ಜನಾರ್ದನ ರೆಡ್ಡಿ ಅರ್ಥಾತ್ ಬಾಂಬ್ ರೆಡ್ಡಿ: ಬಳ್ಳಾರಿ ಬಿಜೆಪಿ ಮುಖಂಡರ ಕಿಡಿ
ಬಳ್ಳಾರಿ, ನವೆಂಬರ್11: ಕಾಂಗ್ರೆಸ್ ಪಕ್ಷಕ್ಕಿಂತ ನಮ್ಮ ಪಕ್ಷದಿಂದಲೇ ನನಗೆ ಕಿರುಕುಳ ಹೆಚ್ಚಾಗಿದೆ ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಬಳ್ಳಾರಿ ಬಿಜೆಪಿ ಮುಖಂಡ ರಾಮಲಿಂಗಪ್ಪ ಕಿಡಿಕಾರಿದ್ದಾರೆ. ಜನಾರ್ದನ ರೆಡ್ಡಿ ಹೇಳಿಕೆ ಕೇಳಿ ನನಗೆ ಬಹಳ ನೋವಾಯಿತು. ಅವರಿಂದ ನಮಗೆ ತೊಂದರೆ ಆಗಿದೆ. ಅವರು ಜನಾರ್ದನ ರೆಡ್ಡಿ ಅರ್ಥಾತ್ ಬಾಂಬ್ ರೆಡ್ಡಿ ಎಂದು ಆಕ್ರೋಶ ಹೊರಹಾಕಿದರು.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ಗಿಂತ ಬಿಜೆಪಿಯಿಂದ ತೊಂದರೆ ಆಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದವರು ಶ್ರೀರಾಮುಲು ಅವರನ್ನು ಕೇಳಿದಾಗ ಅವರು ನನಗೆ ಗೊತ್ತಿಲ್ಲ ಎಂದರು. ಅಲ್ಲಿ ಒಂದು ಗುಂಡು ಬಿದ್ದರೆ ಇಲ್ಲಿ ಗೊತ್ತಾಗುತ್ತದೆ. ಹೀಗಿರುವಾಗ ಈ ವಿಷಯ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ನಂಬುವುದು ಹೇಗೆ..? ಇವರಿಂದ ನಿಜವಾಗಿಯೂ ಅನ್ಯಾಯ ಆಗಿರುವುದು ನನಗೆ ಎಂದು ರಾಮಲಿಂಗಪ್ಪ ಹೇಳಿದ್ದಾರೆ.
ಯಡಿಯೂರಪ್ಪ ಹುಟ್ಟು ಹೋರಾಟಗಾರರು. ವಿಧಾನಸೌಧದಲ್ಲಿ ಅವರೇ ಮೊದಲಿಗರು. ಅವರ ನಂತರ ಈಶ್ವರಪ್ಪ ಮೊದಲಾದ ನಾಯಕರು ಬಂದರು. ಅವರು ಹೋರಾಡಿ ಕಟ್ಟಿದ್ದು ಬಿಜೆಪಿ. ಅಷ್ಟು ಮಾಡಿದರೂ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದರು. ಅವರು ಇವರು ಮಾಡಿದ ಅವಮಾನಕ್ಕೆ ಯಡಿಯೂರಪ್ಪ ಕಣ್ಣೀರು ಹಾಕಿದರು. ಆಗ ಕಣ್ಣೀರು ಹಾಕಿದ್ದು ಒಬ್ಬ ಯಡಿಯೂರಪ್ಪ ಅಲ್ಲ, ಸಂಪೂರ್ಣ ಬಿಜೆಪಿ ಕಾರ್ಯಕರ್ತರು. ಅಂದು ಯಡಿಯೂರಪ್ಪ ಅವರಿಗಷ್ಟೇ ಅವಮಾನ ಆಗಲಿಲ್ಲ ಇಡೀ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದರು.

ಗಣಿಗಾರಿಕೆಯ ಹಣದಲ್ಲಿ ಬಳ್ಳಾರಿಯಲ್ಲಿ ತಾಮ್ರದ ರಸ್ತೆಗಳು ಆಗಬೇಕಿತ್ತು
ಸುಷ್ಮಾ ಸ್ವರಾಜ್ ಅವರು ಲೋಕಸಭೆಗೆ ಸ್ಪರ್ಧೆ ಮಾಡಿ ಹೋದ ನಂತರ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಿತು. ಪ್ರತಿ ವರ್ಷ ವರಮಹಾಲಕ್ಷ್ಮೀ ಪೂಜೆಗೆ ಬರುತ್ತಿದ್ದರು. ಆದರೆ ರೆಡ್ಡಿ ಸಹೋದರರ ಹಾರಾಟ ಚೀರಾಟದಿಂದ ಹಾಗೂ ಇವರ ಗಣಿ ಅಕ್ರಮ ನನಗೆ ಹತ್ತಿಕೊಳ್ಳುತ್ತದೆ. ಕೇಂದ್ರದಲ್ಲಿ ತೊಂದರೆ ಆಗುತ್ತದೆ ಎಂದು ಸುಷ್ಮಾ ಸ್ವರಾಜ್ ದೂರವಾದರು. ಸುಷ್ಮಾ ಸ್ವರಾಜ್ ಅವರಿಗೆ, ಯಡಿಯೂರಪ್ಪ ಅವರಿಗೆ, ಕಾರ್ಯಕರ್ತರಿಗೆ, ನನ್ನಂತಹವರಿಗೆ ಅನ್ಯಾಯ ಮಾಡಿದ್ದೀರಿ ಎಂದು ರೆಡ್ಡಿ ಸಹೋದರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜನಾರ್ದನ್ ರೆಡ್ಡಿ ಅವರು ಕುಮಾರಸ್ವಾಮಿ ಅವರ ಮೇಲೆ 150 ಕೋಟಿ ರೂಪಾಯಿ ಅಕ್ರಮ ಗಣಿಗಾರಿಕೆಯ ಆರೋಪ ಮಾಡಿದ್ದರು. ಆದರೆ ಮುಂದೆ ಏನಾಯಿತು..? ಗಣಿಗಾರಿಕೆಯಿಂದ ಬಂದ ಹಣದಲ್ಲಿ ಬಳ್ಳಾರಿಯಲ್ಲಿ ತಾಮ್ರದ ರಸ್ತೆಗಳು ಆಗಬೇಕಿತ್ತು. ಆದರೆ ಈಗ ಏನಾಗಿದೆ..? ಅಕ್ರಮ ಗಣಿಗಾರಿಕೆಯಿಂದಾಗಿ ಬಳ್ಳಾರಿಯ ಜನರಿಗೆ ಮರ್ಯಾದೆ ಇಲ್ಲದಂತಾಗಿದೆ. ಎಂದ ಅವರು, ಯಾರ ಒತ್ತಡಕ್ಕೂ ನಾನು ಮಣಿಯುವುದಿಲ್ಲ ಪಕ್ಷಕ್ಕಾಗಿ ನಾನು ಯಾವು ತ್ಯಾಗಕ್ಕೂ ಸಿದ್ಧ ಎಂದರು.

ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ ಎಂದ ರಾಮಲಿಂಗಪ್ಪ
ಮುಂದಿನ ಚುನಾವಣೆಯಲ್ಲಿ ಸೋಮಶೇಖರ್ ರೆಡ್ಡಿ ಅವರಿಗೆ ಟಿಕೆಟ್ ನೀಡಿದರೆ ಪಕ್ಷ ಗೆಲ್ಲುವುದಿಲ್ಲ. ಬೇರೆ ಸಮುದಾಯದವರಿಗೆ ಟಿಕೆಟ್ ನೀಡಬೇಕು. ಒಂದು ಕುಟುಂಬಕ್ಕೆ ಅಧಿಕಾರವನ್ನು ಇಷ್ಟು ಪ್ರಮಾಣದಲ್ಲಿ ನೀಡಬಾರದು. ನಾನು ಈಗಾಗಲೇ ನಗರದ 3 ಸಾವಿರ ಮನೆಗಳಿಗೆ ಭೇಟಿ ನೀಡಿ, ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿರುವೆ ಎಂದರು.
ಇನ್ನು ನಾನು ಹೋರಾಟ ಮಾಡುತ್ತಿರುವುದು ಸ್ವಾರ್ಥಕ್ಕಲ್ಲ. ಕಾರ್ಯಕರ್ತರನ್ನು ರಕ್ಷಿಸಿ, ಪಕ್ಷವನ್ನು ಗೆಲ್ಲಿಸಿ, ಕುಟುಂಬ ರಾಜಕಾರಣ ನಿಲ್ಲಿಸಲು. ಜಿಲ್ಲೆಯಲ್ಲಿ ಳ್ಳೆಯ ಕೆಲಸ ಮಾಡುವವರು ಒಳ್ಳೆಯ ಕೆಲಸ ಮಾಡಲು ಅವಕಾಶ ನೀಡಬೇಕು. ನಾನು ನನಗೆ ಟಿಕೆಟ್ ಕೊಡಿ ಎಂದು ಕೇಳುವುದಿಲ್ಲ. ಬೇರೆ ಯಾರಿಗಾದರೂ ಟಿಕೆಟ್ ನೀಡಿದರೂ ನಾನು ಕೆಲಸ ಮಾಡುವೆ. ಸೋಮಶೇಖರ ರೆಡ್ಡಿ ಅವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಕಷ್ಟ ಇದೆ. ಪಕ್ಷ ಯಾರಿಗೂ ಟಿಕೆಟ್ ಕೊಟ್ಟರೂ ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿರುವೆ ಎಂದು ಪುನರುಚ್ಚರಿಸಿದರು.

ಕಾರ್ಯಕರ್ತರನ್ನು ರಕ್ಷಿಸಿ, ಬಿಜೆಪಿ ಗೆಲ್ಲಿಸಬೇಕು
ಒಂದೇ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ಕೊಡುವುದು ಬೇಡ. ಸೋಮಶೇಖರ ರೆಡ್ಡಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಕಷ್ಟ ಆಗುತ್ತದೆ. ನಗರದಲ್ಲಿ ಲಿಂಗಾಯತ, ಬಲಿಜ, ಕುರುಬ ಸೇರಿದಂತೆ ಸಾಕಷ್ಟು ಸಮಾಜಗಳು ಇವೆ. ಇಂತಹ ಸಮಾಜದವರಿಗೆ ಟಿಕೆಟ್ ನೀಡಬೇಕು. ಕುಟುಂಬ ರಾಜಕಾರಣ ನಿಲ್ಲಿಸಬೇಕು. ಕಾರ್ಯಕರ್ತರನ್ನು ರಕ್ಷಿಸಿ, ಬಿಜೆಪಿ ಗೆಲ್ಲಿಸಬೇಕು. ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಪಕ್ಷ ಸಂಘಟನೆಗೆ ನಾನು ಶ್ರಮಿಸಿದ್ದೇನೆ. ಪಕ್ಷ ನನಗೆ ಜಿಲ್ಲಾ ಪಂಚಾಯತ್ ಟಿಕೆಟ್ ನೀಡಿದೆ. ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದೆ. ಪಕ್ಷಕ್ಕೆ ನನ್ನ ಸೇವೆ ಇದೆ ಎಂದು ಹೇಳಿದರು.
ರೆಡ್ಡಿ ಸೋದರರ ವರ್ತನೆ ಮತ್ತು ಮಾತುಗಳಿಂದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಯಭೀತರಾಗಿದ್ದಾರೆ. ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್ಗಿಂತ ಬಿಜೆಪಿಯಿಂದ ಕಿರುಕುಳ ಇದೆ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. 2008ರಲ್ಲಿ ರೆಡ್ಡಿ ಸೋದರರಿಂದ ಬಿಜೆಪಿ ಅಧಿಕಾರಕ್ಕೆ ಬಂದಿರಬಹುದು. ಆದರೆ ಬಿಜೆಪಿ ಋಣ ತೀರಿಸಲು ರೆಡ್ಡಿ ಸಹೋದರರು ಎಷ್ಟು ಕೆಲಸ ಮಾಡಿದರೂ ಸಾಲದು. ಬಿಜೆಪಿಗೆ ಎಷ್ಟು ಲಾಭವಾಗಿದೆಯೋ ಅದರ ಎರಡರಷ್ಟು ಲಾಭ ಪಕ್ಷದಿಂದ ಇವರ ಕುಟುಂಬಕ್ಕೆ ಆಗಿದೆ ಎಂದು ಹೇಳಿದರು.

ನನ್ನ ತಾಯಿ ಶಾಪ ಹೇಗೆ ತಟ್ಟುತ್ತದೋ..?
ಬುಡಾ ಅಧ್ಯಕ್ಷ ಸ್ಥಾನಕ್ಕೆ ಪಕ್ಷ ನನಗೆ ಅವಕಾಶ ನೀಡಿತ್ತು. ನಾನು ಒಂದೇ ದಿನ ಅಧ್ಯಕ್ಷನಾಗಿದ್ದೇನೆ. ಸಚಿವ ಆನಂದ್ ಸಿಂಗ್ ನನಗೆ ಫೋನ್ ಮಾಡಿ ಹೇಳಿದರು. ಬುಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ತಿಳಿಸಿದರು. ನಾನು ಬುಡಾ ಕಚೇರಿಗೆ ಹೋದೆ. ಶಾಸಕ ರೆಡ್ಡಿ ಅವರಿಗೆ ಮೊದಲು ಕರೆ ಮಾಡಿ ವಿಷಯ ತಿಳಿಸಿದೆ. ಆದರೆ ಸೋಮಶೇಖರ ರೆಡ್ಡಿ ಅವರು ಯಡಿಯೂರಪ್ಪ ಅವರಿಗೆ ಹೇಳಿ ನನಗೆ ನೀಡಲಾಗಿದ್ದ ಹುದ್ದೆಯನ್ನು ಕಸಿಯಲಾಯಿತು. ಸಚಿವ ಆನಂದ್ ಸಿಂಗ್ ಬೇಡ, ದುಡುಕಬೇಡಿ ಎಂದು ಹೇಳಿದರೂ ಕೇಳಲಿಲ್ಲ. ನನಗೆ ಸಿಕ್ಕಿದ ಅವಕಾಶ ಕಸಿಯಲಾಯಿತು. ನನ್ನ ತಾಯಿ ಕಣ್ಣೀರು ಹಾಕಿದರು. ಆಗ ನಾನು ಶಾಸಕ ಆಗುತ್ತೇನೆ ಚಿಂತೆ ಬೇಡ ಎಂದು ಹೇಳಿದೆ. ನನ್ನ ತಾಯಿ ಇವತ್ತು ಇಲ್ಲ, ಅವರ ಶಾಪ ಹೇಗೆ ತಟ್ಟುತ್ತದೋ..? ಗೊತ್ತಿಲ್ಲ ಎಂದರು.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
Vijay Thalapathi: ಟಿವಿಕೆ ಸಂಸ್ಥಾಪಕ, ನಟ ವಿಜಯ್ ದಳಪತಿ ವಿರುದ್ಧ ಪ್ರಕರಣ ದಾಖಲು -
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ -
ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ











Click it and Unblock the Notifications