಅಕ್ಟೋಬರ್ 18: ಕರ್ನಾಟಕ ಕಂಡ ಧೀಮಂತ ನಾಯಕ, 'ಅಭಿನವ ದೇವರಾಜು ಅರಸು' ಎಂದು ಜನರಿಂದ ಕರೆಸಿಕೊಂಡಿರುವ ಸಿದ್ದರಾಮಯ್ಯ ಅವರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹಗುರವಾಗಿ ಮಾತಾಡಿದ್ದಾರೆ, ಅವರಿಗೆ ಅಧಿಕಾರದ ಮದ ಏರಿದೆ, ಇದಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.
ಭಾರತ್ ಜೋಡೊ ಯಾತ್ರೆಯ ಯಶಸ್ಸಿನ ಕುರಿತು ಮಂಗಳವಾರ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, "ಶ್ರೀರಾಮುಲು ಅವರಿಗೆ ಅಧಿಕಾರದ ಮದ ಏರಿದೆ, ಅವರನ್ನು ಜನ ಮನೆಗೆ ಕಳಿಸುತ್ತಾರೆ. ಅಧಿಕಾರ ಇದೆ ಎಂದು ದರ್ಪ ತೋರಿಸಬಾರದು, ಸುದ್ದಿಗೋಷ್ಠಿಯಲ್ಲಿ ಸಚಿವ ಶ್ರೀರಾಮುಲು ಹಾಗೆಲ್ಲ ಮಾತನಾಡಬಾರದಿತ್ತು, ಜನರು ಕಾಯುತ್ತಿದ್ದಾರೆ, ಶ್ರೀರಾಮುಲು ಇನ್ನು ಆರು ತಿಂಗಳಲ್ಲಿ ಮನೆಗೆ ಹೋಗಲಿದ್ದಾರೆ'' ಎಂದು ತಿಳಿಸಿದರು.
ಸಿದ್ದರಾಮಯ್ಯ ಅಂತಹ ನಾಯಕರ ಬಗ್ಗೆ ಹಗುರವಾಗಿ ಮಾತಾಡುವ ಶ್ರೀರಾಮುಲುರನ್ನು ಮಾಜಿ ಸಿಎಂ ಸಿದ್ಧರಾಮಯ್ಯ ಪೆದ್ದ ಎಂದು ಸಂಬೋಧಿಸಿದ್ದನ್ನು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಸಮರ್ಥಿಸಿಕೊಂಡಿದ್ದಾರೆ. ಅವರು ನನಗೆ ಪೆದ್ದನಂತೆಯೇ ಕಾಣುತ್ತಾರೆ ಎಂದು ಹೇಳಿದ ನಾಗೇಂದ್ರ, ಯಾರು ಹುಚ್ಚ, ಯಾರು ಜೋಕರ್ ಎಂದು ಜನರು ಅವರಿಗೆ ತೋರಿಸಲಿದ್ದಾರೆ, ಸಿದ್ದರಾಮಯ್ಯ ಅವರು 5 ವರ್ಷ ಉತ್ತಮ ಆಡಳಿತ ನೀಡಿದ್ದಾರೆ, ಎಲ್ಲರಿಗೂ ಉತ್ತಮ ಯೋಜನೆ ನೀಡಿದ್ದಾರೆ, ಅಂತಹವರಿಗೆ ಜೋಕರ್ ಎನ್ನುವುದಲ್ಲ ಸರಿಯಲ್ಲ ಎಂದರು.
ಜಿಲ್ಲಾ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಎಲ್ಲರ ಎದುರು ಶ್ರೀರಾಮುಲುರವರೇ ಸಿದ್ದರಾಮಯ್ಯ ಅಂತಹ ನಾಯಕರನ್ನು ಮತ್ತೆ ನೋಡಲು ಸಾಧ್ಯ ಇಲ್ಲ ಎಂದಿದ್ದರು, ಈಗ ಹೀಗೆ ಮಾತನಾಡಿದ್ದಾರೆ ಎಂದ ಅವರು, ಬಳ್ಳಾರಿಯಲ್ಲಿ ಬಹಿರಂಗ ಸಮಾವೇಶದ ಯಶಸ್ವಿಯಾಗಿರುವುದನ್ನು ಕಂಡು ಬಿಜೆಪಿ ನಾಯಕರು, ಜನಪ್ರತಿನಿಧಿಗಳು ಹತಾಶರಾಗಿದ್ದಾರೆ ಎಂದರು.

ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂಬಂತಿದೆ ಬಿಜೆಪಿ ನಡೆ
ಸಮಾವೇಶ ಜಾಗವನ್ನು ಬಿಜೆಪಿ ನಾಯಕರು ಸ್ವಚ್ಛ ಮಾಡಿದ ಬಗ್ಗೆ ಉತ್ತರ ನೀಡಿದ ನಾಗೇಂದ್ರ, ಮುನ್ಸಿಪಲ್ ಮೈದಾನ 12 ಎಕರೆ ವಿಸ್ತಾರ ಇದೆ, ಸಮಾವೇಶಕ್ಕಾಗಿ ಮೈದಾನಕ್ಕಾಗಿ 10 ಲಕ್ಷ ರೂ ಖರ್ಚು ಮಾಡಬೇಕೆಂದು ನಮಗೆ ಹೇಳಿದರು, ಆ ಮೈದಾನ ಸಮ ಇರಲಿಲ್ಲ, ಅಲ್ಲಿ ಹಲವು ಕ್ರೀಡೆಗಳನ್ನು ಆಡುತ್ತಾರೆ, ಕ್ರೀಡಾಳುಗಳು ಬಂದು ಮೈದಾನ ಸರಿಪಡಿಸಿ, ನಿಮ್ಮ ಸಮಾವೇಶಕ್ಕೆ ನಾವು ಬೆಂಬಲಿಸುತ್ತೇವೆ ಎಂದರು, ಅದಕ್ಕೆ ಒಪ್ಪಿ ನಾವು 15 ಲಕ್ಷ ಖರ್ಚು ಮಾಡಿ ಒಳ್ಳೆಯ ಮೈದಾನ ಮಾಡಿ ಕೊಟ್ಟಿದ್ದೇವೆ, ಬಿಜೆಪಿಯವರಿಗೆ ಅದು ಕಾಣಲಿಲ್ಲ, ಇದು ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂಬಂತಿದೆ ಅಸಮಾಧಾನ ವ್ಯಕ್ತಪಡಿಸಿದರು.
ಸಮಾವೇಶದ ಜಾಗವನ್ನು ಬಿಜೆಪಿ ನಾಯಕರು ಸ್ವಚ್ಛ ಭಾರತ್ ಮಾಡಿದರು, ಊರ ತುಂಬ ಕಸ ಇದೆ, ಬೇರೆ ಸಮಾವೇಶದ ಜಾಗಗಳಲ್ಲಿ ಮಾಡಬೇಕಿತ್ತು? ಬಿಜೆಪಿಯವರು ಪ್ರಚಾರ ಪ್ರಿಯರು ಹೀಗಾಗಿ ಕಾಂಗ್ರೆಸ್ ಸಮಾವೇಶದ ಜಾಗವನ್ನು ಸ್ವಚ್ಛ ಮಾಡಿದ್ದಾರೆ ಎಂದ ಅವರು, ಸಮಾವೇಶಕ್ಕೆ ಮೈದಾನ ಸಿದ್ಧಪಡಿಸುವಾಗ ಅದರ ಸ್ಥಿತಿ ಹೇಗಿತ್ತು ಗೊತ್ತಾ? ಸಚಿವರಿಗೆ, ಶಾಸಕರಿಗೆ ನಾಚಿಕೆ ಆಗಬೇಕು ಎಂದು ಹೇಳಿದರು.

ಬಿಜೆಪಿ ಪ್ರಚಾರದ ಮ್ಯಾನೇಜ್ಮೆಂಟ್ನಿಂದ ಅಪಪ್ರಚಾರ
ಶ್ರೀರಾಮುಲು ಎಸ್ಟಿ ಸಮುದಾಯಕ್ಕಾಗಿ ಏನು ಮಾಡಿದ್ದಾರೆ? ಎಸ್ಟಿ ಮೀಸಲಾತಿ ಇನ್ನೂ ಬಂದಿಲ್ಲ, ಸಚಿವ ಸಂಪುಟ ತೀರ್ಮಾನ ಆಗಿದೆಯಷ್ಟೇ, ಸುಗ್ರೀವಾಜ್ಞೆ ಹೊರಡಿಸಿ ಎಂದು ನಾವು ಹೇಳಿದೆವು, ಮೀಸಲಾತಿ ಕೊಡುವ ಕೆಲಸ ಆಗಿದ್ದರೆ ವಾಲ್ಮೀಕಿ ಶ್ರೀ ಯಾಕೆ ಧರಣಿ ಮುಂದುವರಿಸಿದ್ದಾರೆ? ಮೀಸಲಾತಿ ಕೆಲಸ ಪೂರ್ಣ ಆಗಬೇಕಾದರೆ ಸಮಯ ಹಿಡಿಯುತ್ತದೆ, ಸುಳ್ಳು ಹೇಳುತ್ತಾರೆ, ಬಿಜೆಪಿಯವರದ್ದು ಪ್ರಚಾರದ ಮ್ಯಾನೇಜ್ಮೆಂಟ್ ಚೆನ್ನಾಗಿದೆ, ಇದನ್ನು ಮಾಡಿಯೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಪಾದಯಾತ್ರೆಯಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶನ
ಕಾಂಗ್ರೆಸ್ ಪಕ್ಷ ಮೂರು ಬಾಗಿಲು, ನೂರು ಬಾಗಿಲು ಎಂದು ಎದುರಾಳಿ ಪಕ್ಷದವರು ಹೇಳುತ್ತಿದ್ದರು, ಆದರೆ ಭಾರತ್ ಜೋಡೊ ಯಾತ್ರೆ ಹಾಗೂ ಬಹಿರಂಗ ಸಮಾವೇಶದ ಯಶಸ್ಸಿನಿಂದಾಗಿ ಇದಕ್ಕೆ ತಕ್ಕ ಉತ್ತರ ಸಿಕ್ಕಂತಾಗಿದೆ, ಕಾಂಗ್ರೆಸ್ಸಿನ ಒಗ್ಗಟ್ಟು ಭಾರತ್ ಜೋಡೊ ಸಮಾವೇಶ ಯಶಸ್ಸಾಗುವ ಮೂಲಕ ಇದು ಸಾಬೀತಾಗಿದೆ ಎಂದರು.

ಎಲ್ಲಾ ಕ್ಷೇತ್ರದ ಕಾರ್ಯಕರ್ತರು ಭಾಗಿ
ಈ ಯಾತ್ರೆ ಹಾಗೂ ಸಮಾವೇಶದ ಯಶಸ್ಸಿಗೆ ಎಲ್ಲರ ಶ್ರಮ ಇದೆ, ಚಿತ್ರದುರ್ಗದ ನಂತರ ಬಳ್ಳಾರಿಯಲ್ಲಿ ಯಾತ್ರೆ ಹಾಗೂ ಸಮಾವೇಶ ಇದ್ದಿದ್ದರಿಂದ ಬಳ್ಳಾರಿ ಕಾಂಗ್ರೆಸ್ ನಾಯಕರು ಹಾಗೂ ಜನಪ್ರತಿನಿಧಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇತ್ತು, ಆ ಜವಾಬ್ದಾರಿಯನ್ನು ನಾವು ಸಮರ್ಥವಾಗಿ ನಿಭಾಯಿಸಿದ್ದೇವೆ. ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು, ಮುಖಂಡರು ಭಾಗಿ ಆಗಿಲ್ಲ ಅಂತೇನಿಲ್ಲ, ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿ ಎಂಬುದೇ ನಮ್ಮ ಉದ್ಧೇಶ ಇತ್ತು ಎಂದ ನಾಗೇಂದ್ರ, ಹೀಗಾಗಿ ಶಾಸಕರು, ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗದಿದ್ದರೂ ಎಲ್ಲ ಕ್ಷೇತ್ರಗಳಿಂದ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರ ನೇತೃತ್ವದ ಬಹಿರಂಗ ಸಮಾವೇಶ ಯಶಸ್ವಿಯಾಗಿದೆ, ಅದರಲ್ಲೂ ಇಡೀ ಈ ಯಾತ್ರೆಯ ಪೈಕಿ ಬಳ್ಳಾರಿಯಲ್ಲಿ ಸಮಾವೇಶ ಇತ್ತು, ರಾಹುಲ್ ಅವರು ತಾವು ತಮ್ಮ ಊರಿನಲ್ಲಿ ಇದ್ದೇನೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದರು, ಅವರ ತಾಯಿ ಸ್ಪರ್ಧೆ ಮಾಡಿ ಗೆದ್ದ ಊರಿನಲ್ಲಿ ತಂಗುವ ಅವಕಾಶ ಸಿಕ್ಕ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ನಾಗೇಂದ್ರ ಹೇಳಿದರು.












Click it and Unblock the Notifications