ಬತ್ತದ ಡಿಸಿಎಂ ಕನಸು: ಸಚಿವ ಶ್ರೀರಾಮುಲು ಮಾರ್ಮಿಕ ಉತ್ತರ
ಬಳ್ಳಾರಿ, ಅ 16: ಹೊಸದಾಗಿ ಹಂಚಿಕೆಯಾಗಿರುವ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಭಾರವನ್ನು ಇನ್ನಷ್ಟೇ ವಹಿಸಿಕೊಳ್ಲಬೇಕಾಗಿರುವ ಸಚಿವ ಬಿ.ಶ್ರೀರಾಮುಲು, ಉಪಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಸಚಿವರು,"ಉಪಚುನಾವಣೆ ಎದುರಾಗಿದೆ, ಅದನ್ನು ಗೆಲ್ಲುವ ಸವಾಲು ನಮ್ಮ ಮುಂದಿದೆ. ಎರಡು ಕ್ಷೇತ್ರ ಗೆದ್ದ ನಂತರ, ನಮಗೆ ಇನ್ನಷ್ಟು ಶಕ್ತಿ ಬರಲಿದೆ"ಎಂದು ಹೇಳಿದರು.
"ಕಷ್ಟಪಟ್ಟು ದುಡಿಯುವವರನ್ನು ಗುರುತಿಸುವ ಪಕ್ಷವೆಂದರೆ ಅದು ಬಿಜೆಪಿ. ನಾನೂ ಮುಂದಿನ ದಿನಗಳಲ್ಲಿ ಡಿಸಿಎಂ ಆದರೂ ಆಗಬಹುದು. ಭಗವಂತ ಹೇಗೆ ಬರೆದಿರುತ್ತಾನೋ ಹಾಗೇ ಆಗುತ್ತದೆ"ಎಂದು ಸಚಿವ ಶ್ರೀರಾಮುಲು ಅಭಿಪ್ರಾಯ ಪಟ್ಟರು.

"ಆರೋಗ್ಯ ಖಾತೆ ಬದಲಾಯಿಸಿದ್ದಕ್ಕೆ ನಾನೇನೂ ಬೇಸರಗೊಂಡಿಲ್ಲ. ಈಗ ವಹಿಸಲಾಗಿರುವ ಖಾತೆಯೂ ಬಹುದೊಡ್ಡ ಸಚಿವಾಲಯವಾಗಿದೆ. ನಮ್ಮಲ್ಲಿ ಏನೂ ಗೊಂದಲವಿಲ್ಲ"ಎಂದು ಹೇಳಲು ಶ್ರೀರಾಮುಲು ಮರೆಯಲಿಲ್ಲ.
ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಹಿಂದಿನಿಂದಲೂ ಕಣ್ಣಿಟ್ಟಿದ್ದ ಶ್ರೀರಾಮುಲು, ತಮ್ಮ ಆಕಾಂಕ್ಷೆಯನ್ನು ಸಮುದಾಯದ ಪೀಠಾಧಿಪತಿಗಳು, ಗಣ್ಯರ ಮೂಲಕ ವ್ಯಕ್ತ ಪಡಿಸುತ್ತಲೇ ಇದ್ದರು. ಆದರೆ, ಇದ್ಯಾವುದೂ ಇದುವರೆಗೆ ವರ್ಕೌಟ್ ಆಗಿಲ್ಲ.
ಆರೋಗ್ಯ ಇಲಾಖೆಯನ್ನು ತನ್ನಿಂದ ಕಿತ್ತುಕೊಂಡು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಸಿಟ್ಟಾಗಿದ್ದ, ಶ್ರೀರಾಮುಲು ಸದ್ಯದ ಮಟ್ಟಿಗೆ ತಣ್ಣಗಾಗಿದ್ದಾರೆ.
ಸಿಎಂ ಕ್ರಮದ ವಿರುದ್ದ, ಒಂದು ಹಂತದಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದ ಶ್ರೀರಾಮುಲು ಶಾಂತವಾಗಿರಲು, ವರಿಷ್ಠರಿಂದ ಬಂದ ಸಂದೇಶವೇ ಕಾರಣ ಎನ್ನುವ ಮಾತು ಬಿಜೆಪಿ ಪಡಶಾಲೆಯಲ್ಲಿ ಓಡಾಡುತ್ತಿದೆ. ಇದರ ಬೆನ್ನಲ್ಲೇ, ಬಳ್ಳಾರಿಯಲ್ಲಿ ಶ್ರೀರಾಮುಲು ನೀಡಿದ ಈ ಹೇಳಿಕೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.











Click it and Unblock the Notifications