ಬಿಜೆಪಿ ಘೋಷಣೆಗಳು ಕಾಗದದಲ್ಲಿ ಮಾತ್ರ ಇವೆ; ಸಂತೋಷ್ ಲಾಡ್
ಬಳ್ಳಾರಿ, ಆಗಸ್ಟ್ 12; " ಯಡಿಯೂರಪ್ಪನವರ ಸರ್ಕಾರ ಜನರಿಗೆ ಕೋವಿಡ್ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ" ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಸಂತೋಷ್ ಲಾಡ್ ಆರೋಪಿಸಿದರು.
ಗುರುವಾರ ಬಳ್ಳಾರಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೋವಿಡ್ ಸಹಾಯ ಹಸ್ತ ಅನುಷ್ಠಾನ ಸಭೆಯಲ್ಲಿ ಮಾತನಾಡಿದ ಅವರು, "ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಶಾಸಕರುಗಳು ಮತ್ತು ಮಂತ್ರಿಗಳು ಅಧಿಕಾರಕ್ಕಾಗಿ ಕಿತ್ತಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ, ಅವರಿಗೆ ಬೇಕಿರುವುದು ಕೇವಲ ಅಧಿಕಾರ ಮಾತ್ರ" ಎಂದು ದೂರಿದರು.
"ಜನರ ಕಷ್ಟ, ನೋವುಗಳು ಅವರಿಗೆ ಗೊತ್ತಾಗುತ್ತಿಲ್ಲ, ಜನರು ಕೋವಿಡ್ನಿಂದ ತಮ್ಮ ಕುಟುಂಬದವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಉದ್ಯೋಗವಿಲ್ಲ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರು ಹೇಗೆ ಜೀವನ ಸಾಗಿಸಬೇಕು?" ಎಂದು ಸಂತೋಷ್ ಲಾಡ್ ಪ್ರಶ್ನಿಸಿದರು.

"ಇವತ್ತಿನ ದಿನಗಳಲ್ಲಿ ನಿತ್ಯದ ಬದುಕಿಗೂ ಜನರು ಪರದಾಡುತ್ತಿದ್ದಾರೆ. ಇಡೀ ರಾಜ್ಯದ ಜನತೆಗೆ ಬಿಜೆಪಿ ಸರ್ಕಾರವನ್ನು ನೋಡಿ ಸಾಕಾಗಿದೆ. ಇನ್ನಾದ್ರು ಜನರಿಗೆ ಒಳ್ಳೆಯ ಯೋಜನೆಗಳನ್ನು ಕೊಡಿ" ಎಂದು ಸರ್ಕಾರವನ್ನು ಆಗ್ರಹಿಸಿದರು.
ಆನಂದ್ ಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, "ಆನಂದ್ ಸಿಂಗ್ ಇಂತಹದ್ದೇ ಖಾತೆ ಬೇಕು ಅಂತ ಪಟ್ಟು ಹಿಡಿದಿರುವುದು ವೈಯಕ್ತಿಕ ವಿಚಾರ, ಅವರು ನನ್ನ ಆತ್ಮಿಯ ಸ್ನೇಹಿತ, ಅವರಿಗೆ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸಬಲ್ಲರು" ಎಂದರು.
"ಯಾವ ಖಾತೆ ಕೊಡುವುದು, ಬಿಡುವುದು ಅವರ ಪಕ್ಷಕ್ಕೆ ಬಿಟ್ಟಂತ ವಿಷಯ, ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸವಲ್ಲಿ ಯಶಸ್ವಿಯಾಗಿ ಕೆಲಸ ಮಾಡಬಹುದಾಗಿತ್ತು. ಆದರೆ ಅವೆಲ್ಲ ಮಾಡುವುದಕ್ಕೆ ಸಮಯ ಎಲ್ಲಿ?. ಅಧಿಕಾರಕ್ಕಾಗಿ ಕಿತ್ತಾಡುವುದರಲ್ಲಿ ಕಾಲ ಹರಣ ಮಾಡುತ್ತಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಕೋವಿಡ್ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಕನಿಷ್ಠ ಆದರೂ ಸಹಾಯ ಮಾಡಬಹುದಿತ್ತು. ಆ ಕೆಲಸ ಮಾಡಿಲ್ಲ ಅವರೂ ಜನರಿಗೆ ಸ್ಪಂದನೆ ಕೂಡ ಮಾಡುತ್ತಿಲ್ಲ. ಇಡೀ ರಾಜ್ಯದಲ್ಲಿ ಇಂಹತ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ರಾಜ್ಯದ ಜನತೆಯ ಜೊತೆಗೆ ಇದ್ದೇವೆ" ಎಂದು ಸಂತೋಷ್ ಲಾಡ್ ಹೇಳಿದರು.
"ಜನರು ರಾಜಕೀಯವಾಗಿ ಪ್ರಜ್ಞಾವಂತರಾಗುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಏನೆಲ್ಲ ಭ್ರಷ್ಟಾಚಾರ ಮಾಡಿದ್ದಾರೆ. ಜನಪರ ಆಡಳಿತ ನೀಡದೇ ಇರುವುದನ್ನು ನೋಡಿದ್ದಾರೆ. ಹಾಗಾಗಿ ಜನ ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಕೈಯನ್ನು ಜನ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ" ಎಂದು ಸಂತೋಷ್ ಲಾಡ್ ತಿಳಿಸಿದರು.
"ಬಿಜೆಪಿ ಸರ್ಕಾರ ಸಾಧನೆಗಳನ್ನು ಕೇವಲ ಪೇಪರ್ ಡಾಕ್ಯುಮೆಂಟ್ ಗಳಲ್ಲಿ ಮಾತ್ರ ಮಾಡಿದ್ದಾರೆ. ಅವು ಯಾವುವೂ ಸಹ ಜನರಿಗೆ ತಲುಪಿಲ್ಲ. ವಿಜಯನಗರ ಜಿಲ್ಲೆ ಅಂತ ಘೋಷಣೆ ಮಾಡಿದ್ದಾರೆ. ಆದರೆ ಒಬ್ಬ ವಿಶೇಷ ಜಿಲ್ಲಾಧಿಕಾರಿ ಹೊರತು ಪಡಿಸಿದರೆ ಯಾವ ಅಭಿವೃದ್ಧಿ ಕೆಲಸಗಳು ನಡೆದಿಲ್ಲ" ಎಂದು ದೂರಿದರು.
ವಲಸೆ ಹೋಗಿದ್ದ ನಾಯಕರುಗಳನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಕರೆ ತರಲಾಗುತ್ತದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, "ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬರಲಿ, ನಮ್ಮ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬಂದರೆ ನಾವು ಸ್ವಾಗತ ಮಾಡುತ್ತೇವೆ" ಎಂದರು.
"ಬಾಂಬೆ ಬಾಯ್ಸ್ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಳ್ಳುವ ವಿಚಾರದಲ್ಲಿ ನಮ್ಮ ಹೈಕಮಾಂಡ್ ತಿರ್ಮಾನ ಕೈಗೊಳ್ಳುತ್ತದೆ"ಎಂದು ಸಂತೋಷ್ ಲಾಡ್ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸಂಡೂರು ಶಾಸಕ ತುಕರಾಮ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ. ವಿ ಶಿವಯೋಗಿ, ಕೆಪಿಸಿಸಿ ಸದಸ್ಯ ಕುರಿಶಿವಮೂರ್ತಿ, ಗುಜ್ಜಲ್ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications