ವಿವಾಹ -ವಂಚನೆ, ಕಿರುಕುಳ: ಚರ್ಚ್ ಪಾಸ್ಟರ್ ರವಿಕುಮಾರ್ ಬಂಧನ
ಬಳ್ಳಾರಿ, ಜನವರಿ 03: ಇಪ್ಪತ್ತು ನಾಲ್ಕು ವರ್ಷ ವಯಸ್ಸಿನ ಇಂಜಿನಿಯರಿಂಗ್ ಪದವೀಧರೆಯೊಂದಿಗೆ ಪರಾರಿಯಾಗಿ ವಿವಾಹವಾಗಿದ್ದ ಲಿವ್ವಿಂಗ್ ವಾಟರ್ ಚರ್ಚ್ನ ಪಾಸ್ಟರ್ ರವಿಕುಮಾರ್(54) ಬಂಧಿಸಲಾಗಿದೆ. ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಪಾಸ್ಟರ್ ರವಿಕುಮಾರ್ ಪರಾರಿ ಪ್ರಕರಣ ಪಟ್ಟಣದಲ್ಲಿ ದೊಡ್ಡ ಸುದ್ದಿ' ಆಗಿತ್ತು. ಪಾಸ್ಟರ್ ವಿರುದ್ಧ ಬಳ್ಳಾರಿ ಎಸ್ಪಿ ಸೈದುಲ್ಲಾ ಅದಾವತ್ ಅವರಿಗೆ ಪಾಸ್ಟರ್ ವಿಚ್ಛೇದಿತ ಪತ್ನಿ ಹಾಗೂ ಪರಾರಿಯಾಗಿದ್ದ ಮಹಿಳೆ ಕುಟುಂಬಸ್ಥರು ದೂರು ನೀಡಿದ್ದರು.
ಗುಗ್ಗರಹಟ್ಟಿಯ ಶ್ವೇತಾ ಇಂಜಿನಿಯರಿಂಗ್ ಪದವಿ ಪಡೆದ ನಂತರ ದ್ವಿಚಕ್ರ ವಾಹನ ಮಾರಾಟದ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲದೇ, ತಂದೆಯ ಅನಾರೋಗ್ಯಕ್ಕಾಗಿ ವಿದ್ಯಾನಗರದ ಲಿವ್ವಿಂಗ್ ವಾಟರ್ ಚರ್ಚ್ನಲ್ಲಿ ಪ್ರಾರ್ಥನೆ ಮಾಡಲು ಪದೇ ಪದೇ ಹೋಗುತ್ತಿದ್ದಳು.

ಈ ಮಧ್ಯೆ ಫಾಸ್ಟರ್ ರವಿಕುಮಾರ್(54 ವರ್ಷ) ಮತ್ತು ಶ್ವೇತ(24 ವರ್ಷ) ಮಧ್ಯೆ ಪ್ರೇಮಾಂಕುರವಾಗಿ ದೈಹಿಕ ಸಂಬಂಧವೂ ಬೆಳೆದಿದೆ. ಈ ವಿಷಯ ಶ್ವೇತಳ ಪೋಷಕರಿಗೆ ತಿಳಿದು, ಅವರು ಶ್ವೇತ ಚರ್ಚ್ಗೆ ಹೋಗುವುದನ್ನು ನಿರ್ಬಂಧಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಆಕೆ ಕದ್ದುಮುಚ್ಚಿ ಪಾಸ್ಟರ್ ರವಿಕುಮಾರ್ ಅವರನ್ನು ಭೇಟಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಆದರೆ, ಶ್ವೇತ ಮತ್ತು ರವಿಕುಮಾರ್ ಡಿಸೆಂಬರ್ 16ರಂದು ಕಾಣೆ ಆಗಿದ್ದರು. ಈ ಕುರಿತು ಶ್ವೇತಾಳ ಪೋಷಕರಾದ ಬಸವರಾಜ್ ಮತ್ತು ವಿಜಯಲಕ್ಷ್ಮಿ ಅವರು ಡಿಸೆಂಬರ್ 20 ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ' ಆದ ಕೂಡಲೇ ಹಿಂದೂಪರ ಸಂಘಟನೆಗಳು ಜಿಲ್ಲೆಯಲ್ಲಿ ಮತಾಂತರ'ದ ವಿಚಾರವನ್ನು ಪ್ರಸ್ತಾಪಿಸಿದರು. ಅಲ್ಲದೇ, ಪ್ರಕರಣದ ನೈಜತೆಯನ್ನು ಬಯಲು ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಒತ್ತಡ ಹೇರಿದ್ದರು.
ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿದ ಫಾಸ್ಟರ್ ರವಿಕುಮಾರ್, ಶ್ವೇತಾಳಿಂದ 12 ನಿಮಿಷಗಳ ಹೇಳಿಕೆಯ ವಿಡಿಯೋವನ್ನು ರಹಸ್ಯವಾದ ಸ್ಥಳದಿಂದ ಸಿದ್ಧಪಡಿಸಿ, ಬಳ್ಳಾರಿಯ ತನ್ನ ಆಪ್ತರಿಗೆ ಕಳುಹಿಸಿ, ''ಪಾಸ್ಟರ್ ಅವರನ್ನೇ ನಾನೇ ಕರೆದುಕೊಂಡು ಬಂದಿದ್ದು, ನಾವಿಬ್ಬರೂ ವಿವಾಹವಾಗಿದ್ದೇವೆ. ಶೀಘ್ರದಲ್ಲಿಯೇ ನಾವುಗಳು ಬಳ್ಳಾರಿಗೆ ಬರಲಿದ್ದೇವೆ'' ಎಂದು ಹೇಳಿದ್ದರು. ಈ ವೀಡಿಯೋ ವೈರಲ್ ಆಗಿತ್ತು.
ಲೈಂಗಿಕ ದೌರ್ಜನ್ಯ ದೂರು ದಾಖಲು:
ಈ ಮಧ್ಯೆ ಪಾಸ್ಟರ್ ರವಿಕುಮಾರ್ ಅವರ ವಿಚ್ಛೇದಿತ ಹೆಂಡತಿ ಸುನಂದ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅದಾವತ್ ಅವರನ್ನು ಭೇಟಿ ಮಾಡಿ, ಪಾಸ್ಟರ್ ರವಿಕುಮಾರ್ ಅವರ ಲೈಂಗಿಕ ದೌರ್ಜನ್ಯ ಮತ್ತು ಯುವತಿಯರ ದುರ್ಬಳಕೆ ಕುರಿತು ಲಿಖಿತ ದೂರನ್ನು ಸಲ್ಲಿಸಿದ್ದರು. ಅಲ್ಲದೇ, ಆಂಧ್ರದ ಕರ್ನೂಲ್ ಜಿಲ್ಲೆಯ ಯುವತಿ ಹಣ ಕಿತ್ತುಕೊಂಡಿರುವುದು ಮತ್ತು ಲೈಂಗಿಕ ದುರ್ಬಳಕೆ ಮಾಡಿಕೊಂಡಿರುವ ಕುರಿತು ದೂರು ನೀಡಿದ್ದರು.
ಈ ಕುರಿತು ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿ ಪಾಸ್ಟರ್ ರವಿಕುಮಾರ್ ಅವರ ಲೊಕೇಶನ್ ಅನ್ನು ಪತ್ತೆ ಮಾಡಿ, ಬೆಂಗಳೂರಿನಲ್ಲಿ ವಶಕ್ಕೆ ತೆಗೆದುಕೊಂಡು, ಬಳ್ಳಾರಿಯಲ್ಲಿ ಬಂಧಿಸಿದ್ದಾರೆ.
ಈ ಹಿನ್ನಲೆಯಲ್ಲಿ ಪಾಸ್ಟರ್ ರವಿಕುಮಾರ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶ್ವೇತ ಪ್ರಸ್ತುತ ಲಿವ್ವಿಂಗ್ ವಾಟರ್ ಚರ್ಚ್ನಲ್ಲಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಅವರು, ಪಾಸ್ಟರ್ ರವಿಕುಮಾರ್ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications