ಆಲಮಟ್ಟಿ ಡ್ಯಾಂಗೆ ಆಗಸ್ಟ್ 21ರಂದು ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಣೆ
ಬಳ್ಳಾರಿ, ಆಗಸ್ಟ್ 17; "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಸ್ಟ್ 21ರಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ" ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ.
ಮಂಗಳವಾರ ಗೋವಿಂದ ಕಾರಜೋಳ ಹೊಸಪೇಟೆಯಲ್ಲಿರು ತುಂಗಾಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಬಳಿಕ ತುಂಗಾಭದ್ರಾ ಜಲಾಶಯದ ವೈಕುಂಠ ಅತಿಥಿಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.
"ಆಗಸ್ಟ್ ತಿಂಗಳಲ್ಲಿ ರಾಜ್ಯದ ಬಹುತೇಕ ಡ್ಯಾಂಗಳು ತುಂಬಿರುವುದು ಇತಿಹಾಸದಲ್ಲಿಯೇ ಮೊದಲನೇ ಬಾರಿ. ಪ್ರತಿವರ್ಷವೂ ಇದೇ ತರಹ ಮಳೆಯಾಗಲಿ ಎಂದು ಗಂಗಾಮಾತೆಗೆ ಬಾಗಿನ ಅರ್ಪಿಸಿ ಕೋರಿರುವೆ" ಎಂದು ಸಚಿವರು ಹೇಳಿದರು.
"ಆಗಸ್ಟ್ 21ಕ್ಕೆ ಅಲಮಟ್ಟಿ ಜಲಾಶಯಕ್ಕೆ ಸಿಎಂ ಬಾಗಿನ ಅರ್ಪಿಸಲಿದ್ದಾರೆ. ಬಾಗಿನ ಅರ್ಪಿಸಿದ ನಂತರ ನೀರಾವರಿ ಯೋಜನೆಗಳ ಕುರಿತು ಹೆಚ್ಚಿನ ಗಮನಹರಿಸುವ ಕೆಲಸ ಮಾಡಲಾಗುವುದು. ರಾಜ್ಯಕ್ಕೆ ಹಂಚಿಕೆಯಾದ ನೀರಿನ ಪಾಲು ಸಮರ್ಪಕ ಬಳಕೆಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ" ಎಂದು ಸಚಿವರು ವಿವರಣೆ ನೀಡಿದರು.

ನೀರಿನ ಸಮರ್ಪಕ ಬಳಕೆಗೆ ಯೋಜನೆ
"ನ್ಯಾಯಾಧೀಕರಣ-1 ಮತ್ತು ನ್ಯಾಯಾಧೀಕರಣ-2ರಲ್ಲಿ ನಮ್ಮ ರಾಜ್ಯಕ್ಕೆ ಹಂಚಿಕೆಯಾದ ನೀರಿನ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಿಯಾಯೋಜನೆ ರೂಪಿಸುತ್ತಿದೆ. ಹಂಚಿಕೆಯಾದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಾತ್ಮಕ, ಆಡಳಿತಾತ್ಮಕ ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನು ನಮ್ಮ ಸರಕಾರ ಮಾಡುತ್ತಿದೆ. ಕೆಲ ವ್ಯಾಜ್ಯಗಳು ಸುಪ್ರೀಂಕೋರ್ಟ್ನಲ್ಲಿದ್ದು, ಅವುಗಳ ತೀರ್ಪು ಬರುವವರೆಗೆ ನಾವೆಲ್ಲ ಕಾಯಬೇಕಿದೆ" ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಮುಖ್ಯಮಂತ್ರಿಗಳ ಜೊತೆ ಸಭೆ
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಹಾಗೂ ಜಲಸಂಪನ್ಮೂಲ ವಿಷಯಕ್ಕೆ ಸಂಬಂಧಿಸಿದಂತೆ ಅಗಾಧ ಅನುಭವ ಹೊಂದಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಮ್ಮತಿ ಪಡೆದುಕೊಂಡು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಹತ್ತಿರ ಸಮತೋಲನ ಜಲಾಶಯ ನಿರ್ಮಿಸಲು ಯೋಜಿಸಲಾಗಿದ್ದು, ಡಿಪಿಎಆರ್ ತಯಾರಿಕೆ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮೂರು ರಾಜ್ಯಗಳ ಸಭೆ ಕರೆದು ಸಮ್ಮತಿ ಪಡೆದುಕೊಳ್ಳಲಾಗುವುದು" ಎಂದು ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ಸಮತೋಲನ ಜಲಾಶಯ ನಿರ್ಮಾಣ
ಮಾಧ್ಯಮಗಳ ಜೊತೆ ಮಾತನಾಡಿದ ಗೋವಿಂದ ಕಾರಜೋಳ, "ತುಂಗಭದ್ರಾ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 132.47 ಟಿಎಂಸಿ ಅಡಿ ಇದ್ದು, ಹೂಳು ತುಂಬಿರುವುದರಿಂದ ಸಾಮರ್ಥ್ಯ 100.855 ಟಿಎಂಸಿಗೆ ಇಳಿಕೆಯಾಗಿರುತ್ತದೆ. ಇದರಿಂದ 31.615 ಟಿಎಂಸಿ ನೀರಿನ ಕೊರತೆಯಾಗಿದೆ. ಇದನ್ನು ಸರಿದೂಗಿಸಲು ನವಲಿ ಬಳಿ ಸಮತೋಲನ ಜಲಾಶಯ ನಿರ್ಮಿಸುವುದಕ್ಕೆ ಯೋಜಿಸಲಾಗಿದೆ" ಎಂದರು.
"ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 16 ಟಿಎಂಸಿ ನೀರಿನ ಹಂಚಿಕೆಯಾಗಿದೆ. ಸದರಿ ಯೋಜನೆ ಅಡಿ ಬಲಭಾಗದಲ್ಲಿ ಒಟ್ಟು 35,791 ಎಕರೆ (14485 ಹೆಕ್ಟರ್) ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಈ ಯೋಜನೆಯ ಎಡಭಾಗದಲ್ಲಿ ಒಟ್ಟು 216467 ಎಕರೆ (87597 ಹೆಕ್ಟರ್ ) ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸಲಾಗಿದೆ" ಎಂದು ಸಚಿವರ ವಿವರಣೆ ನೀಡಿದರು.

ವಿಜಯನಗರ ಕಾಲುವೆಗಳ ಆಧುನೀಕರಣ
"ವಿಜಯನಗರ ಅರಸರ ಕಾಲದಲ್ಲಿ ನೀರಾವರಿಗಾಗಿ ನಿರ್ಮಿಸಿರುವ ಸುಮಾರು 500 ವರ್ಷಗಳ ಹಿಂದಿನ ಅನ್ಲೈನ್ಡ್ 16 ಕಾಲುವೆಗಳು ಮತ್ತು 11 ಅಣೆಕಟ್ಟುಗಳಿದ್ದು,ಅವುಗಳಲ್ಲಿ ಸದ್ಯಕ್ಕೆ ಪ್ಯಾಕೇಜ್-1ಅಡಿ ಕಾಲುವೆ ಮತ್ತು ಅಣೆಕಟ್ಟು ಆಧುನೀಕರಣಗೊಳಿಸಲು 371 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇನ್ನುಳಿದ 8 ಅಣೆಕಟ್ಟು 1 ಕಾಲುವೆ ಆಧನೀಕರಣವನ್ನು ಸಹ ಕೈಗೆತ್ತಿಕೊಳ್ಳಲು ರೂ.139 ಕೋಟಿಗಳಿಗೆ ಸದ್ಯದಲ್ಲೇ ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುವುದು" ಎಂದು ಸಚಿವರು ಹೇಳಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಅಣ್ಣಾಮಲೈ ವಿರೋಧ ವ್ಯಕ್ತಪಡಿಸಿರುವುದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು, "ಮೇಕೆದಾಟು ಯೋಜನೆ ಜಾರಿಗೆ ಯಾರ ಅನುಮತಿಯೂ ಅಗತ್ಯವಿಲ್ಲ. ಈ ವಿಚಾರ ಸದ್ಯಕ್ಕೆ ಸುಪ್ರೀಂಕೋರ್ಟ್ನಲ್ಲಿರುವುದರಿಂದ ಹೆಚ್ಚಿಗೆ ಮಾತನಾಡಲಾರೆ" ಎಂದರು.












Click it and Unblock the Notifications