ಬಳ್ಳಾರಿ ಬಂದ್; ಕನ್ನಡ ಪರ ಸಂಘಟನೆ ಮುಖಂಡರ ವಿರುದ್ಧ ಕೇಸ್
ಬಳ್ಳಾರಿ, ಡಿಸೆಂಬರ್ 06: ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆ ಖಂಡಿಸಿ ನವೆಂಬರ್ 26ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಳ್ಳಾರಿ ಬಂದ್ ವೇಳೆ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಆನಂದ ಸಿಂಗ್ ಅವರ ಭಾವಚಿತ್ರ ದಹನ ಮಾಡಿರುವ ಸಂಬಂಧ ಇಬ್ಬರು ಕನ್ನಡಪರ ಸಂಘಟನೆ ಮುಖಂಡರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದೆ.
ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದ ಬಳಿ ಪ್ರತಿಭಟನಾನಿರತ ಕನ್ನಡಪರ ಸಂಘಟನೆಗಳ ಮುಖಂಡರು ಆ ದಿನ ಬೆಳ್ಳಂಬೆಳಿಗ್ಗೆ ಟೈರ್ ಗೆ ಬೆಂಕಿ ಹಚ್ಚಿದ್ದರಲ್ಲದೇ ಅದರೊಳಗೆ ಸಿಎಂ ಬಿಎಸ್ ವೈ, ಸಚಿವ ಆನಂದ ಸಿಂಗ್ ಅವರ ಭಾವಚಿತ್ರಗಳನ್ನು ಹಾಕಿ ದಹನಗೊಳಿಸಿರುವ ಆರೋಪದ ಅಡಿಯಲ್ಲಿ ಕರ್ನಾಟಕ ಜನಸೈನ್ಯ ಸಂಘಟನೆ ರಾಜ್ಯಾಧ್ಯಕ್ಷ ಕೆ.ಎರಿಸ್ವಾಮಿ ಹಾಗೂ ಜೆಡಿಎಸ್ ಯುವ ಮುಖಂಡ ಡಿ.ವಿಜಯ ಕುಮಾರ ಅವರ ವಿರುದ್ಧ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಜಯನಗರ ಜಿಲ್ಲೆ ರಚನೆ: ಬಳ್ಳಾರಿ ಬಂದ್ ವಿಫಲ
ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎರಿಸ್ವಾಮಿ, ಪ್ರತಿಭಟನೆ ಹತ್ತಿಕ್ಕುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ನನ್ನ ಹಾಗೂ ಸಹೋದ್ಯೋಗಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಖಂಡ ಜಿಲ್ಲೆಯ ವಿಭಜನೆಗೆ ಕೈ ಹಾಕಿರುವುದಲ್ಲದೇ ನಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಆ ನೋವಿಗೆ ಭಾವಚಿತ್ರಗಳನ್ನು ದಹನ ಮಾಡಲಾಗಿದೆ. ಈ ಹಿಂದೆ ಕೂಡ ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ದಹನ ಮಾಡಲಾಗಿತ್ತು. ಆಗ ಕೇಸ್ ದಾಖಲಿಸಿರಲಿಲ್ಲ. ಈಗ್ಯಾಕೆ ಕೇಸ್ ದಾಖಲಿಸಿದ್ದೀರಿ ಅಂತ ಜಿಲ್ಲಾ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿರುವೆ ಎಂದರು.
ಎಸ್ ಒಪಿ ಪಾಲನೆಯಾಗಿಲ್ಲ ಎಂದು ಪೊಲೀಸರು ಕಾರಣ ನೀಡಿದ್ದಾರೆ. ಈ ಜಿಲ್ಲೆಯಲ್ಲಿ ಯಾವುದಾದರೂ ಕಾರ್ಯಕ್ರಮ, ಸಭೆ- ಸಮಾರಂಭ ನಡೆದರೆ ಮೊದಲು ನಾನೇ ಹೋಗಿ ಮಾಸ್ಕ್ ಹಂಚಿಕೆ ಮಾಡುತ್ತಿದ್ದೆ. ಅದ್ಹೇಗೆ ನಿಯಮ ಉಲ್ಲಂಘನೆ ಮಾಡುತ್ತೇವೆ ನಾವು ಎಂದು ಪ್ರಶ್ನಿಸಿದ್ದಾರೆ.